ಸುಳಿವ ಸುಳುಹು ಅಡಗಿತ್ತೆನಗೆ.
ಎನ್ನ ಕಂಗಳ ಕಾಮ ಕಳೆಯಿತ್ತು.
ಅರಿದೆನೆಂಬ ಮನ ಅಡಗಿದುದ ಕಂಡು
ನನ್ನ ನಾನೆ ತಿಳಿದು ನೋಡಿ,
ಕಟ್ಟಿದೆನು ಕಾಮನ ಮೇಲೆ ಬಿರಿದ.
ಮಾಯಾಯೋನಿಗಳಲ್ಲಿ ಹುಟ್ಟಿದರೆಲ್ಲ,
ನಿರ್ಮಾಯನೆಂಬ ಗಣೇಶ್ವರಗೆ ಸರಿಯಪ್ಪರೆ ?
ಬ್ರಹ್ಮ ವಿಷ್ಣು ರುದ್ರರೆಲ್ಲರು ಮಾಯಾಕೋಳಾಹಳನೆಂಬ ಪ್ರಭುವಿಂಗೆ
ಸರಿಯಲ್ಲವೆಂದು ಕಟ್ಟಿದೆ ಕೈದುವ.
ಸರಿಯೆಂದು ನುಡಿವವರ ಪರಿಪರಿಯಲಿ ಮೆಟ್ಟಿ ಸೀಳುವೆನು ಕಾಣಾ.
ಅಮುಗೇಶ್ವರಲಿಂಗಕ್ಕೆ ಅಧಿಕನಾದನಯ್ಯಾ ಪ್ರಭುದೇವರು.