ಆವಾವ ವಾದ್ಯ ಘಟಭೇದಂಗಳಲ್ಲಿಯೂ
ಭಾವಶುದ್ಧವಾಗಿಪ್ಪುದು ನಾದ.
ಆರಾರ ವಿಶ್ವಾಸದ ಭಾವದಲ್ಲಿಯೂ
ದೈವಶುದ್ಧವಾಗಿಪ್ಪುದು ವಸ್ತು.
ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ ತನ್ಮಯವಾಗಿ,
ವರುಣನ ಕಿರಣದಂತೆ, ತನಗೆ ಮರೆಯಾದಲ್ಲಿ ನಿಂದು,
ಮರೆಗೆ ಹೊರಗಾದಲ್ಲಿ
ತನ್ನಿರವು ಎಲ್ಲಾ ಎಡೆಯಲ್ಲಿ ಪರಿಪೂರ್ಣವಾದಂತೆ.
ನೆನೆವರ ಮನದ ಕೊನೆಯಲ್ಲಿ, ಮರೆದವರ ಮರೆಯಲ್ಲಿ,
ಎಡೆದೆರಪಿಲ್ಲದ ವಸ್ತು ನೀನೆ, ಕಾಮಧೂಮ ಧೂಳೇಶ್ವರಾ.