ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೆಟ್ಟಕ್ಕೆ ಸಾರವಿಲ್ಲೆಂಬರು ತರುಗಳು ಹುಟ್ಟುವಪರಿ ಇನ್ನೆಂತಯ್ಯಾ ? ಇದ್ದಲಿಗೆ ರಸವಿಲ್ಲೆಂಬರು ; ಕಬ್ಬುನ ಕರಗುವಪರಿ ಇನ್ನೆಂತಯ್ಯಾ ? ಎನಗೆ ಕಾಯವಿಲ್ಲೆಂಬರು ; ಚೆನ್ನಮಲ್ಲಿಕಾರ್ಜುನನೊಲಿವಪರಿ ಇನ್ನೆಂತಯ್ಯಾ ?
--------------
ಅಕ್ಕಮಹಾದೇವಿ
ಬಸವಣ್ಣನ ಪಾದವ ಕಂಡೆನಾಗಿ ಎನ್ನಂಗ ನಾಸ್ತಿಯಾಯಿತ್ತು. ಚೆನ್ನಬಸವಣ್ಣನ ಪಾದವ ಕಂಡೆನಾಗಿ ಎನ್ನ ಪ್ರಾಣಬಯಲಾಯಿತ್ತು. ಪ್ರಭುವೆ, ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ ಎನ್ನ ಅರಿವು ಸ್ವಯವಾಯಿತ್ತು. ಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಶರಣರ ಕರುಣವ ಪಡೆದೆನಾಗಿ ನಿನಗೆ ಮತ್ತಾವುದಿಲ್ಲವಯ್ಯ ಪ್ರಭುವೆ.
--------------
ಅಕ್ಕಮಹಾದೇವಿ
ಬೋಳೆಯನೆಂದು ನಂಬಬೇಡ, ಢಾಳಕನವನು ಜಗದ ಬಿನ್ನಾಣಿ. ಬಾಣ ಮಯೂರ ಕಾಳಿದಾಸ ಓಹಿಲ ಉದ್ಭಟ ಮಲುಹಣರವರಿಗಿತ್ತ ಪರಿ ಬೇರೆ. ಮುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬ ಚೆನ್ನಮಲ್ಲಿಕಾರ್ಜುನನು.
--------------
ಅಕ್ಕಮಹಾದೇವಿ
ಬಾರದ ಭವಂಗಳಲ್ಲಿ ಬಂದೆನಯ್ಯಾ. ಕಡೆಯಿಲ್ಲದ ತಾಪಂಗಳಲ್ಲಿ ನೊಂದು ನಿಮ್ಮ ಕರುಣೆಗೆ ಬಳಿಸಂದೆನಯ್ಯಾ. ಇದು ಕಾರಣ ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗೆ ತನುವನುವಾಗಿ ಮನಮಾರುವೋಗೆ ಮತ್ತಿಲ್ಲದ ತವಕದ ಸ್ನೇಹಕ್ಕೆ ತೆರಹಿನ್ನೆಂತು ಹೇಳಾ ತಂದೆ ?||
--------------
ಅಕ್ಕಮಹಾದೇವಿ
ಬಸವಣ್ಣಾ, ನಿಮ್ಮಂಗದಾಚಾರವ ಕಂಡು ಎನಗೆ ಲಿಂಗಸಂಗವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಮನದ ಸುಜ್ಞಾನವ ಕಂಡು ಎನಗೆ ಜಂಗಮಸಂಬಂಧವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತ್ತಯ್ಯಾ. ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ.
--------------
ಅಕ್ಕಮಹಾದೇವಿ
ಬಂದಹನೆಂದು ಬಟ್ಟೆಯ ನೋಡಿ, ಬಾರದಿದ್ದಡೆ ಕರಗಿ ಕೊರಗಿದೆನವ್ವಾ. ತಡವಾದಡೆ ಬಡವಾದೆ ತಾಯೆ. ಚೆನ್ನಮಲ್ಲಿಕಾರ್ಜುನನ ಒಂದಿರುಳಗಲಿದಡೆ ತಕ್ಕೆಸಡಲಿದ ಜಕ್ಕವಕ್ಕಿಯಂತಾದೆನವ್ವಾ.
--------------
ಅಕ್ಕಮಹಾದೇವಿ
ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ, ಸಿದ್ಧರಾಮಯ್ಯನೆ ಜಂಗಮ, ಮಡಿವಾಳಯ್ಯನೆ ಜಂಗಮ, ಚೆನ್ನಬಸವಣ್ಣನೆನ್ನ ಪರಮಾರಾಧ್ಯರು. ಇನ್ನು ಸುಖಿಯಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ಬೆಂದಸಂಸಾರ ಬೆಂಬಿಡದೆ ಕಾಡಿಹುದಯ್ಯ, ಏವೆನೇವೆನಯ್ಯಾ ? ಅಂದಂದಿನ ದಂದುಗಕ್ಕೆ ಏವೆನೇವೆನಯ್ಯಾ ? ಬೆಂದ ಒಡಲ ಹೊರೆವುದಕ್ಕೆ ನಾನಾರೆ. ಚೆನ್ನಮಲ್ಲಿಕಾರ್ಜುನಯ್ಯಾ, ಕೊಲ್ಲು ಕಾಯಿ, ನಿಮ್ಮ ಧರ್ಮ.
--------------
ಅಕ್ಕಮಹಾದೇವಿ
ಬಿಡು ಬಿಡು ಸಂಗವ, ಸುಡುಸುಡು ವಿಷಯವ, ಎನ್ನೊಡೆಯರು ಬಾಗಿಲಿಗೆ ಬಂದರು, ತಡೆಯದಿರಾ ಮರುಳೆ. ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ, ಇದಕ್ಕೆ ಹಿಡಿಯದಿರು ಸೆರಗನು. ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ ಇದಿರೇಳದಿರ್ದಡೆ ನಾಯಕ ನರಕ.
--------------
ಅಕ್ಕಮಹಾದೇವಿ
ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯಾ ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯಾ ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
--------------
ಅಕ್ಕಮಹಾದೇವಿ
ಬಲ್ಲಿದ ಹಗೆಯವ ತೆಗೆವನ್ನಬರ, ಬಡವರ ಹರಣ ಹಾರಿಹೋದ ತೆರನಂತಾಯಿತ್ತು. ನೀ ಕಾಡಿ ಕಾಡಿ ನೋಡುವನ್ನಬರ, ಎನಗಿದು ವಿಧಿಯೇ ಹೇಳಾ ತಂದೆ ? ಮುರುವಾರುವನ್ನಬರ, ಎಮ್ಮೆ ಗಾಳಿಗೆ ಹಾರಿಹೋದ ತೆರನಂತಾಯಿತ್ತು. ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಬಯಲು ಲಿಂಗವೆಂಬೆನೆ ? ಬಗಿದು ನಡೆವಲ್ಲಿ ಹೋಯಿತ್ತು. ಬೆಟ್ಟ ಲಿಂಗವೆಂಬೆನೆ ? ಮೆಟ್ಟಿ ನಿಂದಲ್ಲಿ ಹೋಯಿತ್ತು. ತರುಮರಾದಿಗಳು ಲಿಂಗವೆಂಬೆನೆ ?ತರಿದಲ್ಲಿ ಹೋಯಿತ್ತು. ಲಿಂಗ ಜಂಗಮದ ಪಾದವೇ ಗತಿಯೆಂದು ನಂಬಿದ ಚೆನ್ನಮಲ್ಲಿಕಾರ್ಜುನಾ, ಸಂಗನಬಸವಣ್ಣನ ಮಾತು ಕೇಳದೆ ಕೆಟ್ಟೆನಯ್ಯಾ.
--------------
ಅಕ್ಕಮಹಾದೇವಿ
ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ. ಅಣ್ಣಾ, ನಾನು ಹೆಂಗೂಸಲ್ಲ ; ಅಣ್ಣಾ, ನಾನು ಸೂಳೆಯಲ್ಲ. ಅಣ್ಣಾ, ಮತ್ತೆ ನನ್ನ ಕಂಡು ಕಂಡು ಆರೆಂದು ಬಂದಿರಣ್ಣಾ ? ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪರಪುರುಷನು ನಮಗಾಗದ ಮೋರೆ ನೋಡಣ್ಣಾ ?
--------------
ಅಕ್ಕಮಹಾದೇವಿ
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರು. ಒಬ್ಬ ಭಾವರೂಪ, ಒಬ್ಬ ಪ್ರಾಣರೂಪ ; ಒಬ್ಬ ಐಮುಖವಾಗಿ ಕಾಯರೂಪಾದ ; ಇಬ್ಬರು ಉತ್ಪತ್ತಿ ಸ್ಥಿತಿಗೆ ಕಾರಣವಾದರು. ಐಮುಖನರಮನೆ ಸುಖವಿಲ್ಲೆಂದು ಕೈಲಾಸವ ಹೊಗೆನು, ಮತ್ರ್ಯಕ್ಕೆ ಅಡಿ ಇಡೆನು ; ಚೆನ್ನಮಲ್ಲಿಕಾರ್ಜುನದೇವಾ, ನೀನೇ ಸಾಕ್ಷಿ.
--------------
ಅಕ್ಕಮಹಾದೇವಿ
ಬೆರಸುವಡೆ ಬೇಗ ತೋರಾ, ಹೊರ ಹಾಯ್ಕದಿರಯ್ಯಾ. ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು ; ಎನ್ನ ಹೊರ ಹಾಯ್ಕದಿರಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ನಂಬಿ ಬೆಂಬಳಿಬಂದೆನು ಇಂಬುಗೊಳ್ಳಯ್ಯಾ ಬೇಗದಲಿ.
--------------
ಅಕ್ಕಮಹಾದೇವಿ
ಬಸವಣ್ಣನ ಮನೆಯ ಮಗಳಾದ ಕಾರಣ ಭಕ್ತಿಪ್ರಸಾದವ ಕೊಟ್ಟನು. ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ ಒಕ್ಕಪ್ರಸಾದವ ಕೊಟ್ಟನು. ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ ಮಗಳಾದ ಕಾರಣ ಜ್ಞಾನಪ್ರಸಾದವ ಕೊಟ್ಟನು. ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ ಪ್ರಾಣಪ್ರಸಾದವ ಸಿದ್ಧಿಸಿಕೊಟ್ಟನು. ಮಡಿವಾಳಯ್ಯನ ಮನೆಯ ಮಗಳಾದ ಕಾರಣ ನಿರ್ಮಲಪ್ರಸಾದವ ನಿಶ್ಚೈಸಿಕೊಟ್ಟನು. ಇಂತೀ ಅಸಂಖ್ಯಾತ ಗಣಂಗಳೆಲ್ಲರು ತಮ್ಮ ಕರುಣದ ಕಂದನೆಂದು ತಲೆದಡಹಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನು.
--------------
ಅಕ್ಕಮಹಾದೇವಿ
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ, ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ, ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ, ಸಿಧ್ದರಾಮಯ್ಯನ ಸಮಾಧಿಸ್ಥಲ. ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ಬಿಟ್ಟೆನೆಂದಡೆ ಬಿಡದೀ ಮಾಯೆ, ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ. ಯೋಗಿಗೆ ಯೋಗಿಣಿಯಾಯಿತ್ತು ಮಾಯೆ, ಸವಣಂಗೆ ಸವಣಿಯಾಯಿತ್ತು ಮಾಯೆ. ಯತಿಗೆ ಪರಾಕಿಯಾಯಿತ್ತು ಮಾಯೆ. ನಿನ್ನ ಮಾಯೆಗೆ ನಾನಂಜುವಳಲ್ಲ, ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮಾಣೆ.
--------------
ಅಕ್ಕಮಹಾದೇವಿ
ಬಸವನ ಭಕ್ತಿ ಕೊಟ್ಟಣದಮನೆ. ಸಿರಿಯಾಳನ ಭಕ್ತಿ ಕಸಬುಗೇರಿ. ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ. ಉಳಿದಾದ ಅಟಮಟ ಉದಾಸೀನ ದಾಸೋಹವ ಮಾಡುವವರ ದೈನ್ಯವೆಂಬ ಭೂತ ಸೋಂಕಿತು. ಮಣ್ಣಿನ ಮನೆಯ ಕಟ್ಟಿ ಮಾಯಾ ಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ ಮಾಡುವ ಮಾಟ. ಭಕ್ತನಲ್ಲಿ ಉಂಡು ಉದ್ದಂಡವೃತ್ತಿಯಲ್ಲಿ ನಡೆವವರು ಶಿವನಲ್ಲ. ಇವರು ದೇವಲೋಕ ಮತ್ರ್ಯಲೋಕಕ್ಕೆ ಹೊರಗು. ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ, ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತ್ತಾಗಿ ನಿರ್ವಯಲಾದೆ ಕಾಣಾ
--------------
ಅಕ್ಕಮಹಾದೇವಿ
ಬಂಜೆ ಬೇನೆಯನರಿವಳೆ ? ಬಲದಾಯಿ ಮದ್ದ ಬಲ್ಲಳೆ ? ನೊಂದವರ ನೋವ ನೋಯದವರೆತ್ತ ಬಲ್ಲರೊ ? ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ, ಎಲೆ ತಾಯಿಗಳಿರಾ ?
--------------
ಅಕ್ಕಮಹಾದೇವಿ