ಕುಲಛಲಕ್ಕೆ ಹೋರಿ ಆಡುವರೆಲ್ಲ ಶಿವಭಕ್ತರೆ ?
ಶಿವಭಕ್ತರಲ್ಲ ; ಅವರು ಕುಲದ ಪಾತಕರು.
ಅವರಿಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕ-ಪ್ರಸಾದವಿಲ್ಲ, ವಿಭೂತಿ-ರುದ್ರಾಕ್ಷಿಯಿಲ್ಲ,
ಓಂ ನಮಃ ಶಿವಾಯವೆಂಬ ಮಂತ್ರವಿಲ್ಲ.
ಇಂತೀ ಕುಲ ಛಲಂಗಳ ಬಿಟ್ಟು, ನಿರ್ಮಲಸ್ವರೂಪನಾಗಿ,
ಗುರುಕಾರುಣ್ಯದಿಂದ ಜ್ಞಾನಸಂಬಂಧಿಯಾಗಿ,
ಅಷ್ಟಾವರಣವನಾಚರಿಸಬಲ್ಲಾತನೆ ಭಕ್ತನೆಂಬೆನಯ್ಯ,ಮಹೇಶ್ವರನೆಂಬೆನಯ್ಯ,
ಪ್ರಸಾದಿಯೆಂಬೆನಯ್ಯ, ಪ್ರಾಣಲಿಂಗಿಯೆಂಬೆನಯ್ಯ,
ಶರಣನೆಂಬೆನಯ್ಯ, ಐಕ್ಯನೆಂಬೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.