ಉಚಿತವ ಕಂಡು, ತತ್ಕಾಲವನರಿತು
ರಿತುಕಾಲಂಗಳಲ್ಲಿ ಭೇದಿಸಿ ವೇಧಿಸುವದು
ಮರ್ಕಟ ವಿಹಂಗ ಪಿಪೀಲಕ ಭೇದ.
ಕರ ಕಾಲು ಬಾಯಿಂದ ಕೊಲುವ ಜೀವದ ಹೊಲಬಿನಂತೆ
ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು
ಅನುಮಾನದಲ್ಲಿ ಅರಿತು ನಡೆವುದು ಲಕ್ಷಣಜ್ಞನ ಯುಕ್ತಿ.
ಆ ಯುಕ್ತಿಯಿಂದ ಭಕ್ತಿ ನೆಲೆಗೊಂಡು, ಆ ಭಕ್ತಿಯಿಂದ ಸತ್ಯ ನೆಲೆಗೊಂಡು
ಸತ್ಯದೊಡಲು ಲಿಂಗದಂಗವಾಗಿ ಇಪ್ಪಾತನೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ.