ಜೀವಾತ್ಮನಳಿದು ಪರಮಾತ್ಮನಾಗಬೇಕೆಂಬಲ್ಲಿ
ಆ ಪರಮಾತ್ಮನ ಪರವಶದಲ್ಲಿ ಬೆರೆಸಬೇಕೆಂಬುದು ಅದಾವಾತ್ಮ ?
ಸ್ಥೂಲ ಸೂಕ್ಷ್ಮ ಕಾರಣ ಇಂತೀ ತನುತ್ರಯಂಗಳಲ್ಲಿ
ಕೀಳ ಬಿಟ್ಟು ಮೇಲ ಬೆರಸಬೇಕೆಂಬುದು ಅದಾವಾತ್ಮ ?
ಹಿಂದೆ ಮಾಡಿದ ಕರ್ಮವ ಇಂದರಿದು
ಮುಂದಣ ಮುಕ್ತಿ ಎಂಬುದು ಅದಾವಾತ್ಮ ?
ತಿತ್ತಿಯಲ್ಲಿ ಹೊಕ್ಕ ವಾಯು ಒತ್ತಿದಡೆ ಹೋಗಿ
ಎತ್ತಿದಡೆ ತುಂಬಿ ಮತ್ತೆ ಇರಿಸಿದಡೆ ಸತ್ತಹಾಗೆಯಿಪ್ಪುದು ಅದಾವಾತ್ಮ ?
ಮೃತ ಘಟ, ಚೇತನ ಘಟಂಗಳಲ್ಲಿ ಹೊರಳಿ ಮರಳುವುದು ಅದಾವಾತ್ಮ ?
ಇಂತೀ ಗುಣದ ವಾಯುಧಾರಣದಿಂದ ಅಷ್ಟಾಂಗಯೋಗ ಕರ್ಮಂಗಳ
ಮಾಡುವ ಯೋಗಿಗಳೆಲ್ಲರೂ ಮುಕ್ತರಪ್ಪರೆ ?
ಭೂನಾಗ ಭೂಮಿಯೊಳಗಿದ್ದು ಉಸುರಿಂಗೆ ಉಬ್ಬಸವಿಲ್ಲದಂತೆ
ಜಲಚರ ಜಲದಲ್ಲಿದ್ದು ಆ ಜಲವ ನಾಸಿಕ ಬಾಯಿಗೆ ಹೊಗಲೀಸದಂತೆ
ನೇತ್ರ ಶ್ರೋತ್ರಂಗಳಲ್ಲಿ ಜಲವೆ ಮನೆಯಾಗಿ ಇಪ್ಪ ತೆರ.
ಆವಾವ ಜಾತಿಗೂ ಆ ವಿಷಯಗೋತ್ರ ಲಕ್ಷಣಭೇದ.
ಸಾಧಕ ಸಾಧನೆಗಳಿಂದ ಅಸಾಧ್ಯವ ಸಾಧಿಸಬಾರದು.
ಅಸಾಧ್ಯ ವೇದ್ಯವಾದವ, ಕರ್ಮಕಾಂಡಿಯಲ್ಲ
ತ್ರಿವಿಧಮಲಕ್ಕೆ ಸಲ್ಲ, ತಥ್ಯಮಿಥ್ಯವಿಲ್ಲ.
ಹೆಚ್ಚು ಕುಂದೆಂಬ ಶರೀರಕ್ಕೆ ಚಿತ್ತದ ಭಾರದವನಲ್ಲ.
ಸದ್ಭಕ್ತರ ಸದಮಲಯುಕ್ತರ ಸರ್ವವಿರಕ್ತರ
ಷಟ್ಸ್ಥಲಸಂಪನ್ನರ ಸರ್ವಾಂಗಲಿಂಗಿಗಳ
ಅಂಗದಲ್ಲಿ ನಿಜ ಹಿಂಗದಿಪ್ಪ ಆತ ನಿರಂಗ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.