ಅಯ್ಯಾ ಗುರುವೆಂಬರ್ಚಕನು ತಂದು,
ಎನಗಿಷ್ಟವ ಕಟ್ಟಲಿಕೆ,
ಹಂಗನೂಲ ಕೊರಳಲ್ಲಿ ಹಾಕಿ ಕಟ್ಟಿಕೋ ಎಂದನು.
ಅದು ಎನಗೊಡವೆಯಲ್ಲವೆಂದು ಕಂಠವ ಹಿಡಿದು,
ಲಿಖಿತವ ಲೇಖನವ ಮಾಡಿ ಮಾಡಿ ದಣಿದು,
ಹಂಗನೂಲ ಹರಿದು ಹಾಕಿದೆನು.
ಇಷ್ಟವನಿಲ್ಲಿಯೇ ಇಟ್ಟೆನು.
ಅಯ್ಯಾ ನಾ ಹಿಡಿದ ನೀಲಕಂಠನು
ಶಕ್ತಿ ಸಮೇತವ ಬಿಟ್ಟನು,
ಕಲ್ಯಾಣ ಹಾಳಾಯಿತ್ತು, ಭಂಡಾರ ಸೊರೆಹೋಯಿತ್ತು,
ನಿರ್ವಚನವಾಯಿತ್ತು .
ಶಾಂತ ಸಂತೋಷಿಯಾದ, ಅರಸರು ನಿರ್ಮಾಲ್ಯಕ್ಕೊಳಗಾದರು.
ಅಲೇಖ ನಾಶವಾಯಿತ್ತು, ಪತ್ರ ಹರಿಯಿತ್ತು,
ನಾದ ಶೂನ್ಯವಾಯಿತ್ತು
ಒಡೆಯ ಕಲ್ಲಾದ ಕಾರಣ, ಎನ್ನೈವರು ಸ್ತ್ರೀಯರು
ಉಳಲಾಟಗೊಂಡೇಳಲಾರದೆ ಹೋದರು ಕಾಣಾ, ಕಲ್ಲಿನಾಥಾ.