ಹಾವಡಿಗನು ಮೂಕೊರತಿಯು: ತನ್ನ ಕೈಯಲ್ಲಿ ಹಾವು, ಮಗನ ಮದುವೆಗೆ ಶಕುನವ ನೋಡಹೋಹಾಗ ಇದಿರಲೊಬ್ಬ ಮೂಕೊರತಿಯ ಹಾವಡಿಗನ ಕಂಡು, ಶಕುನ ಹೊಲ್ಲೆಂಬ ಚದುರನ ನೋಡಾ. ತನ್ನ ಸತಿ ಮೂಕೊರತಿ, ತನ್ನ ಕೈಯಲ್ಲಿ ಹಾವು, ತಾನು ಮೂಕೊರೆಯ. ತನ್ನ ಬ್ಥಿನ್ನವನರಿಯದೆ ಅನ್ಯರನೆಂಬ ಕುನ್ನಿಯನೇನೆಂಬೆ ಕೂಡಲಸಂಗಮದೇವಾ 105
ಹಸಿವು, ತೃಷೆ, ನಿದ್ರೆ, ವಿಷಯಂಗಳ ಮರೆದೆ, ನೀವು ಕಾರಣ ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳ ಮರೆದೆ, ನೀವು ಕಾರಣ ! ಪಂಚೇಂದ್ರಿಯ, ಸಪ್ತಧಾತು, ಅಷ್ಟಮದಂಗಳ ಮರೆದೆ. ನೀವು ಕಾರಣ ! ಕೂಡಲಸಂಗಮದೇವಯ್ಯಾ, ನಿಮ್ಮ ಶರಣರಿಗೆ ಅಪ್ಯಾಯನವಾದಡೆ ಎನಗೆ ತೃಪ್ತಿಯಾಯಿತ್ತು.
ಹೊಲೆಯ ಹೊಲಬಿಗನಾದಡೆ, ಅವನ ಹೊರೆಯಲಿಪ್ಪುದು ಲೇಸು ಕಂಡಯ್ಯಾ. ಹೊಲಬುಗೆಡದೆ ಲಿಂಗ ಶರಣೆನ್ನಿರಯ್ಯಾ. ಹೊಲಬುಗೆಡಬೇಡ, ಶಿವ ಶರಣೆನ್ನಿರಯ್ಯಾ. ನಮ್ಮ ಕೂಡಲಸಂಗನ ಮಹಾಮನೆಯಲು ಮಾದಾರ ಚೆನ್ನಯ್ಯ ಹೊಲಬಿಗನಯ್ಯಾ. 135
ಹೊಲೆಯೊಳಗೆ ಹುಟ್ಟಿ ಕುಲವನರಸುವೆ, ಎಲವೊ, ಮಾತಂಗಿಯ ಮಗ ನೀನು. ಸತ್ತುದನೆಳೆವನೆತ್ತಳ ಹೊಲೆಯ ಹೊತ್ತು ತಂದು ನೀವು ಕೊಲುವಿರಿ. ಶಾಸ್ತ್ರವೆಂಬುದು ಹೋತಿಂಗೆ ಮಾರಿ, ವೇದವೆಂಬುದು ನಿಮಗೆ ತಿಳಿಯದು. ನಮ್ಮ ಕೂಡಲಸಂಗನ ಶರಣರು. ಕರ್ಮವಿರಹಿತರು, ಶರಣಸನ್ನಿಹಿತರು, ಅನುಪಮಚಾರಿತ್ರರು. ಅವರಿಗೆ ತೋರಲು ಪ್ರತಿಯಿಲ್ಲವೋ.