ನೊಸಲಿನಲ್ಲಿ ಮೂರು ಕಣ್ಣುಳ್ಳ ಪಶುಪತಿಯಾದಡೂ ಆಗಲಿ,
ಆದ್ಯರ ವಚನಂಗಳಲ್ಲಿ,
ಹೊನ್ನ ಹಿಡಿದವರು ಗುರುದ್ರೋಹಿಗಳು;
ಹೆಣ್ಣ ಹಿಡಿದವರು ಲಿಂಗದ್ರೋಹಿಗಳು;
ಮಣ್ಣ ಹಿಡಿದವರು ಜಂಗಮದ್ರೋಹಿಗಳು;
ಹೀಗೆಂದು ಸಾರುತ್ತವೆ ವೇದ.
ಹಿಡಿದ ಆಚರಣೆ ಅನುಸರಣೆಯಾಗಿ, ತ್ರಿವಿಧವ ಹಿಡಿದು,
ನಾನೆ ಬ್ರಹ್ಮವೆಂದು ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಗಳು
ಎಂಬ ಭವಕರ್ಮಿಗಳಿಗೆ ನರಕವೆ ಪ್ರಾಪ್ತಿ ನೋಡಾ !
ಲಿಂಗವಂತನೆಂಬೆನೆ ಜಂಗಮವೆಂಬೆನೆ ?
ಹಿಡಿದ ಆಚರಣೆ ಅನುಸರಣೆಯಾದ ಬಳಿಕ ಜಂಗಮವೆನಲಿಲ್ಲ.
ಜಗದಲ್ಲಿ ನಡೆವ ಜಂಗುಳಿಗಳು ಭವಭವದಲ್ಲಿ ಬಳಲುತಿಪ್ಪರು ಅಮುಗೇಶ್ವರಾ.