ಪರಬ್ರಹ್ಮವೆಂಬ ಲಿಂಗದಿಂದ ಭಾವಲಿಂಗ ಉದಯವಾಯಿತ್ತು. ಆ ಭಾವಲಿಂಗದಿಂದ ಪ್ರಾಣಲಿಂಗ ಉದಯವಾಯಿತ್ತು. ಆ ಪ್ರಾಣಲಿಂಗದಿಂದ ಇಷ್ಟಲಿಂಗ ಉದಯವಾಯಿತ್ತು. ಆ ಇಷ್ಟಲಿಂಗಕ್ಕೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಅರ್ಪಿಸಬಲ್ಲಾತನೆ ನಿಮ್ಮ ಸದ್ಭಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಪಂಚಮುಖದ ಸರ್ಪನ ತಲೆಯ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯದ ಪ್ರಭೆಯಲ್ಲಿ ನಾನು ನೀನೆಂಬುದ ಮರೆದು ಸ್ವಾನುಭಾವ ಸಿದ್ಧಾಂತವನಳವಟ್ಟು ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಪಂಚತತ್ವದ ಮೇಲೆ ನಿತ್ಯಪರತತ್ವವ ಕಂಡು ನಿರ್ಲೇಪಕನಾದ ಶರಣನು ಕಾಲನ ಬಾಧೆಗಳ ನೀಗಿ, ಸೀಮೆಯ ದಾಂಟಿ, ನಿಸ್ಸೀಮನಾಗಿರ್ದು, ಕೇವಲ ಸ್ವಯಂಜ್ಯೋತಿಯಲ್ಲಿ ಕೂಡಿ ತಾನು ತಾನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಪೃಥ್ವಿ ಅಪು ತೇಜ ವಾಯು ಆಕಾಶದಿಂದತ್ತತ್ತ ಮಹಾಲಿಂಗದ ಬೆಳಗು. ಆ ಬೆಳಗಿನೊಳಗೆ ನಾನು ನೀನೆಂಬುದ ಮರೆದು, ಅವಿರಳ ಸ್ವಾನುಭಾವಸಿದ್ಧಾಂತವನರಿತು, ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಪ್ರಥಮಕಾಲದಲ್ಲಿ ನಿರವಯನೆಂಬ ಸತಿಯಳಂಗದಲ್ಲಿ ಒಬ್ಬ ಬಾಲಕ ಹುಟ್ಟಿ ಮೂವತ್ತಾರು ಕೇರಿಯ ನೋಡಿ, ಒಂಬತ್ತು ಬಾಗಿಲ ಸುತ್ತಿ, ಕಡೆಯ ಬಾಗಿಲಲ್ಲಿ ನಿಂದು ತನ್ನ ಸುಳುವ ತಾನೇ ನುಂಗಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಐದು ಮನೆಯಲ್ಲಿ ಒಬ್ಬ ಸತಿಯಳು ನಿಂದು, ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ಅತ್ತತ್ತಲೆ ಪರಕೆಪರವಾಗಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮರೆಂಬ ಅಷ್ಟತನುವಿನ ಮೇಲೆ ದೃಷ್ಟಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ತನ್ನ ಮರೆದು ಮುಂದೆ ನಿಶ್ಚೈಸಬಲ್ಲಾತನೆ ನಿಮ್ಮ ಪ್ರಮಥನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
ಪ್ರಥಮ ಕಾಲದಲ್ಲಿ ಒಬ್ಬ ಶಿವಶರಣನಿಪ್ಪ ನೋಡಾ. ಆ ಶಿವಶರಣನ ಅಂತರಂಗದಲ್ಲಿ ಮೂವರು ಕಂಡಿಕಾರರು ಇಪ್ಪರು ನೋಡಾ. ಆರುಮಂದಿ ಪೂಜಾರಿಗಳು, ಆರುಲಿಂಗಾರ್ಚನೆಯ ಮಾಡುತಿಪ್ಪರು ನೋಡಾ. ಏಕೋಭಾಮಿನಿಯೆಂಬ ಸತಿಯಳು ನವರತ್ನದ ಹರಿವಾಣಂಗಳಲ್ಲಿ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ, ಓಂ ನಮೋ ಓಂ ನಮೋ ಓಂ ನಮೋ ಎಂದು ಬೆಳಗುತಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಪೂರ್ವದಲ್ಲಿ ಓಂಕಾರವೆಂಬ ಲಿಂಗದ ಸಂಗದಿಂದ ಪ್ರಣವವೆ ಆದಿಯಾಯಿತ್ತು ನೋಡಾ. ಆ ಆದಿಯ ಸಂಗದಿಂದ ಒಬ್ಬ ಶಿವನಾದ. ಆ ಶಿವನ ಸಂಗದಿಂದ ಈಶ್ವರನಾದ. ಆ ಈಶ್ವರನ ಸಂಗದಿಂದ ರುದ್ರನಾದ. ಆ ರುದ್ರನ ಸಂಗದಿಂದ ವಿಷ್ಣುವಾದ. ಆ ವಿಷ್ಣುವಿನ ಸಂಗದಿಂದ ಬ್ರಹ್ಮನಾದ. ಬ್ರಹ್ಮಂಗೆ ಸರಸ್ವತಿಯಾದಳು, ವಿಷ್ಣುವಿಂಗೆ ಲಕ್ಷ್ಮಿಯಾದಳು, ರುದ್ರಂಗೆ ಕ್ರಿಯಾಶಕ್ತಿಯಾದಳು, ಈಶ್ವರಂಗೆ ಸ್ವಯಂಭೂಶಕ್ತಿಯಾದಳು, ಸದಾಶಿವಂಗೆ ಜ್ಞಾನಶಕ್ತಿಯಾದಳು. ಈ ಐವರ ಸಂಗದಿಂದ ನರರು ಸುರರು ದೇವಾದಿದೇವರ್ಕಳು ಕಿನ್ನರಕಿಂಪುರುಷರು ಗರುಡಗಂಧರ್ವರು ಹುಟ್ಟಿದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಪ್ರಣವಪಂಚಾಕ್ಷರಿಯೆಂಬ ಕೊನೆಯ ಮೇಲೆ ಅಣಿಮಾಯಾಲಿಂಗವು ಸರ್ವ ಬ್ರಹ್ಮಾಂಡವ ಗರ್ಭೀಕರಿಸಿಕೊಂಡು ತನ್ನ ನಿಜವ ತಾನೇ ತೋರುತ್ತಿತ್ತು ನೋಡಾ ! ಆ ನಿಜವ ಈ ಲೋಕದವರು ಆರಾದಡೆಯು ಅರಿಯಬಲ್ಲರೇನಯ್ಯ ? ಬ್ರಹ್ಮ ವಿಷ್ಣು ರುದ್ರಾದಿಗಳಿಗೆ ಅಗೋಚರವೆನಿಸಿತ್ತು ನೋಡಾ. ಇದು ಕಾರಣ ಅಂಗಕರಣವನಳಿದು ಲಿಂಗಕಿರಣವಾದ ಶರಣನು ಆ ನೆನವನರಿಯಬಲ್ಲನಯ್ಯ; ಸರ್ವ ಬ್ರಹ್ಮಾಂಡವ ನೋಡಬಲ್ಲನಯ್ಯ; ಅಣಿಮಾಯಾಲಿಂಗವ ಕೂಡಬಲ್ಲನಯ್ಯ, ಝೇಂಕಾರ ನಿಜಲಿಂಗಪ್ರಭುವೆ, ನಿಮ್ಮ ಶಿವಶರಣನು.