ಬಂಧನಂ ಪಾಪರೂಪಂ ಚ ನಿರ್ಬಂಧಃ ಪುಣ್ಯರೂಪಕಃ
ಸತ್ಯಜ್ಞಾನ ಸಂಬಂಧಶ್ಚ ತದ್ಯಥಾ ಶ್ರುಣು ಪಾರ್ವತಿ ||
ಎಂದಕಾರಣ, ಬಂಧನದೈಕ್ಯವ ಶಿವಶರಣರೊಪ್ಪರಾಗಿ.
ಅದೆಂತೆಂದಡೆ: ತೈಲ ಬತ್ತಿಯುಳ್ಳನ್ನಕ್ಕ ಜ್ಯೋತಿ ಬಯಲಾಗದು.
ಎಣ್ಣೆ ಬತ್ತಿ ತೀರಿದ ಮೇಲೆ ಗೃಹದೊಳಗಣ ಜ್ಯೋತಿ
ಉರಿಯಬಲ್ಲುದೆ ಹೇಳಿರಣ್ಣಾ ?
ಈ ದೃಷ್ಟಾಂತದಂತೆ, ದೇಹಿಗಳ ದೇಹಮಧ್ಯದಲ್ಲಿ
ಸಪ್ತಧಾತುಗಳುಳ್ಳ ಪರಿಯಂತರ
ಪಂಚಾಗ್ನಿಯಿದ್ದ ಜೀವರುಗಳು ಪ್ರಾಣತ್ಯಾಗವ ಮಾಡುವುದು.
ಹಾಗೆ ಶರಣನ ದೇಹಮಧ್ಯದಲ್ಲಿ ಚಿದಗ್ನಿಯಿದ್ದು,
ಪ್ರಾಣ ದಗ್ಧವ ಮಾಡಿ, ವಸ್ತುವಿನಲ್ಲಿ ಎಯ್ದಿಸುತ್ತಿರಲಾಗಿ,
ಆತನ ಅರಿವು ಮರವೆಗೆ ಕರ್ತರಾಗಿಪ್ಪ ತೆತ್ತಿಗತ್ತ್ವವಲ್ಲದೆ
ತಾವು ಕಳಂಕರಾಗಿ, ಆತನ ವಿಕಳತೆಯಿಂದ ಐಕ್ಯವ ಮಾಡಿದಡೆ,
ಆ ದ್ರೋಹ ತಮಗಲ್ಲದೆ ಆತಂಗಿಲ್ಲ.
ಇಂತೀ ವಿವೇಕವುಳ್ಳ ವೀರಮಾಹೇಶ್ವರರ ಐಘಟದೂರ ರಾಮಲಿಂಗವೆಂಬೆ.
ಅಲ್ಲದಿರ್ದಡೆ, ನೀ ಸಾಕ್ಷಿಯಾಗಿ ಛೀ ಎಂಬೆನು.