ಭಕ್ತಿಸ್ಥಲ ವರ್ತುಳರೂಪಾಗಿಹುದು.
ಮಾಹೇಶ್ವರಸ್ಥಲ ಖಂಡಿಕಾವರಣವಾಗಿಹುದು.
ಪ್ರಸಾದಿಸ್ಥಲ ತ್ರಿರೇಖೆಯಾಗಿಹುದು.
ಪ್ರಾಣಲಿಂಗಿಸ್ಥಲ ಶಕ್ತಿನಾಭಿಸ್ವರೂಪವಾಗಿಹುದು.
ಶರಣಸ್ಥಲ ಪಂಚಸೂತ್ರಪ್ರಕಾರವ ಕೂಡಿಕೊಂಡು
ಪೀಠಿಕಾಸಂಬಂಧವಾಗಿ, ಗೋಳಕಾಕಾರಮೂರ್ತಿಯಾಗಿಹುದು.
ಐಕ್ಯಸ್ಥಲ ದಿಗ್ವಳಯಂಗಳಿಲ್ಲದೆ ಭೇದನಾಮಶೂನ್ಯವಾಗಿ
ತಿಳಿವೆಡೆಯಲ್ಲಿ ಉಂಟಾಗಿ, ತಿಳಿದ ಮತ್ತೆ ಇದಿರೆಡೆಯಿಲ್ಲವಾಗಿ
ಇಂತೀ ಪಂಚಬ್ರಹ್ಮಮೂರ್ತಿ ನೀವಾಗಿ
ಲೀಲೆಗೆ ಉಮಾಪತಿಯಾಗಿ, ಲೀಲೆ ನಿಂದಲ್ಲಿ ಸ್ವಯಂಭುವಾಗಿ
ಇಂತೀ ಐದರಲ್ಲಿ ಭೇದಿಸಿ ಆರರಲ್ಲಿ ವೇಧಿಸಿನಿಂದ
ನಿಜಸಂಬಂಧಸೂತ್ರ
ಆ ಭೇದನಿಂದಲ್ಲಿ ನಿರತಿಶಯ ಸ್ವಾನುಭಾವ.
ಉಭಯದ ಭಾವ ನೀನಾದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.