ಅ
(52)
ಆ
(19)
ಇ
(6)
ಈ
(1)
ಉ
(11)
ಊ
(4)
ಋ
(0)
ೠ
(0)
ಎ
(26)
ಏ
(0)
ಐ
(1)
ಒ
(12)
ಓ
(1)
ಔ
(0)
ಅಂ
(10)
ಅಃ
(10)
ಕ
(56)
ಖ
(0)
ಗ
(14)
ಘ
(1)
ಙ
(0)
ಚ
(6)
ಛ
(0)
ಜ
(6)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(21)
ಥ
(0)
ದ
(5)
ಧ
(2)
ನ
(26)
ಪ
(16)
ಫ
(1)
ಬ
(20)
ಭ
(10)
ಮ
(28)
ಯ
(0)
ರ
(2)
ಱ
(0)
ಲ
(13)
ವ
(10)
ಶ
(8)
ಷ
(0)
ಸ
(24)
ಹ
(30)
ಳ
(0)
ವಚನಕಾರ: ಅಕ್ಕಮಹಾದೇವಿ
ಅಂಕಿತ ನಾಮ: ಚೆನ್ನಮಲ್ಲಿಕಾರ್ಜುನ
ಕಾಲ: ಹನ್ನೆರಡನೆಯ ಶತಮಾನ
ದೊರಕಿರುವ ವಚನಗಳು: 434 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ: ನಿರ್ಮಲಶೆಟ್ಟಿ ಮತ್ತು ಸುಮತಿ
ಹುಟ್ಟಿದ ಸ್ಥಳ:
ಪರಿಚಯ: ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕಮಹಾದೇವಿ, ನಿರ್ಮಲಶೆಟ್ಟಿ ಮತ್ತು ಸುಮತಿಯರ ಮಗಳು. ತಂದೆ ತಾಯಿಯರ ಹೆಸರು ಕವಿ ಕಲ್ಪನೆ ಇದ್ದೀತು ಅನ್ನುವುದು ಕೆಲವು ವಿದ್ವಾಂಸರ ಅನುಮಾನ. ಹರಿಹರನ ಮಹದೇವಿಯಕ್ಕಗಳ ರಗಳೆಯ ಪ್ರಕಾರ ಊರಿನ ಮುಖ್ಯಸ್ಥ ಕೌಶಿಕ ಮಹದೇವಿಯನ್ನು ಮದುವೆಯಾಗಲು ಬಯಸಿ ಒತ್ತಾಯಿಸಿದ. ಅಕ್ಕ ಶರತ್ತುಗಳನ್ನು ವಿಧಿಸಿ ಮದುವೆಗೆ ಒಪ್ಪಿದರೂ ಕೌಶಿಕ ವಚನ ಭಂಗ ಮಾಡಿದಾಗ ಉಡುಗೆಯನ್ನೂ ತೊರೆದು ಮನೆ ಬಿಟ್ಟು ಹೊರಟುಬಿಡುತ್ತಾಳೆ. ಇನ್ನು ಕೆಲವು ಕಥನಪರಂಪರೆಗಳಲ್ಲಿ ಅಕ್ಕ ಎಳವೆಯಲ್ಲೇ ಚನ್ನಮಲ್ಲಿಕಾರ್ಜುನನನ್ನು ವರಿಸಿದವಳು ಅನ್ನುವುದೂ ಉಂಟು. ಉರಕ್ಕೆ ಜವ್ವನಗಳು ಬಾರದ ಮುನ್ನ ಎಂದು ಆರಂಭವಾಗುವ ಅಕ್ಕನ ವಚನ ನೋಡಿ. ಪರ್ಯಟನೆ ಮಾಡುತ್ತ ಮಹದೇವಿ ಕಲ್ಯಾಣಕ್ಕೆ ಹೋದಳು, ಅಲ್ಲಿಂದ ಶ್ರೀಶೈಲದ ಕದಳಿಯಲ್ಲಿ ಐಕ್ಯಳಾದಳು ಎಂಬ ವಿವರಗಳಿವೆ. ಅಲ್ಲಮ ಮತ್ತು ಅಕ್ಕಮಹಾದೇವಿ ಒಂದೇ ಪ್ರಾಂತದವರು, ಅವರ ಬದುಕಿನ ಕಥೆಗಳಲ್ಲೂ ವೈಚಾರಿಕ ನಿಲುವುಗಳಲ್ಲೂ ಅನೇಕ ಸಾಮ್ಯಗಳಿವೆ. ಈಕೆಯ 434 ವಚನಗಳು ಮತ್ತು ಹಲವು ಹಾಡುಗಳು ದೊರೆತಿವೆ. ಯೋಗಾಂಗ ತ್ರಿವಿಧಿ, ಸೃಷ್ಟಿಯ ವಚನ ಮತ್ತು ಮಂತ್ರಗೋಪ್ಯ ಮಹಾದೇವಿಯ ಇತರ ಕೃತಿಗಳು ಎಂದು ಹೇಳುವುದುಂಟು. ಆದರೆ ಇವುಗಳ ರಚನೆಯನ್ನು ನೋಡಿದರೆ ವಚನಗಳನ್ನು ಸೃಷ್ಟಿಸಿದ ಮನಸ್ಸೇ ಈ ಕೃತಿಗಳನ್ನೂ ರಚಿಸಿತು ಎಂದು ನಂಬುವುದು ಕಷ್ಟವಾಗುವಂತಿದೆ. ಭಾವಗಳ ತೀವ್ರತೆ ಈಕೆಯ ರಚನೆಗಳ ಮುಖ್ಯ ಲಕ್ಷಣ.
ಬಸವಣ್ಣಾ, ನಿಮ್ಮಂಗದಾಚಾರವ ಕಂಡು ಎನಗೆ ಲಿಂಗಸಂಗವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಮನದ ಸುಜ್ಞಾನವ ಕಂಡು ಎನಗೆ ಜಂಗಮಸಂಬಂಧವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತ್ತಯ್ಯಾ. ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ.
ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯಾ ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯಾ ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ. ಅಣ್ಣಾ, ನಾನು ಹೆಂಗೂಸಲ್ಲ ; ಅಣ್ಣಾ, ನಾನು ಸೂಳೆಯಲ್ಲ. ಅಣ್ಣಾ, ಮತ್ತೆ ನನ್ನ ಕಂಡು ಕಂಡು ಆರೆಂದು ಬಂದಿರಣ್ಣಾ ? ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪರಪುರುಷನು ನಮಗಾಗದ ಮೋರೆ ನೋಡಣ್ಣಾ ?
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರು. ಒಬ್ಬ ಭಾವರೂಪ, ಒಬ್ಬ ಪ್ರಾಣರೂಪ ; ಒಬ್ಬ ಐಮುಖವಾಗಿ ಕಾಯರೂಪಾದ ; ಇಬ್ಬರು ಉತ್ಪತ್ತಿ ಸ್ಥಿತಿಗೆ ಕಾರಣವಾದರು. ಐಮುಖನರಮನೆ ಸುಖವಿಲ್ಲೆಂದು ಕೈಲಾಸವ ಹೊಗೆನು, ಮತ್ರ್ಯಕ್ಕೆ ಅಡಿ ಇಡೆನು ; ಚೆನ್ನಮಲ್ಲಿಕಾರ್ಜುನದೇವಾ, ನೀನೇ ಸಾಕ್ಷಿ.
ಬೆರಸುವಡೆ ಬೇಗ ತೋರಾ, ಹೊರ ಹಾಯ್ಕದಿರಯ್ಯಾ. ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು ; ಎನ್ನ ಹೊರ ಹಾಯ್ಕದಿರಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ನಂಬಿ ಬೆಂಬಳಿಬಂದೆನು ಇಂಬುಗೊಳ್ಳಯ್ಯಾ ಬೇಗದಲಿ.
ಬಸವಣ್ಣನ ಮನೆಯ ಮಗಳಾದ ಕಾರಣ ಭಕ್ತಿಪ್ರಸಾದವ ಕೊಟ್ಟನು. ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ ಒಕ್ಕಪ್ರಸಾದವ ಕೊಟ್ಟನು. ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ ಮಗಳಾದ ಕಾರಣ ಜ್ಞಾನಪ್ರಸಾದವ ಕೊಟ್ಟನು. ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ ಪ್ರಾಣಪ್ರಸಾದವ ಸಿದ್ಧಿಸಿಕೊಟ್ಟನು. ಮಡಿವಾಳಯ್ಯನ ಮನೆಯ ಮಗಳಾದ ಕಾರಣ ನಿರ್ಮಲಪ್ರಸಾದವ ನಿಶ್ಚೈಸಿಕೊಟ್ಟನು. ಇಂತೀ ಅಸಂಖ್ಯಾತ ಗಣಂಗಳೆಲ್ಲರು ತಮ್ಮ ಕರುಣದ ಕಂದನೆಂದು ತಲೆದಡಹಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನು.
ಬಸವನ ಭಕ್ತಿ ಕೊಟ್ಟಣದಮನೆ. ಸಿರಿಯಾಳನ ಭಕ್ತಿ ಕಸಬುಗೇರಿ. ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ. ಉಳಿದಾದ ಅಟಮಟ ಉದಾಸೀನ ದಾಸೋಹವ ಮಾಡುವವರ ದೈನ್ಯವೆಂಬ ಭೂತ ಸೋಂಕಿತು. ಮಣ್ಣಿನ ಮನೆಯ ಕಟ್ಟಿ ಮಾಯಾ ಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ ಮಾಡುವ ಮಾಟ. ಭಕ್ತನಲ್ಲಿ ಉಂಡು ಉದ್ದಂಡವೃತ್ತಿಯಲ್ಲಿ ನಡೆವವರು ಶಿವನಲ್ಲ. ಇವರು ದೇವಲೋಕ ಮತ್ರ್ಯಲೋಕಕ್ಕೆ ಹೊರಗು. ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ, ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತ್ತಾಗಿ ನಿರ್ವಯಲಾದೆ ಕಾಣಾ