ಜಾಗ್ರದಲ್ಲಿ ವ್ಯಾಪಾರ, ಸ್ವಪ್ನದಲ್ಲಿ ಕೂಟಸ್ಥ,
ಸುಷುಪ್ತಿಯಲ್ಲಿ ಮಗ್ನತೆ ಆಯಿತ್ತೆಂಬುದು ಅದೇನು ಹೇಳಾ.
ಸ್ಥೂಲತನುವಿನಲ್ಲಿ ಕೂಟಸ್ಥ, ಸೂಕ್ಷ್ಮತನುವಿನಲ್ಲಿ ಏಕಾರ್ಥ,
ಕಾರಣತನುವಿನಲ್ಲಿ ಲೇಪವಾಯಿತ್ತೆಂಬ ಭಾವವದೇನು ನೋಡಾ.
ಇಂತೀ ಜೀವಾತ್ಮ ಭಾವಾತ್ಮ ಪರಮಾತ್ಮ.
ಇಂತೀ ತ್ರಿವಿಧಾತ್ಮದಲ್ಲಿ ತಿರುಗುವ ಆತ್ಮ ಅದೇನು ಹೇಳಾ.
ಮೂರೆಂಬುದು, ಬೇರೊಂದು ಭಾವವೆಂಬುದು,
ಅವ ಕೂಡಿ ನಿರ್ಭಾವವೆಂಬುದು,
ಆ ಗುಣ ಇದಿರದೋ, ತನ್ನದೋ ? ಎಂಬುದನರಿದು ಮರೆದಲ್ಲಿ,
ಕಾಮಧೂಮ ಧೂಳೇಶ್ವರನು ಭಿನ್ನರೂಪನಲ್ಲ.