ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶೀಲವಂತರೆಲ್ಲ ಶೂಲದ ಹೆಣನೆಂಬೆ. ಕ್ರಿಯಸ್ಥರೆಲ್ಲ ಬೇಡಿಬಂದಿಕಾರರೆಂಬೆ. ವ್ರತಸ್ಥರೆಲ್ಲ ಢಾಲಿಬಂದಿಕಾರರೆಂಬೆ. ನೇಮಸ್ಥರೆಲ್ಲ ಆಳುಗಳೆಂಬೆ. ಲಿಂಗ ಇದ್ದವರಿಗೆ ಹೊಲೆಯರೆಂಬೆ. ಲಿಂಗವಿಲ್ಲದವರಿಗೆ ಉತ್ತಮರೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ಈ ಮಾಯಾಸಂಸಾರಯುಕ್ತವಾದ ದೇಹದ ಸುಖ ಹೇಳಲಂಜುವೆ. ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಈ ದೇಹದ ವಿಸ್ತಾರ ಪೇಳ್ವೆ, ಎಲೆ ಮರುಳ ಮಾನವರಿರಾ, ಲಾಲಿಸಿ ಕೇಳಿರಿ, ಎಲುವಿನ ಕಂಬ, ಎಲುವಿನ ತೊಲೆಗಳು, ಸಂದೆಲವುಗಳೆ ಬಿಗಿ ಮೊಳೆಗಳು, ಕರುಳಜಾಳಿಗೆ ಬಿಗಿಜಂತಿಗಳು, ಬರುಕಿ ಎಲವುಗಳೆ ಜಂತಿಗಳು, ಬೆರಳೆಲವುಗಳೆ ಚಿಲಿಕೆಗಳು. ಇಂತೀ ಗೃಹಕ್ಕೆ ಮಾಂಸದ ಮೇಲುಮುದ್ದೆಗಳು, ರಕ್ತದ ಸಾರಣೆಗಳು, ಮಜ್ಜದ ಮಡುಗಳು, ಕೀವಿನ ಕುಣಿಗಳು, ಪಿತ್ತದ ಕೊಂಡಗಳು, ಶೋಣಿತದ ಕಾವಲಿಗಳು, ಮೂತ್ರದ ಹಳ್ಳಗಳು, ಅಮೇಧ್ಯದ ಹುತ್ತಗಳು, ಹುಳುವಿನ ಡೋಣಿಗಳು, ಜಂತಿನ ಬಣವೆಗಳು-ಇಂತಪ್ಪ ಮನಗೆ ಎಂಟು ಗವಾಕ್ಷಗಳು. ಬಾಯಿ ಎಂಬುದೊಂದು ದೊಡ್ಡ ದರವಾಜು. ಇಂತೀ ದುರಾಚಾರಯುಕ್ತವಾದ ದೇಹವೆಂಬ ಗೃಹಕ್ಕೆ ಮೂವರು ಕರ್ತೃಗಳಾಗಿಹರು. ಅವರು ಆರಾರೆಂದಡೆ: ಹೊನ್ನೊಂದು ಭೂತ, ಹೆಣ್ಣೊಂದು ಭೂತ, ಮಣ್ಣೊಂದು ಭೂತ. ಇಂತೀ ತ್ರಿವಿಧ ಭೂತಸ್ವರೂಪರಾದ ಬ್ರಹ್ಮ ವಿಷ್ಣು ರುದ್ರರೆಂಬ ತ್ರಿವಿಧದೇವತೆಗಳು. ಅದೆಂತೆಂದಡೆ: ಹೊನ್ನು ರುದ್ರನಹಂಗು, ಹೆಣ್ಣು ವಿಷ್ಣುವಿನಹಂಗು, ಮಣ್ಣು ಬ್ರಹ್ಮನಹಂಗು, ಇಂತಪ್ಪ ತ್ರಿಮೂರ್ತಿಗಳ ಹಂಗಿನಿಂದಾದ ದೇಹವು ಮಿಥೆಯೆಂದು ತಿಳಿದು ವಿಸರ್ಜಿಸಲರಿಯದೆ, ಆ ಅನಿತ್ಯದೇಹದ ಸುಖವನು ಮೆಚ್ಚಿ ಮರುಳಾಗಿ, ಬಿಡಲಾರದೆ, ಈ ಹೇಸಿಕಿ ಹೊಲೆಸಂಸಾರದಲ್ಲಿ ಶಿಲ್ಕಿ ಮಲತ್ರಯದಾಶೆಗೆ ಹೊಡದಾಡಿ ಹೊತ್ತುಗಳೆದು ಸತ್ತುಹೋಗುವ ಕತ್ತೆಗಳಿಗಿನ್ನೆತ್ತಣ ಮುಕ್ತಿ ಹೇಳಾ ! ಮುಂದೆ ಹೊಲೆಮಾದಿಗರ ಮನೆಯಲ್ಲಿ ಶುನಿ ಶೂಕರ ಕುಕ್ಕುಟನ ಬಸುರಲ್ಲಿ ಹುಟ್ಟಿಸದೆ ಬಿಡನೆಂದಾತ ನಿಮ್ಮ ಶರಣ ವೀರಾದ್ಥಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ಈ ಲೋಕದ ಮಾನವರನೇನೆಂಬೆನಯ್ಯಾ. ಅದೆಂತೆಂದಡೆ: ನಾವು ಗುರುಗಳು, ನಾವು ಲಿಂಗಾಂಗಿಗಳು, ನಾವು ಜಂಗಮಲಿಂಗಿಗಳು, ನಾವು ಸದಾಚಾರಸದ್ಭಕ್ತರು ಎಂಬರಯ್ಯ. ಇಂತಿವರ ನಡತೆ ಆಚರಣೆಯೆಂತಾಯಿತೆಂದಡೆ: ಒಬ್ಬಾನೊಬ್ಬ ಜಾತಿಹಾಸ್ಯಗಾರನು ವೇಷವ ಧರಿಸಿಕೊಂಡು ಪುರಜನರ ಮೆಚ್ಚಿಸಿ, ತನ್ನ ಒಡಲಹೊರವಂತೆ, ವಿಭೂತಿ ರುದ್ರಾಕ್ಷಿ ಕಾವಿ ಕಾಷಾಂಬರ ಮುಂತಾಗಿ ವೇಷವ ಧರಿಸಿ, ಗುರು-ಹಿರಿಯರು ಜಂಗಮಲಿಂಗಿಗಳೆಂದು ನಾಮವ ತಾಳಿ, ಭಕ್ತರಿಗೆ ಸದಾಚಾರಮಾರ್ಗವ ಹೇಳೇವು, ಸದಮಲದ ಬೆಳಗ ತೋರೇವು ಎಂದು ಧನಿಕರಿದ್ದೆಡೆಗೆ ಬಂದು, ನಿಮಗೆ ಉಪದೇಶವ ಹೇಳಿ, ಲಿಂಗಾಂಗಸಮರಸವ ತೋರಿ, ಮಾಂಸಪಿಂಡವಳಿದು ಮಂತ್ರಪಿಂಡವ ಮಾಡೇವು ಎಂದು ಹೇಳಿ, ಆ ಭಕ್ತರ ಕೈಯಲ್ಲಿ ಅನ್ನ ಹಚ್ಚಡ ಹೊನ್ನು ವಸ್ತ್ರವ ತೆಗೆದುಕೊಂಡು ಆ ಜಾತಿಕಾರನ ಹಾಗೆ ಇವರು ತಮ್ಮ ಉದರಾಗ್ನಿ ಅಡಗಿಸಿಕೊಂಬುವರಲ್ಲದೆ ಇಂತಪ್ಪ ಗುರು-ಶಿಷ್ಯರ, ದೇವ-ಭಕ್ತರೆಂಬುಭಯರ ಆಚರಣೆಯೆಂತಾಯಿತ್ತೆಂದೊಡೆ- ಹಂದಿಯ ಬಾಯೊಳಗಿನ ತುತ್ತ ನಾಯಿ ಬಂದು ಕಚ್ಚಿದಂತೆ. ಅದೆಂತೆಂದೊಡೆ: ಜೀವನಬುದ್ಭಿಯುಳ್ಳ ಗುರುವೆಂದಾತ ಹಂದಿ, ಕರಣಬುದ್ಧಿಯುಳ್ಳ ಶಿಷ್ಯನೆಂಬಾತ ನಾಯಿ. ಇಂತಪ್ಪ ಗುರು-ಶಿಷ್ಯರ ಸಮ್ಮೇಲನವು ಹುಟ್ಟುಗುರುಡನ ಕೈಯ ಕಟ್ಟಿ ಲೊಟ್ಟಿಗಣ್ಣವ ಪಿಡಿದು ಕಾಣದೆ ಕಮ್ಮರಿಬಿದ್ದಂತಾಯಿತಯ್ಯ. ಅದೇನು ಕಾರಣವೆಂದಡೆ, ಗುರುವಿನಂತ ಶಿಷ್ಯನರಿಯ, ಶಿಷ್ಯನಂತ ಗುರುವರಿಯ, ಜಂಗಮನಂತ ಭಕ್ತನರಿಯ, ಭಕ್ತನಂತ ಜಂಗಮವರಿಯದ ಕಾರಣ. ಉಪಾದ್ಥಿಯುಳ್ಳವರು ಗುರುವಲ್ಲ ಶಿಷ್ಯರಲ್ಲ. ಉಪಾದ್ಥಿಯುಳ್ಳವರಲ್ಲಿ ಉಪದೇಶವ ಹಡಿಯಬೇಕೆಂಬವರ, ಉಪಾದ್ಥಿಯುಳ್ಳವರಿಗೆ ಉಪದೇಶವ ಹೇಳಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಸೂರ್ಯಚಂದ್ರರು ಅಳಿದುಹೋಗುವ ಪರಿಯಂತರವು ಹಂದಿ ನಾಯಿಯ ನರಕದಲ್ಲಿಕ್ಕದೆ ಬಿಡನೆಂದಾತ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿಶುವಿನ ಗರ್ಭದೊಳಗೆ ಈರೇಳು ಭುವನಂಗಳಿರ್ಪವು. ಆ ಭುವನಂಗಳನೆಲ್ಲ ಒಂದು ನಕ್ರ ನುಂಗಿರ್ಪುದು. ಆ ನಕ್ರನ ತಲೆಯೊಳಗೆ ಒಂದು ಬೆಲೆಯಿಲ್ಲದ ರತ್ನ ಇರ್ಪುದು. ಆ ರತ್ನಕ್ಕೆ ಇಬ್ಬರು ಹೆಣಗಾಡುತ್ತಿರ್ಪರು ನೋಡಾ! ಹೆಳವ ನಡದ, ಅಂಧಕ ಕಂಡ, ಕೈಯಿಲ್ಲದವ ಪಿಡಿದುದ ಕಂಡು ನಾ ಬೆರಗಾದೆನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶುಕ್ಲಶೋಣಿತಾತ್ಮಸಂಬಂಧವಾದ ಮಾತಾ ಪಿತರುಗಳ ಕಾಮವಿಕಾರದಿಂದ ಪುಟ್ಟಿದ ಪಿಂಡಕ್ಕೆ, ಅಂಗೈಯೊಳಗೆ ಇರುವ ಪರಿಯಂತರವಾಗಿ ಜಡೆಯ ಕೂಸೆಂಬುವರು. ಅಂಬೆಗಾಲಲಿ ನಡೆಯುವಾಗ ಹುಡುಗನೆಂಬುವರು. ಎದ್ದು ಕಾಲಲಿ ನಡೆಯುವಾಗ ಪೋರನೆಂಬುವರು ಒಳ ಹೊರಗೆ ಓಡಾಡುವಾಗ ಹೆಸರುಗೊಂಡು ಬಾರಲೇ ಹೋಗಲೆಯೆಂಬುವರು. ಷೋಡಶವರುಷಕ್ಕೆ ತಮ್ಮಾ ಅಪ್ಪಾ ಎಂದು ಕರೆವರು. ಪಂಚವಿಂಶತಿವರುಷಕ್ಕೆ ಅಣ್ಣಾ ಅಪ್ಪಾ ಎಂದು ಕರೆವರು. ಮೂವತ್ತುವರುಷದಿಂ ಐವತ್ತುವರುಷತನಕ ಅಪ್ಪನವರು ಎಂದು ಕರೆವರು, ನೆರೆಯೊಡೆದ ಮೇಲೆ ಹಿರಿಯರೆಂಬುವರು. ಹಲ್ಲುಬಿದ್ದ ಮೇಲೆ ಮುದುಕನೆಂಬುವರು. ಬೆನ್ನುಬಾಗಿ ಕಣ್ಣು ಒಳನಟ್ಟು ಗೂಡುಗಟ್ಟಿ ಗೂರಿಗೂರಿ ಮುಕುಳಿ ನೆಲಕ್ಕೆಹತ್ತಲು ಮುದೋಡ್ಯಾ ಎಂಬುವರು. ಇಂತೀ ನಾಮಂಗಳು ಆತ್ಮಂಗೆ ದೇಹಸಂಗದಿಂದ ಪುಟ್ಟಿದವಲ್ಲದೆ ಆ ದೇಹದೊಳಗಿರುವ ಆತ್ಮನು ಕೂಸಲ್ಲ, ಪೋರನಲ್ಲ, ಹಿರಿಯನಲ್ಲ, ಮುದುಕನಲ್ಲ. ಈ ಭೇದವ ನಿಮ್ಮ ಶರಣರು ಬಲ್ಲರಲ್ಲದೆ ಈ ಲೋಕದ ಗಾದಿಮನುಜರೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶರಣನಾದೊಡೆ ಅಚ್ಚೊತ್ತಿದ ಅರಿವಿಯಂತಿರಬೇಕು ಲಿಂಗದಲ್ಲಿ. ಶರಣನಾದೊಡೆ ಮುರಿದ ಬಂಗಾರ ಬೆಳ್ಳಾರದಲ್ಲಿ ಬೆಚ್ಚಂತೆ ಇರಬೇಕು ಲಿಂಗದಲ್ಲಿ. ಶರಣನಾದೊಡೆ ಪುಷ್ಪ-ಪರಿಮಳದಂತೆ, ಪ್ರಭೆ-ಪಾಷಾಣದಂತೆ, ಜ್ಯೋತಿ-ಪ್ರಕಾಶದಂತೆ ಇರಬೇಕು ಲಿಂಗದಲ್ಲಿ. ಶರಣನಾದೊಡೆ ಸೂರ್ಯನ ಕಿರಣದಂತೆ, ಚಂದ್ರನ ಕಾಂತಿಯಂತೆ, ಗಾಳಿ-ಗಂಧದಂತೆ, ಜಾಗಟಿ-ನಾದದಂತೆ ಇರಬೇಕು ಲಿಂಗದಲ್ಲಿ. ಇಷ್ಟುಳ್ಳಾತನೇ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ನಾವು ಗುರುಗಳು, ನಾವು ಜಂಗಮಲಿಂಗಪ್ರೇಮಿಗಳು, ನಾವು ಪಟ್ಟದಯ್ಯಗಳು, ನಾವು ಚರಂತಿಯ ಹಿರಿಯರು, ನಾವು ಸದಾಚಾರ ಸತ್ಯಸದ್ಭಕ್ತರೆಂದು ಬೊಗಳುತ್ತಿಪ್ಪಿರಿ. ಅದೆಲ್ಲಿಯದೊ ಸದಾಚಾರ? ಮಣ್ಣುಹಿಡಿದವಂಗೆ ಗುರುವಿಲ್ಲ, ಹೆಣ್ಣುಹಿಡಿದವಂಗೆ ಲಿಂಗವಿಲ್ಲ, ಹೊನ್ನುಹಿಡಿದವಂಗೆ ಜಂಗಮವಿಲ್ಲ. ಇಂತೀ ತ್ರಿವಿಧಮಲವ ಕಚ್ಚಿದ ಶೂಕರ ಶುನಿಗಳಿಗೆ ತೀರ್ಥಪ್ರಸಾದ ಅದೆಲ್ಲಿಯದೋ? ಇಲ್ಲವಾಗಿ, ಅಷ್ಟಾವರಣವು ಇಲ್ಲ. ಇಂತಪ್ಪ ಪಂಚಮಹಾಪಾತಕರು ನಾವು ಮೋಕ್ಷವ ಹಡೆಯಬೇಕೆಂದು ಗುರು-ಲಿಂಗ-ಜಂಗಮವ ತಮ್ಮಂಗದಿಂದಿದಿರಿಟ್ಟು ಪೂಜೋಪಚಾರವ ಮಾಡಿ, ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚರ್ತುವಿಧ ಖಂಡಿತಫಲಪದವ ಪಡೆದು, ಅನುಭವಿಸಿ ಕಡೆಯಲ್ಲಿ ಎಂಬತ್ತುನಾಲ್ಕುಲಕ್ಷದ ಭವಮಾಲೆಯಲ್ಲಿ ಬಪ್ಪುದು ತಪ್ಪುದು. ಇಂತಪ್ಪ ವಿಚಾರವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿ ಸಕಲ ಪ್ರಪಂಚವೆಲ್ಲವನು ನಿವೃತ್ತಿಯ ಮಾಡಿ ದ್ವೈತಾದ್ವೈತವ ನಷ್ಟವ ಮಾಡಿ, ಸಕಲ ಸಂಸಾರ ವ್ಯಾಪರದ ವ್ಯಾಕುಲಚಿಂತನೆಯ ಬಿಟ್ಟು, ನಿಶ್ಚಿಂತನಾಗಿ ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾದ್ಥಿಸಬೇಕಲ್ಲದೆ ಇದನರಿಯದೆ ತನು-ಮನ-ಧನದ ಪ್ರಕೃತಿಯಲ್ಲಿ ಹರಿದಾಡಿ ಮಾತಾಪಿತರು, ಸತಿಸುತರು, ಸ್ನೇಹಿತರು, ಬಾಂಧವರು ಎನ್ನವರು ಎಂದು ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ತಿಂದು ಸಂಸಾರ ರಸೋದಕವೆಂಬ ನೀರು ಕುಡಿದು ಹಾಳಕೇರಿಗೆ ಹಂದಿ ಜಪಯಿಟ್ಟ ಹಾಂಗೆ ಈ ಸಂಸಾರವೆಂಬ ಹಾಳಕೇರಿಗೆ ಜೀವನೆಂಬ ಹಂದಿ ಮೆಚ್ಚಿ ಮರುಳಾಗಿ ಹೊಡೆದಾಡಿ ಹೊತ್ತುಗಳೆದು ಸತ್ತುಹೋಗುವ ಹೇಸಿ ಮೂಳ ಹೊಲೆಮಾದಿಗರಿಗೆ ಶಿವಪಥವು ಎಂದಿಗೂ ಸಾಧ್ಯವಿಲ್ಲವೆಂದಾತ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶರಣನ ನಿಲವು ಜ್ಯೋತಿಯಂತೆ, ಶರಣನ ನಿಲವು ಚಂದ್ರನಂತೆ, ಶರಣನ ನಿಲವು ಸೂರ್ಯನಂತೆ, ಶರಣನ ನಿಲವು ಮಾಣಿಕದ ದೀಪ್ತಿಯಂತೆ, ಶರಣನ ನಿಲವು ಅಗ್ನಿಯ ಕಾಂತಿಯಂತೆ, ಶರಣನ ನಿಲವು ನವರತ್ನಯುಕ್ತವಾದ ಮೌಕ್ತಿಕದ ಮಾಲೆಯಂತೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ಮತ್ತೊಂದು ಪರಿಯ ಪೇಳ್ವೆ. ಅದೆಂತೆಂದಡೆ: ಈ ಲೋಕದೊಳಗೆ ಗುರುವೆಂಬಾತನು ಭಕ್ತರಿಗೆ ದೀಕ್ಷೆಯ ಮಾಡಿ ಪೂರ್ವಜನ್ಮವಳಿದು ಪುನರ್ಜಾತನ ಮಾಡಿದೆವೆಂಬರು. ಜಂಗಮಲಿಂಗಿಗಳಿಗೆ ಚರಂತಿಹಿರಿಯರು ಗುರುವೆಂಬಾತನು ಉಭಯರು ಕೂಡಿ, ಅಯ್ಯತನ ಮಾಡಿದೆವು ಎಂಬರು. ಅವರೇನು ಪೂರ್ವದಲ್ಲಿ ಕಪ್ಪಾಗಿದ್ದರೆ ? ಈಗೇನು ಕೆಂಪಗಾದರೆ ? ಅವರೇನು ಪೂರ್ವದಲ್ಲಿ ಬಿಳುಪಾಗಿದ್ದರೆ ? ಈಗೇನು ಕಪ್ಪಾದರೆ ? ಎಲಾ ದಡ್ಡಪ್ರಾಣಿಗಳಿರಾ, ಇದೇನು ವೀರಶೈವಮಾರ್ಗವಲ್ಲ; ಇದು ಶೈವಮಾರ್ಗ. ಇನ್ನು ವೀರಶೈವಮಾರ್ಗದಾಚಾರವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆರೂರವರ ಉಲುಹ ಮಾಣಿಸಿ, ಮೂರೂರವರ ಮೂಲಿಗೆ ಹಾಕಿ, ಬೇರೊಂದೂರವರ ತೋರಬಲ್ಲರೆ ವೀರಶೈವರೆಂಬೆ. ಆರು ಮಂದಿಯನಟ್ಟಿ, ಮೂರು ಮಂದಿಯ ಕುಟ್ಟಿ, ಬಟ್ಟಬಯಲಿನ ಘಟ್ಟಿಯ ತೋರಬಲ್ಲರೆ ವೀರಶೈವರೆಂಬೆ. ಆರು ಬಟ್ಟೆಯನೇ ಮೆಟ್ಟಿ, ಮೂರು ಬಟ್ಟೆಯನೇ ದಾಂಟಿ, ಮೇಲುಬಟ್ಟೆಯಲ್ಲಿ ನಿಂದು ನಿಟಿಲಲೋಚನನ ತೋರಬಲ್ಲರೆ ವೀರಶೈವರೆಂಬೆ. ಆರು ಬಾಗಿಲ ಹಾಕಿ, ಮೂರು ಬಾಗಿಲ ಮುಚ್ಚಿ, ಇನ್ನೊಂದು ಕದವ ತೆಗೆದು ತೋರಬಲ್ಲರೆ ವೀರಶೈವರೆಂಬೆ. ಇಂತೀ ಕ್ರಮವನರಿದು ದೀಕ್ಷೆಯ ಮಾಡಬಲ್ಲರೆ ಗುರುವೆಂಬೆ, ಇಲ್ಲದಿದ್ದರೆ ನರಗುರಿಗಳೆಂಬೆ. ಈ ಭೇದವ ತಿಳಿದು ಅಯ್ಯತನ ಮಾಡಬಲ್ಲರೆ ಚರಮೂರ್ತಿಗಳೆಂಬೆ. ಇಲ್ಲದಿದ್ದರೆ ಮತಿಭ್ರಷ್ಟ ಮರುಳಮಾನವರೆಂಬೆ. ಇಂತೀ ವಿಚಾರವನು ಅರಿಯದೆ ದೀಕ್ಷೆಯ ಮಾಡಬೇಕೆಂಬವರ, ಇಂತೀ ಭೇದವ ತಿಳಿಯದೆ ದೀಕ್ಷೆ ಪಡೆಯಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಅಘೋರನರಕದಲ್ಲಿಕ್ಕೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶರಣರು ಶರಣರು ಎಂದು ಹೆಸರಿಟ್ಟುಕೊಂಬಿರಿ, ಶರಣರ ಪರಿಯಾರು ಬಲ್ಲರಯ್ಯಾ ಎಂದಡೆ : ಕಾಲಿಲ್ಲದ ಹೆಳವ, ಕೈಯಿಲ್ಲದ ಮೋಟ, ಕಣ್ಣಿಲ್ಲದ ಕುರುಡ, ತಲೆಯಿಲ್ಲದ ಮಂಡೂಕ, ಈ ನಾಲ್ವರು ಬಲ್ಲರಲ್ಲದೆ, ಉಳಿದ ಭವಭಾರಿಗಳೆತ್ತ ಬಲ್ಲರಯ್ಯಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ಈ ಮರುಳಮಾನವರ ಮರುಳತನವ ನಾನೇನೆಂಬೆನಯ್ಯಾ. ಹೊನ್ನು ತನ್ನದೆಂಬರು, ಹೊನ್ನು ರುದ್ರನದು. ಹೆಣ್ಣು ತನ್ನದೆಂಬರು, ಹೆಣ್ಣು ವಿಷ್ಣುವಿನದು. ಮಣ್ಣು ತನ್ನದೆಂಬರು, ಮಣ್ಣು ಬ್ರಹ್ಮನದು. ಇಂತೀ ತ್ರಿವಿಧವು ನಿಮ್ಮವೆಂಬಿರಿ- ನಿಮ್ಮವು ಅಲ್ಲ ಕಾಣಿರೋ ಎಲಾ ದಡ್ಡ ಪ್ರಾಣಿಗಳಿರಾ. ಇದಕ್ಕೆ ದೃಷ್ಟಾಂತ: ಗಗನದಲ್ಲಿ ಚಂದ್ರೋದಯವಾಗಲು ಭೂಮಂಡಲದಲ್ಲಿ ಕ್ಷೀರಸಮುದ್ರ ಹೆಚ್ಚುವದು. ಹೆಚ್ಚಿದರೇನು ? ಆ ಚಂದ್ರನ ವ್ಯಾಳ್ಯಕ್ಕೆ ಸಮುದ್ರವಿಲ್ಲ; ಸಮುದ್ರದ ವ್ಯಾಳ್ಯಕ್ಕೆ ಚಂದ್ರನಿಲ್ಲ. ಮತ್ತೆ ಆಕಾಶದಲ್ಲಿ ಮೋಡ ಬಂದು ಸುಳಿಗಾಳಿ ಬೀಸಲು ಗಿರಿಯೊಳಗಿರ್ದ ನವಿಲು ತನ್ನ ಪಕ್ಕವ ಬಿಚ್ಚಿ ಹರುಷಾನಂದದಲ್ಲಿ ಆಡುವದು ; ಪ್ರೇಮದಿಂದಲಿ ಕುಣಿಯವದು. ಕುಣಿದರೇನು ? ಚಂಡವಾಯುವಿನಿಂದ ಆಕಾಶದೊಳಗಣ ಕಾರಮುಗಿಲು ಹಾರಿಹೋಹಾಗ ನವಿಲು ಅಡ್ಡಬಂದಿತ್ತೆ ? ಇಲ್ಲ. ಗಿರಿಯೊಳಗಣ ಮಯೂರನನ್ನು ವ್ಯಾಧನು ಬಂದು ಬಲಿಹಾಕಿ ಕೊಲ್ಲುವಾಗ ಆ ಮೋಡ ಅಡ್ಡಬಂದಿತ್ತೆ ? ಇಲ್ಲ. ಇದರ ಹಾಂಗೆ, ನಿಮಗೆ ಬಾಲಪ್ರಾಯದಲ್ಲಿ ಮಾತಾಪಿತರ ಮೋಹ ಯೌವ್ವನಪ್ರಾಯದಲ್ಲಿ ಸ್ತ್ರೀ, ಪುತ್ರಮೋಹ. ಮಧ್ಯಪ್ರಾಯದಲ್ಲಿ ಧನಧಾನ್ಯದ ಮೋಹ. ಈ ಪರಿಯಲ್ಲಿ ಸಕಲವು ನೀವು ಇರುವ ಪರ್ಯಂತರದಲ್ಲಿ ಮಾಯಾ ಮಮಕಾರವಲ್ಲದೆ ಅಳಲಿ ಬಳಲಿ, ಕುಸಿದು ಕುಗ್ಗಿ ಮುಪ್ಪುವರಿದು, ಮರಣಕಾಲಕ್ಕೆ ಯಮದೂತರು ಬಂದು ಹಿಂಡಿ ಹಿಪ್ಪಿಯ ಮಾಡಿ ಒಯ್ಯುವಾಗ, ಮೂವರೊಳಗೆ ಒಬ್ಬರು ಅಡ್ಡಬಂದರೆ ? ಬಂದುದಿಲ್ಲ. ಅವರ ಸಂಕಟಕ್ಕೆ ನೀವಿಲ್ಲ, ನಿಮ್ಮ ಸಂಕಟಕ್ಕೆ ಅವರಿಲ್ಲ. ನಿನ್ನ ಪುಣ್ಯಪಾಪಕ್ಕೆ ಅವರಿಲ್ಲ, ಅವರ ಪುಣ್ಯಪಾಪಕ್ಕೆ ನೀನಿಲ್ಲ. ನಿನ್ನ ಸುಖದುಃಖಕ್ಕೆ ಅವರಿಲ್ಲ, ಅವರ ಸುಖದುಃಖಕ್ಕೆ ನೀನಿಲ್ಲ. ನಿನಗವರಿಲ್ಲ, ಅವರಿಗೆ ನೀನಿಲ್ಲ. ಇಂತಿದನು ಕಂಡು ಕೇಳಿ ಮತ್ತಂ ಹಿತ್ತಲಕ್ಕೆ ಹಳೆಯೆಮ್ಮಿ ಮನಸೋತ ಹಾಗೆ, ಹಾಳಕೇರಿಗೆ ಹಂದಿ ಜಪ ಇಟ್ಟ ಹಾಗೆ, ಹಡಕಿಗೆ ಶ್ವಾನ ಮೆಚ್ಚಿದ ಹಾಗೆ, ಮತ್ತಂ, ಮಾನವರೊಳಗೆ ಹಂದಿ, ನಾಯಿ, ಹಳೆಯೆಮ್ಮಿಯೆಂದರೆ- ಜೀವನಬುದ್ಭಿಯುಳ್ಳವನೇ ಹಂದಿ. ಕರಣಬುದ್ಧಿಯುಳ್ಳವನೇ ನಾಯಿ. ಮಾಯಾಪ್ರಕೃತಿಯುಳ್ಳವನೇ ಹಳೆಯೆಮ್ಮಿ. ಇವಕ್ಕೆ ಮೂರು ಮಲವಾವೆಂದಡೆ: ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯವನು, ಕಚ್ಚಿ ಮೆಚ್ಚಿ ಮರುಳಾಗಿ ಬಿಡಲಾರದೆ ಕಂಡು ಕೇಳಿ ಮೋಹಿಸಿ, ಇದನು ಬಿಟ್ಟು ವೈರಾಗ್ಯಹೊಂದಿದರೆ ಮೋಕ್ಷವಿಲ್ಲೆಂದು ಪ್ರಪಂಚವಿಡಿದು ಪಾರಮಾರ್ಥ ಸಾಧಿಸಬೇಕೆಂದು ಹೇಳುವವರ, ಹೀಂಗೆ ಮಾಡಬೇಕೆಂಬುವರ ಬುದ್ಧಿಯೆಂತಾಯಿತಯ್ಯಾ ಎಂದಡೆ: ಗಿಳಿ ಓದಬಲ್ಲುದು; ಬಲ್ಲರೇನು ತನ್ನ ಮಲವ ತಾನು ತಿಂದ ಹಾಗೆ. ವಿಹಂಗ ಹನ್ನೆರಡುಯೋಜನದಮೇಲೆ ಅಮೃತಫಲವಿಪ್ಪುದ ಬಲ್ಲದು. ಬಲ್ಲರೇನು, ಅದು ಬಾಯಿಲಿ ತಿಂದು ಬಾಯಿಲೆ ಕಾರುವದು. ಹಾಂಗೆ ಈ ಮಾನವರು ತ್ರಿವಿಧಮಲಸಮಾನವೆಂಬುದ ಬಲ್ಲರು, ಬಲ್ಲರೇನು ? ಬಿಡಲಾರರು. ಇಂತೀ ಪರಿಪರಿಯಲ್ಲಿ ಕೇಳಿ ಕೇಳಿ ಕಂಡು ಬಿಡಲಾರದೆ ಇದ್ದರೆ ಇಂಥ ಹೊಲೆಸೂಳೆಯ ಮಕ್ಕಳ ಶರೀರವ ಖಡ್ಗದಿಂದ ಕಡಿದು ಕರಗಸದಿಂದ ಕೊರೆದು ಛಿದ್ರಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿಗಳಿಗೆ ಹಾಕಿದರೆ ಎನ್ನ ಸಿಟ್ಟು ಮಾಣದು. ಕಡೆಯಲ್ಲಿ ಚಂದ್ರಸೂರ್ಯರು ಇರುವ ಪರ್ಯಂತರ ಮಹಾ ಅಘೋರ ನರಕದಲ್ಲಿ ಕಲ್ಪಕಲ್ಪಾಂತರದಲ್ಲಿ ಹಾಕದೆ ಬಿಡನೆಂದಾತನು ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶೀಲವಂತರ ಶೀಳ ಕೊಳ್ಳದೆ, ಭವಿಗಳ ಶೀಳ ಕೊಂಬುವರು. ಅದೇನುಕಾರಣವೆಂದಡೆ, ಶೀಲವಂತರ ಶೀಳಿಗೆ ಹಣವುಂಟು, ಭವಿಗಳ ಶೀಳಿಗೆ ಹಣವಿಲ್ಲ. ಭವಿಗಳ ಶೀಳ ಕೊಂಬುವರು ಕಲ್ಲಿನ ಕೇತನೊಳಗಾಗಿ ಕಾಯಕದಲ್ಲಿದ್ದರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶ್ರೀಗುರು ಬಂದು ತ್ರಿವಿಧದೀಕ್ಷೆಯಿಂದ ಉಪದೇಶವ ಮಾಡುವ ಕಾಲದಲ್ಲಿ ಹಸ್ತದಲ್ಲಿ ಶಸ್ತ್ರವ ಹಿಡಿದು ಕಡಿದುಕೊಂಡು ನುಂಗಿದಾತನೇ ಶಿಷ್ಯನೆಂಬೆ. ಲಿಂಗವು ಬಂದು ಹಸ್ತದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಪೂಜೆಗೊಂಬ ವೇಳೆಯಲ್ಲಿ ವಜ್ರಾಯುಧದಿಂದ ಬಡಿದು ಒಡೆದು ಚೂರ್ಣವ ಮಾಡಿ ಉದಕದೊಳಗೆ ಹಾಕಿ ಕುಡಿಯುವವನೇ ಶರಣನೆಂಬೆ. ಜಂಗಮ ಬಂದು ಇದುರಿನಲ್ಲಿ ಕುಳಿತು ಅನುಭಾವಬೋಧೆಯನು ಮಾಡುವ ಸಮಯದಲ್ಲಿ ಹಸ್ತದಲ್ಲಿ ಖಡ್ಗವ ಪಿಡಿದು ಎಡಕ ಬಂದವನ ಕುಟ್ಟಿ, ಬಲಕ ಬಂದವನ ಹೆಟ್ಟಿ, ಎದುರಿನಲ್ಲಿ ಬಂದವನ ಮೆಟ್ಟಿ, ಆ ಜಂಗಮವನು ಕಡಿದು ಅವನ ಕಂಡವ ಚಿನಿಪಾಲವ ಮಾಡಿ, ನೀರಿಲ್ಲದೆ ಅಟ್ಟು, ಕಿಚ್ಚಿಲ್ಲದೆ ಸುಟ್ಟು, ಹಸ್ತವಿಲ್ಲದೆ ಪಿಡಿದು, ಬಾಯಿಲ್ಲದೆ ಸವಿದು, ಜಿಹ್ವೆಯಿಲ್ಲದೆ ರುಚಿಸಿ, ಸಂತೋಷವಿಲ್ಲದೆ ಪರಿಣಾಮಿಸಬಲ್ಲರೆ ಭಕ್ತನೆಂಬೆ. ಇಂತೀ ತ್ರಿವಿಧದ ಅನುಭಾವವ ಹೇಳಬಲ್ಲರೆ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂಬೆ. ಲಿಂಗಾಂಗಿ ಎಂಬೆ, ಶಿವಜ್ಞಾನಸಂಪನ್ನರೆಂಬೆ, ಪರಶಿವಯೋಗಿಗಳೆಂಬೆ, ಚಿತ್ಪ್ರಕಾಶಜ್ಞಾನಿಗಳೆಂಬೆ, ಈ ವಚನದ ಭೇದವ ತಿಳಿಯದಿದ್ದರೆ ಸತ್ತಹಾಗೆ ಸುಮ್ಮನೆ ಇರು ಎಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿಕಾರಿಯ ಹೋದಲ್ಲಿ ಶುನಿಗಳ ಕೊಂದು ಕಾಡಬೆಕ್ಕಿನ ಬೇಟೆಯನಾಡಿ ನರಿಯ ಕೊಲ್ಲದೆ ಗುದ್ದಹೊಕ್ಕ ಇಲಿಯಕೊಂದು ರಾತ್ರಿಯ ಕಳೆದು ಹಗಲಳಿದು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ಈ ಸಂಸಾರದಂದುಗ ದುಃಖ ನಾನೆಂತು ಪೇಳ್ವೆ. ಹೊನ್ನಿನ ವ್ಯಾಪಾರವ ಮಾಡಿ, ಧಾವತಿಯಿಂದ ಗಳಿಸುವದು ದುಃಖ. ಆ ಹೊನ್ನು ಜೋಕೆಮಾಡುವದು ದುಃಖ. ಆ ಹೊನ್ನು ಹೋದಮೇಲೆ ಅನೇಕ ದುಃಖ. ಹೆಣ್ಣು ತರುವದು ದುಃಖ; ಆ ಹೆಣ್ಣು ಆಳುವದು ದುಃಖ. ಹೆಣ್ಣು ಸತ್ತುಹೋದಮೇಲೆ ಅನೇಕ ದುಃಖ. ಮಣ್ಣು ದೊರಕಿಸುವದು ದುಃಖ. ಆ ಮಣ್ಣಿನ ಧಾವತಿ ಹೋರಾಟ ಮಾಡುವದು ದುಃಖ. ಆ ಮಣ್ಣು ನಾಶವಾದ ಮೇಲೆ ಅನೇಕ ದುಃಖ. ಇಂತೀ ತ್ರಿವಿಧವು ಮಲಸಮಾನವೆಂದರಿಯದೆ, ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು ಎಂಬಿರಿ. ಎಲೆ ಹುಚ್ಚು ಮರುಳು ಮಾನವರಿರಾ, ನೀವು ಮರಣವಾದ ಮೇಲೆ ಅವು ನಿಮ್ಮ ಕೂಡ ಬರ್ಪವೆ? ಬರ್ಪುದಿಲ್ಲ ಕೇಳಾ, ಎಲೆ ಹುಚ್ಚ ಮರುಳ ಮಾನವರಿರಾ, ಅವು ಆರ ಒಡವೆ ಎಂದರೆ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಹೊನ್ನು ರಾಜನದು, ಹೆಣ್ಣು ಅನ್ಯರದು, ಮಣ್ಣು ಬಲ್ಲಿದರದು. ಇಂತೀ ತ್ರಿವಿಧವು ಅನಿತ್ಯವೆಂದು ತನ್ನ ಸ್ವಾತ್ಮಜ್ಞಾನದಿಂದ ತಿಳಿದೆಚ್ಚತ್ತು ವಿಸರ್ಜಿಸಿ, ಗುರುಕಾರುಣ್ಯಮಂ ಪಡೆದು, ಲಿಂಗಾಂಗಸಂಬಂಧಿಯಾಗಿ, ಗುರೂಪಾವಸ್ತೆಯಂ ಮಾಡಿ, ಮುಂದೆ ಮೋಕ್ಷವ ಹಡೆಯಬೇಕೆಂಬ ಯುಕ್ತಿ ವಿವೇಕ ವಿಚಾರ ಬುದ್ಧಿಯನರಿಯದೆ ಅಶನಕ್ಕಾಗಿ ಮಣ್ಣ ಮೆಚ್ಚಿ, ವ್ಯಸನಕ್ಕಾಗಿ ಹೆಣ್ಣ ಮೆಚ್ಚಿ, ಅಂಗಸುಖಕ್ಕಾಗಿ ಹೊನ್ನ ಮೆಚ್ಚಿ- ಇಂತೀ ತ್ರಿವಿಧ ಆಶೆ ಆಮಿಷ ಮಮಕಾರದಿಂದ ಮನಮಗ್ನರಾಗಿ, ಮತಿಗೆಟ್ಟು ಮುಂದುಗಾಣದೆ, ಸಟೆಯ ಸಂಸಾರದಲ್ಲಿ ಹೊಡದಾಡಿ ಹೊತ್ತುಗಳೆದು ವ್ಯರ್ಥ ಸತ್ತುಹೋಗುವ ಕತ್ತೆಸೂಳೆಮಕ್ಕಳ ಬಾಳ್ವೆ ಶುನಿ ಸೂಕರ ಕುಕ್ಕುಟನ ಬಾಳ್ವೆಗಿಂದತ್ತತ್ತಯೆಂದಾತ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ತಾವಾರೆಂಬುದನರಿಯದೆ ತಮ್ಮ ನಿಜವನು ಮರೆದು ಈ ಮರುಳ ಮಾನವರು ಕೆಟ್ಟ ಕೇಡ ಪೇಳ್ವೆ, ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆನೆ ಮೊದಲು ಇರುವೆ ಕಡೆ ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಸತ್ತು, ಸಹಸ್ರವೇಳೆ ಹುಟ್ಟಿ, ತೊಡದ ದೇಹವ ತೊಟ್ಟು, ಮೆಟ್ಟದ ಭೂಮಿಯ ಮೆಟ್ಟಿ, ಉಣ್ಣದ ಆಹಾರವನುಂಡು, ಭವಭವದಲ್ಲಿ ಘಾಸಿಯಾಗಿ, ಕಡೆಯಲ್ಲಿ ಮನುಷ್ಯದೇಹವ ತಾಳಿದಲ್ಲಿ ವಾತ ಪಿತ್ಥ ಶ್ಲೇಷ್ಮ ಮೊದಲಾದ ಮುನ್ನೂರರುವತ್ತು ರೋಗಾದಿ ಬಾಧೆಗಳಿಂದ ಕಂದಿ ಕುಂದಿ ನೊಂದು ಬೆಂದು ತಾಪತ್ರಯಾಗ್ನಿಯಿಂದ ದಗ್ಭವಾದ ದುಃಖವ ಪೇಳಲಿಕ್ಕೆ ಸಹಸ್ರಹೆಡೆಯ ಶೇಷಂಗೆ ಎರಡು ಸಹಸ್ರಜಿಹ್ವೆಯಿಂದ ಅಳವಲ್ಲ, ಸಹಸ್ರನೇತ್ರವುಳ್ಳ ದೇವೇಂದ್ರಂಗೆ ನೋಡೆನೆಂದರೆ ಅಸಾಧ್ಯ. ಚತುರ್ಮುಖಬ್ರಹ್ಮಂಗೆ ಪೇಳಲಿಕ್ಕೆ ಅಗಮ್ಯ ಅಗೋಚರ. ಇಂತಿದನು ಕಂಡು, ಕೇಳಿ ಮೈಮರೆದು, ಹೇಸಿಕಿ ಸಂಸಾರದಲ್ಲಿ ಸಿಲ್ಕಿ ಸತ್ತುಹೋಗುವ ಹೇಸಿಮೂಳ ಹೊಲೆಮಾದಿಗರಿಗೆ ಶಿವಪಥವು ಎಂದೆಂದಿಗೂ ಸಾಧ್ಯವಿಲ್ಲ, ಅಸಾಧ್ಯವೆಂದಾತ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಾಶಿವಾ, ಗುರು ಲಿಂಗಾಂಗಿ ಜಂಗಮ ಭಕ್ತರ ಭೇದವ ಪೇಳ್ವೆ ಕೇಳಿರಯ್ಯಾ. ಶೆರೆಯ ಕುಡಿದವನೇ ಗುರುವೆಂಬೆ. ಸುರೆಯ ಕುಡಿದವನೇ ಲಿಂಗಾಂಗಿಯೆಂಬೆ. ಕಂಡವ ತಿಂದವನೇ ಜಂಗಮವೆಂಬೆ. ಇಂತೀ ಮೂವರ ಕೊಂದು ತಿಂದವನ ಕೊಂದು ತಿಂದಾತನೇ ಭಕ್ತನೆಂಬೆ. ಇಂತಿದರ ಅನುಭಾವ ತಿಳಿಯಬಲ್ಲರೆ ಗುರು-ಲಿಂಗ-ಜಂಗಮ ಭಕ್ತನೆಂಬೆ. ಇಂತೀ ಚತುರ್ವಿಧದ ನಿರ್ಣಯವ ಹೇಳಿದಾತನೇ ಅನಾದಿಗುರುಲಿಂಗಜಂಗಮವೆಂಬೆ. ಆತನಲ್ಲಿ ಉಪದೇಶವ ಹಡಿಯಬೇಕು. ಇಂತಿದರ ಭೇದವ ತಿಳಿಯಬಲ್ಲಾತನೇ ಅನಾದಿ ಶಿಷ್ಯ ಭಕ್ತನೆಂಬೆ. ಇಂತಿವರಿಗೆ ಉಪದೇಶವ ಹೇಳಬೇಕು. ಇಂತಪ್ಪ ಗುರುಶಿಷ್ಯಸಂಬಂಧವೆಂತೆಂದೊಡೆ: ಶಿಖಿ-ಕರ್ಪುರ ಸಂಯೋಗದಂತೆ. ಪಯೋಧರಫಲ ಉದಕದಲ್ಲಿ ಲೀಯವಾದಂತೆ. ಲವಣ ಸಮುದ್ರದಲ್ಲಿ ಲೀಯವಾದಂತೆ. ಈ ಗುರುಶಿಷ್ಯರುಭಯರು ಕೂಡಿ ಪರಶಿವಸಾಗರದಲ್ಲಿ ನಿರ್ವಯಲಾದರೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ಈ ಲೋಕದೊಳಗೆ ನಾವು ಗುರುಗಳು, ನಾವು ಚರಂತಿಹಿರಿಯರೆಂದು ಬಂದು ದೀಕ್ಷೋಪದೇಶ ಅಯ್ಯತನವ ಮಾಡುವೆವೆಂದು ಹೇಳಿಕೊಂಬರಯ್ಯ. ಅದೆಂತೆಂದೊಡೆ: ಭಕ್ತರ ದೀಕ್ಷೋಪದೇಶವ ಮಾಡುವ ಕಾಲಕ್ಕೆ ಅವರ ಮನೆಯೊಳಗಣ ಗಡಿಗೆ ಮಡಕೆಯ ಹೊರೆಯಕ್ಕೆ ಹಾಕಿಸಿ, ಮೈಲಿಗೆ ಮುಟ್ಟಚಟ್ಟನೆಲ್ಲವ ತೊಳಿಸಿ, ಗೃಹವನೆಲ್ಲ ಸಾರಣೆಯ ಮಾಡಿಸಿ, ಹೊಸ ಮಡಕೆಯ ತರಿಸಿ, ಆ ಭಕ್ತರ ಮಂಡೆಯ ಬೋಳಿಸಿ, ಮೈಯ ತೊಳಸಿ, ಹೊಸ ವಸ್ತ್ರವ ಉಡಿಸಿ, ತೊಡಿಸಿ, ಹೊದಿಸಿ, ಅವರ ಪೂರ್ವದ ಲಿಂಗವನೆಲ್ಲ ವಿಚಾರಿಸಿ ನೋಡಿ ಭಿನ್ನವಾದ ಲಿಂಗವನೆಲ್ಲ ತೆಗೆದು ಪ್ರತ್ಯೇಕಲಿಂಗವ ತಂದು, ವೇಧಾಮಂತ್ರಕ್ರೀಯೆಂಬ ತ್ರಿವಿಧ ದೀಕ್ಷೆಯಿಂದ ಮೂರೇಳು ಪೂಜೆಯ ಮಾಡಿ ಅವರಂಗದ ಮೇಲೆ ಲಿಂಗವ ಧರಿಸಿ ಮಾಂಸಪಿಂಡವಳಿದು ಮಂತ್ರಪಿಂಡವಾಯಿತು, ಭವಿಜನ್ಮವಳಿದು ಭಕ್ತನಾದೆ, ಪೂರ್ವಜನ್ಮವಳಿದು ಪುನರ್ಜಾತನಾದೆ ಎಂದು ಅವರಂಗದ ಮೇಲೆ ಲಿಂಗಧಾರಣ ಮಾಡಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಸದ್ಭಕ್ತರಾದಿರೆಂದು ಅವರನು ಬೋಳೈಸಿಕೊಂಡು ತಮ್ಮ ಒಡಲ ಹೊರೆವರಲ್ಲದೆ ಇವರು ಸದ್ಭಕ್ತರ ಮಾಡಲರಿಯರು. ಸದ್ಭಕ್ತರ ಮಾಡುವ ಪರಿಯ ಪೇಳ್ವೆ. ಅದೆಂತೆಂದೊಡೆ: ಪಂಚಭೂತ ಮಿಶ್ರವಾದ ದೇಹವೆಂಬ ಘಟವನು ತೆಗೆದು, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಪಂಚಲಕ್ಷಣವುಳ್ಳ ಚಿದ್ಘಟವ ತಂದು, ಸಂಕಲ್ಪ ವಿಕಲ್ಪ, ಸಂಸಾರಸೂತಕವೆಂಬ ಮುಟ್ಟು ಚಟ್ಟನೆಲ್ಲ ಚಿಜ್ಜಲದಿಂದ ತೊಳೆದು, ಮಾಯಾ ಮೋಹವೆಂಬ ಹೊದಿಕೆಯ ತೆಗೆಸಿ, ನಿರ್ಮಾಯ ನಿರ್ಮೋಹವೆಂಬ ವಸ್ತ್ರವನುಡಿಸಿ ತೊಡಿಸಿ, ಆಶೆ ಎಂಬ ಕೇಶವ ಬೋಳಿಸಿ, ಅವನ ಹಲ್ಲು ಕಳೆದು, ನಾಲಿಗೆಯ ಕೊಯ್ದು, ಕಣ್ಣುಗುಡ್ಡಿಯ ಮೀಟಿ, ಎರಡು ದಾಡಿಯ ಮುರಿಗುಟ್ಟಿ, ತಲೆ ಹೊಡೆದು, ಕೈಕಾಲು ಕಡಿದು, ತಿದಿಯ ಹರಿದು, ಸಂದ ಮುರಿದು, ಹಂದಿ ನಾಯಿಯ ಕೊಂದು ಕಂಡವ ತಿನಿಸಿ, ಕಪ್ಪೆಯ ಉಚ್ಚಿಯ ಕುಡಿಸಿ, ಇಂತೀ ಪರಿಯಲ್ಲಿ ದೀಕ್ಷೋಪದೇಶವ ಮಾಡಿ ಲಿಂಗವ ಕೊಡಬಲ್ಲರೆ ಗುರುವೆಂಬೆ. ಇಲ್ಲವಾದರೆ ಕಳ್ಳಗುರುಕಿಮಕ್ಕಳೆಂಬೆ. ಇಂತಪ್ಪ ವಿಚಾರವ ತಿಳಿದುಕೊಳ್ಳಬಲ್ಲರೆ ಭಕ್ತರೆಂಬೆ. ಇಲ್ಲದಿದ್ದರೆ ಬದ್ಧಭವಿಗಳೆಂಬೆ. ಇಂತೀ ತರುವಾಯದಲ್ಲಿ ಅಯ್ಯತನವ ಮಾಡಬಲ್ಲರೆ ಚರಂತಿಹಿರಿಯರು ಎಂಬೆ. ಇಲ್ಲದಿದ್ದರೆ ಮೂಕೊರತಿ ಮೂಳಿಯ ಮಕ್ಕಳೆಂಬೆ. ಇಂತೀ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದುಕೊಳ್ಳಬೇಕಲ್ಲದೆ, ಈ ಲೋಕದ ಜಡಜೀವರು ಕಡುಪಾತಕರಲ್ಲಿ ಕೊಳ್ಳಲುಬಾರದು. ಅದೇನು ಕಾರಣವೆಂದೊಡೆ: ತಾವಾರೆಂಬ ತಮ್ಮ ನಿಲವ ತಾವರಿಯರು, ಇನ್ನೊಬ್ಬರಿಗೆ ಏನು ಹೇಳುವರಯ್ಯ? ಇಂತಪ್ಪ ಮೂಢಾತ್ಮರಲ್ಲಿ-ಇದಕ್ಕೆ ದೃಷ್ಟಾಂತ: ಹಿತ್ತಲಲ್ಲಿ ಪಡುವಲಕಾಯಿಗೆ ಕಲ್ಲು ಕಟ್ಟಿದಂತೆ, ಬಾವಿಯೊಳಗೆ ಕೊಡಕ್ಕೆ ಹಗ್ಗವ ಕಟ್ಟಿ ಬಿಟ್ಟಂತೆ, ನಾವು ನಮ್ಮ ಪಾದದಲ್ಲಿ ಮರೆಯ ಮಾಡಬೇಕೆಂದು, ತಮ್ಮ ಕಾಲಿಗೆ ಒಂದೊಂದು ಪೋರಗಳ ಕಟ್ಟಿಕೊಂಡು ಅಡ್ಡಡ್ಡ ಬಿದ್ದು ಮರಿಯ ಪಡಕೊಂಬವರ, ಆ ಮರಿಗಳಿಗೆ ಅಯ್ಯತನ ಮಾಡಿದೆವು ಎಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಮೂಗ ಕೊಯಿದು ಕನ್ನಡಿಯ ತೋರಿ ಮೂಗಿನೊಳಗೆ ಮೆಣಸಿನಹಿಟ್ಟು ತುಂಬಿ ಸಂಗನ ಶರಣರ ಪಾದರಕ್ಷೆಯಲ್ಲಿ ಘಟ್ಟಿಸಿ, ಮೂಡಲ ದಿಕ್ಕಿಗೆ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶರಣಸತಿ ಲಿಂಗಪತಿ ಎಂಬಾಚಾರವ ಪಿಡಿದು ಆಚರಿಸುವ ಭಕ್ತರು ಇಷ್ಟಲಿಂಗಕ್ಕೆ ರೂಪು, ಮೊದಲಾದ ಪದಾರ್ಥವ ಕೊಟ್ಟು ಸೇವಿಸಬೇಕು. ಪ್ರಾಣಲಿಂಗಕ್ಕೆ ರುಚಿಪದಾರ್ಥವನರ್ಪಿಸಿ ಸೇವಿಸಬೇಕು. ಭಾವಲಿಂಗಕ್ಕೆ ತೃಪ್ತಿಪದಾರ್ಥವನರ್ಪಿಸಿ ಸೇವಿಸಬೇಕು. ಇಷ್ಟುಳ್ಳಾತನೇ ಶರಣಸತಿ ಲಿಂಗಪತಿ ಎಂಬಾಚಾರ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶೈವರುಕಟ್ಟಿದ ಗುಡಿಯ ಬಿಚ್ಚದೆ, ಶೈವಲಿಂಗವ ತೆಗೆಯದೆ, ಪಾಯಾ ಸೋಸಿ ಗುಡಿಯ ಕಟ್ಟಿ, ಆ ಶೈವಲಿಂಗವ ಸ್ಥಾಪಿಸಲು, ಗುಡಿ ಲಿಂಗವ ನುಂಗಿ, ಲಿಂಗ ಗುಡಿಯ ನುಂಗಿದ ಕಂಡು, ಸತ್ತು ಬದುಕಿ ಕಾಯಕವ ಮಾಡುತ್ತಿದ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ಈ ಮರುಳಮಾನವರು ಸಟೆಯ ಸಂಸಾರದಲ್ಲಿ ಸಿಲ್ಕಿ, ತಾವಾರೆಂಬುದನರಿಯದೆ, ತಮ್ಮ ನಿಜಸ್ವರೂಪವ ಮರದು ಕೆಟ್ಟ ಕೇಡ ಹೇಳುವೆನು ಕೇಳಿರಯ್ಯ. ಹುಲಿಯ ಬಾಯ ಕುರಿಯ ಹಾಗೆ, ತೋಳನ ಬಾಯ ಮರಿಯ ಹಾಗೆ, ಸರ್ಪನ ಬಾಯ ಕಪ್ಪೆಯ ಹಾಗೆ, ಬೆಕ್ಕಿನ ಬಾಯ ಇಲಿಯ ಹಾಗೆ, ಕಟುಕನ ಕೈಯ ಹೋತಿನ ಹಾಗೆ, ರಾಜನ ಕೈಯ ಚೋರನ ಹಾಗೆ, ಇಂತೀ ದೃಷ್ಟಾಂತದಂತೆ- ಮಾಯಾಕಾಳರಕ್ಕಸಿಯ ಮೂರು ಮುಖದಲ್ಲಿ- ಆ ಮೂರು ಮುಖ ಆವಾವೆಂದಡೆ: ಜಾಗ್ರ ಸ್ವಪ್ನ ಸುಷುಪ್ತಿಯೆಂಬ ತ್ರಿಮುಖದೊಳಗೆ ಗೋಪ್ಯಮುಖ, ಸಂದ ಮುಖಗಳುಂಟು, ಪೇಳ್ವೆ. ಜಾಗ್ರಾವಸ್ಥೆಯೇ ವಕ್ತ್ರವಾಗುಳ್ಳ ಮಣ್ಣಿನಲ್ಲಿ ಕಾಮ ಕ್ರೋಧ ಲೋಭವೆಂಬ ತ್ರಿವಿಧಮುಖವು. ಸ್ವಪ್ನಾವಸ್ಥೆಯೇ ವಕ್ತ್ರವಾಗುಳ್ಳ ಹೆಣ್ಣಿನಲ್ಲಿ ಘ್ರಾಣ, ಜಿಹ್ವೆ, ನೇತ್ರ, ಶ್ರೋತ್ರ, ತ್ವಕ್ಕುಯೆಂಬ ಪಂಚಮುಖವು. ಸುಷುಪ್ತಾವಸ್ಥೆಯೇ ವಕ್ತ್ರವಾಗುಳ್ಳ ಹೊನ್ನಿನಲ್ಲಿ ಪ್ರಾಣಾದಿ ಧನಂಜಯಾಂತ್ಯಮಾದ ದಶವಾಯುಗಳೇ ದಶಮುಖವಾಗಿರ್ಪವು. ಇಂತೀ ತ್ರಿವಿಧಮುಖ ಮೊದಲುಮಾಡಿಕೊಂಡು ಹಲವು ಮುಖದಿಂದ ಹರಿಹರಿದುಕೊಂಡು ತಿಂದು ಹಿಂಡಿ ಹಿಪ್ಪಿಯ ಮಾಡುವಾಗ ಹಿಂದೆ ಹೇಳಿದ ದೃಷ್ಟಾಂತದಂತೆ ಮಾಯೆಯೆಂಬ ಹೊಲೆಯಲ್ಲಿ ಶಿಲ್ಕಿ ಈರೇಳುಲೋಕವೆಲ್ಲ, ಆಳುತ್ತ, ಮುಳುಗುತ್ತ ಆಲಪರಿದು, ಚಾಲಿವರಿದು ಎಂಬತ್ತುನಾಲ್ಕುಲಕ್ಷ ಭವಮಾಲೆಯಲ್ಲಿ ಸತ್ತುಹೋದ ಪ್ರಾಣಿಗಳಿಗೆ ಇನ್ನೆತ್ತಣ ಮುಕ್ತಿಯಯ್ಯಾ. ಇಂತೀ ಮರುಳಮಾನವರ ಕಂಡು ಬೆಕ್ಕನೆ ಬೆರಗಾಗಿ ಹೊಟ್ಟೆಹುಣ್ಣಾಗುವನ್ನಕ್ಕರ ನಕ್ಕು ಶಬ್ದಮುಗ್ಧನಾಗಿ ಸುಮ್ಮನಿರ್ದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಕಲಾತಿ ಬ್ರಹ್ಮಂಗೆ ಕೊಟ್ಟು, ಕಿನಕಾಪು ವಿಷ್ಣುವಿಂಗೆ ಕೊಟ್ಟು, ಸುಳುಹು ರುದ್ರಂಗೆ ಕೊಟ್ಟು, ಕೊಟ್ಟ ಕಪ್ಪಡದ ಹಣವ ಕೊಳ್ಳದೆ ಕಾಯಕವ ಮಾಡುತ್ತಿರ್ದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶರಣರ ನಿಲುಕಡೆ ದಾರುಬಲ್ಲರಯ್ಯ ? ಶರಣರ ನಿಲವ ಉರಿಲಿಂಗಪೆದ್ದಯ್ಯಗಳು, ನುಲಿಯ ಚಂದಯ್ಯಗಳು, ಹಡಪದ ಅಪ್ಪಣ್ಣಗಳು, ಮ್ಯಾದಾರ ಕೇತಯ್ಯಗಳು, ಗಜೇಶ ಮಸಣಯ್ಯಗಳು, ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು ಮೊದಲಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ ಮಿಕ್ಕಿನ ಭವಭಾರಿಗಳಾದ ವೇದಾಂತಿ, ಸಿದ್ಧಾಂತಿ, ಯೋಗಮಾರ್ಗಿಗಳು ಮೊದಲಾದ ಭಿನ್ನಭಾವ ಜೀವಾತ್ಮರೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?
--------------
ಕಾಡಸಿದ್ಧೇಶ್ವರ
ಶುಕ್ಲ ಶೋಣಿತಾತ್ಮಸಂಬಂಧವಾದ ಮಾತಾಪಿತೃಗಳ ಸಂಯೋಗ ಕಾಲಕ್ಕೆ ಜೀವಾತ್ಮರು ಜನಿಸಿದ ಪರಿಯ ಪೇಳುವೆ. ಅದೆಂತೆಂದೊಡೆ : ಜನಿಸಿದ ಮೂರುದಿವಸಕ್ಕೆ ಸ್ತ್ರೀಯರ ನಯನ ಕೆಂಪಾಗಿ ಮೂರಾರುದಿವಸಕ್ಕೆ ಕೈಕಾಲು ಕತ್ತರಿಸಿ ಏಳೆಂಟುದಿವಸಕ್ಕೆ ಅಂಗ ಜಾಡ್ಯವಾಗಿ ಈರ್ಹತ್ತುದಿವಸಕ್ಕೆ ಇಂದ್ರಿಯ ಹೆಪ್ಪುಗೊಂಡು ಒಂದುಮಾಸಕ್ಕೆ ಮಾಂಸಗೊಂಡು ಎರಡುತಿಂಗಳಿಗೆ ಪಿಂಡಗಟ್ಟಿ ಬಯಕೆ ತೋರಿ ಮೂರುತಿಂಗಳಿಗೆ ಅಂಡಗಟ್ಟಿ ಹೇಸಿಕೆ ಹುಟ್ಟಿ ನಾಲ್ಕುತಿಂಗಳಿಗೆ ಅಂಗರೂಪು ಹುಟ್ಟಿ ಐದುತಿಂಗಳಿಗೆ ಅವಯವಂಗಳು ಹುಟ್ಟಿ ಆರುತಿಂಗಳಿಗೆ ಅವಯವಂಗಳು ಬಲಿದು ಏಳುತಿಂಗಳಿಗೆ ರೋಮ ಹುಟ್ಟಿ ಇಂತೀ ಪರಿಯಲ್ಲಿ ಶಿವಕೃಪೆಯಿಂದ ಪಿಂಡವರ್ಧನವಾಗಲು, ಇಂತಪ್ಪ ಪಿಂಡದಲ್ಲಿ ಶಿವಾಜ್ಞೆಯಿಂದ ಆತ್ಮನು ಪ್ರವೇಶವಾದಾಕ್ಷಣವೇ ಗರ್ಭದಲ್ಲಿ ಶಿಶುವು ಉಲುಕುವುದು. ಎಂಟುತಿಂಗಳಿಗೆ ಕುಕ್ಕುಟಾಸನದಿಂದ ಶಿಶುವು ಹುದುಗಿಕೊಂಡಿರ್ಪುದು. ನವಮಾಸಕ್ಕೆ ಮರ್ಕಟಾಸನದಿಂದ ನೆಟ್ಟನೆ ಕುಳ್ಳಿರ್ದು ಶಿಶುವು ಸರ್ಪನುಂಗಿದ ಇಲಿಯ ಹಾಂಗೆ ಗರ್ಭವೆಂಬ ಸರ್ಪ ಶಿಶುವನೊಳಕೊಂಡಿರ್ಪುದು. ಆ ಶಿಶುವಿಗೆ ಕ್ರಿಮಿಕೀಟಕ ಜಂತುಗಳು ಮೊದಲಾದ ಅನೇಕ ಬಾಧೆಗಳುಂಟು. ಆ ಬಾಧೆಗಳಿಂದ ಆ ಶಿಶುವು ತನ್ನ ಕೆನ್ನೆಗೆರಡು ಹಸ್ತವ ಹಚ್ಚಿ ಊಧ್ರ್ವಮುಖವಾಗಿ ಶಿವಧೋ ಶಿವಧೋ ಎಂದು ಶಿವಧ್ಯಾನವ ಮಾಳ್ಪ ಸಮಯದಲ್ಲಿ ಹರಕರುಣದಿಂದ ಆ ಗರ್ಭವೆಂಬ ಮನೆಯ ಬಿಟ್ಟು ಹೊರಡುವ ಸಮಯಕ್ಕೆ ಆ ಶಿಶುವಿನ ದುಃಖವ ಪೇಳ್ವೆ: ಕೋಟಿಸಿಡಿಲು ಹೊಯ್ದಂತೆ, ಸಾವಿರಚೇಳು ಕಡಿದಂತೆ, ಧರ್ಮಿಷ್ಟರಾಜನು ಮೃತವಾದರೆ ಅತಿಬಡವರಿಗೆ ದುಃಖವಾದಹಾಂಗೆ. ಬಳಗುಳ್ಳ ಪುಣ್ಯಪುರುಷನು ಸಾಯಂಕಾಲದಲ್ಲಿ ಮೃತನಾಗಿ ಪ್ರಾತಃಕಾಲದಲ್ಲಿ ಅವನ ಶವ ಎತ್ತುವಕಾಲಕ್ಕೆ ಅವನ ಬಳಗಕ್ಕೆ ದುಃಖವಾದಹಾಂಗೆ. ಆ ಮಾಯಾಯೋನಿಯೆಂಬ ಸೂಕ್ಷ್ಮ ಅಧೋದ್ವಾರದಿಂ ಆತ್ಮನು ಅನೇಕ ದುಃಖ ದಾವತಿಯಿಂದ ಜನಿಸಲು ಅಂತಪ್ಪ ಪಿಂಡಕ್ಕೆ ಯೋನಿ ಕಂಡರೆ ಹೆಣ್ಣೆಂಬರು ಶಿಶ್ನವ ಕಂಡರೆ ಗಂಡೆಂಬರು. ಒಳಗಿರುವ ಆತ್ಮನು ಹೆಣ್ಣು ಅಲ್ಲ, ಗಂಡು ಅಲ್ಲ ನಿರಾಳ ಬ್ರಹ್ಮಾಂಶಿಕವು. ಅದೆಂತೆಂದಡೆ: ಪಾಪದದೆಸೆಯಿಂದ ಹೆಣ್ಣಾಗಿ ಜನಿಸುವುದು; ಪುಣ್ಯದದೆಸೆಯಿಂದ ಪುರುಷನಾಗಿ ಜನಿಸುವುದು. ಇಂತೀ ಪರಿಯಲ್ಲಿ ಇರುವೆ ಮೊದಲು ಆನೆ ಕಡೆ ಎಂಬತ್ತುನಾಲ್ಕುಲಕ್ಷ ಜೀವರಾಶಿಯ ಯೋನಿಚಕ್ರಮಾರ್ಗದಲ್ಲಿ ತಿರುಗಿ ತಿರುಗಿ ಭವರಾಟಾಳಮಾರ್ಗದಲ್ಲಿ ದೇವ ದಾನವ ಮಾನವರು ಮೊದಲಾದ ಸಕಲಜನರು ಬರುವದುಕಂಡು ಥರಥರನೆ ನಡುಗಿ ಮರಳಿ ಈ ಜನನೀಜಠರಕ್ಕೆ ಬರಲಾರೆನೆಂದು ಅಂಜಿ ನಿಮ್ಮ ಮರೆಹೊಕ್ಕನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶ್ವೇತವರ್ಣದ ವಸ್ತ್ರವನೆಲ್ಲ ಭಕ್ತಂಗೆ ಕೊಟ್ಟು, ಪೀತವರ್ಣದ ವಸ್ತ್ರವನೆಲ್ಲ ಮಾಹೇಶ್ವರಂಗೆ ಕೊಟ್ಟು, ಹರಿತವರ್ಣದ ವಸ್ತ್ರವನೆಲ್ಲ ಪ್ರಸಾದಿಗೆ ಕೊಟ್ಟು, ಮಾಂಜಿಷ್ಟವರ್ಣದ ವಸ್ತ್ರವನೆಲ್ಲ ಪ್ರಾಣಲಿಂಗಿಗೆ ಕೊಟ್ಟು, ಕಪೋತವರ್ಣದ ವಸ್ತ್ರವನೆಲ್ಲ ಶರಣಂಗೆ ಕೊಟ್ಟು, ಮಾಣಿಕ್ಯವರ್ಣದ ವಸ್ತ್ರವನೆಲ್ಲ ಐಕ್ಯಂಗೆ ಕೊಟ್ಟು, ಇಂತೀ ವಸ್ತ್ರದ ಹಣವ ಕೊಳ್ಳದೆ ಕೊಂಡು ನುಂಗಿ ಕಾಯಕವ ಮಾಡುತ್ತಿರ್ದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ

ಇನ್ನಷ್ಟು ...