ಯುಗಜುಗಂಗಳ ಅಳಿವು ಉಳಿವನರಿಯದೆ,
ಹಗಲಿರುಳೆಂಬವ ನೆನಹಿನಲೂ ಅರಿಯದೆ, ಲಿಂಗದಲ್ಲಿ ಪರವಶವಾಗಿರ್ದ
ಪರಮಪರಿಣಾಮಿಯನೇನೆಂದುಪಮಿಸುವೆನಯ್ಯಾ ?
ಆಹಾ ! ಎನ್ನ ಮುಕ್ತಿಯ ಮುಕುರದ ಇರವ ನೋಡಾ.
ಆಹಾ ! ಎನ್ನ ಸತ್ಯದಲ್ಲಿ ಸ್ವಾನುಭಾವದ ಕಳೆಯ ನೋಡಾ.
ಆಹಾ ! ಅಷ್ಟತನುಗಳ ಪಂಗನಳಿದು, ನಿಬ್ಬೆರಗಾಗಿ ನಿಂದ ಚಿತ್ಸುಖಿಯ ನೋಡಾ.
ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ,
ಪರಮಪ್ರಸಾದಿ ಮರುಳಶಂಕರದೇವರ ನಿಲವ
ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು, ಬದುಕಿದೆನು.