ಮೂಲಪ್ರಣವವನರಿದು ಮೂಲಮಂತ್ರದೊಳಗಾಡುತ್ತ,
ಮುಂದನರಿದು, ಹಿಂದ ಹರಿದು, ಸಂದು ಸಂಶಯವಿಲ್ಲದೆ,
ಸ್ವಯವ ನೋಡುತ್ತ, ಪರವ ಕೂಡುತ್ತ, ಶಬ್ದವ ಕೇಳುತ್ತ,
ನಿರ್ಧರವಾಗಿ ನಿರ್ಬುದ್ಧಿಯಲ್ಲಿ ನಿರಾಳವನೊಡಗೂಡಿ,
ನಿಜದಲ್ಲಿ ಆನಂದಾಮೃತವ ಆರೋಗಣೆಯ ಮಾಡುವ ಪರಿಯೆಂತೆಂದಡೆ;
ಬೇಯದ ಬೆಂಕಿಯಲಿ ಬೆಂದು, ಕಾಯದ ಅಗ್ಗವಣಿಯಲಿ ಅಡಿಗೆಯ ಮಾಡಿ,
ಕಂದಲೊಡೆದು ಒಂದಾಗಿ ಉಂಡು, ಮಂಡೆಯಲ್ಲಿ ನಿಂದು,
ಮಡದಿಯ ಸಂಗವ ಮಾಡಿ, ಮಾರುತನ ನಿಲಿಸಿ,
ಮದನನ ಮರ್ದಿಸಿ, ನಿರ್ಧರವಾಗಿ ನಿಂದ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ
ನೋಡಾ.