ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ,
ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ.
ತನ್ನ ಮನೆಯಲೊಂದು ಶಿಶು ಸತ್ತಡೆ
ಅದಕ್ಕೆ ಮರುಗುವಂತೆ ಅವಕೇಕೆ ಮರುಗ ?
ಅದೆಂತೆಂದಡೆ
'ಸ್ವಾತ್ಮಾನಮಿತರಂ ಚೇತಿ ಭಿನ್ನತಾ ನೈವ ದೃಶ್ಯತಾಂ
ಸರ್ವಂ ಚಿಜ್ಜ್ಯೋತಿರೇವೇತಿ ಯಃ ಪಶ್ಯತಿ ಸ ಪಶ್ಯತಿ'
ಎಂದುದಾಗಿ,
ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ.
ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು
ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ ?