ಪೂಜೆ ಪುಣ್ಯಕ್ಕೆ ಒಡಲು, ಜ್ಞಾನ ಶೂನ್ಯಕ್ಕೆ ಒಡಲು. ಉಂಟು, ಇಲ್ಲ ಎಂಬುದು ಸಂದೇಹಕ್ಕೆ ಒಡಲು. ಇಂತೀ ಒಡಲಳಿದು, ಕೊಡುವ ಕೊಂಬ ಎಡೆಯಾಟ ನಿಂದು, ಜಿಡ್ಡೆಂಬ ಜಿಗುಡು ಹರಿದು, ಶೂನ್ಯವೆಂಬ ಸುಳುಹು ಸತ್ತು, ಮತ್ತಾವುದೂ ಕಲೆದೋರದೆ ನಿಂದ ನಿಜ, ತಾನು ತಾನೆ, ಕಾಮಧೂಮ ಧೂಳೇಶ್ವರಾ.
ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳ ಕಲ್ಪಿಸಿದಾತ, ಒಬ್ಬ ವಸ್ತು ಎಂದಲ್ಲಿ, ಆ ಕಲ್ಪನೆಗೆ ಆ ವಸ್ತು ತೀತವೋ, ಅತೀತವೋ ? ಆ ಪಂಚಭೂತಿಕಕ್ಕೆ ಆ ವಸ್ತು ಒಳಗೋ, ಹೊರಗೋ ? ಒಳಗೆಂದಲ್ಲಿ ಆ ಭಾವಕ್ಕೆ ಭ್ರಮೆ, ಹೊರಗೆಂದಲ್ಲಿ ಉಭಯದ ಶಂಕೆ ನಿಜಯೆಂತಿದ್ದಿತ್ತು, ಅರಿವ ಆತ್ಮನಂತೆಯಿದ್ದಿತ್ತು. ಉಭಯದ ಕಾಂತಿ ಅಡಗಿದಲ್ಲಿ, ಕಾಮಧೂಮ ಧೂಳೇಶ್ವರನ ಲಕ್ಷ್ಯ ನಿರ್ಲಕ್ಷ್ಯವಾಗಿತ್ತು.