ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ. ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ ಕಿಚ್ಚಿನೊಳಗೆ ಬಿದ್ದ ಕೀಡೆಯಂತಪ್ಪುದಯ್ಯ. ಸುಚಿತ್ತದಿಂದ ನಿಮ್ಮ ಸದ್ಭಕ್ತರ ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ ಆಪ್ಯಾಯನ ಬಿಡದು. ಕಾಯವರ್ಪಿತವೆಂಬ ಹುಸಿಯ ನೋಡಾ. ನಾನು ಭಕ್ತಳೆಂಬ ನಾಚಿಕೆಯ ನೋಡಾ. ನಾನು ಯುಕ್ತಳೆಂಬ ಹೇಸಿಕೆಯ ನೋಡಾ. ಓಗರವಿನ್ನಾಗದು, ಪ್ರಸಾದ ಮುನ್ನಿಲ್ಲ ; ಚೆನ್ನಮಲ್ಲಿಕಾರ್ಜುನಯ್ಯ ಉಪಚಾರದರ್ಪಿತವನವಗಡಿಸಿ ಕಳೆವ
--------------
ಅಕ್ಕಮಹಾದೇವಿ
ಸೂರ್ಯಪ್ರಕಾಶ ಆಕಾಶದ ವಿಸ್ತೀರ್ಣ, ವಾಯುವಿನ ಚಲನೆಯೆಲ್ಲಾ ಹಗಲಿನ ಪೂಜೆ. ಚಂದ್ರಪ್ರಕಾಶ ನಕ್ಷತ್ರ ಅಗ್ನಿವಿದ್ಯುತ್ತಾದಿ ದೀಪ್ತಿಮಯವೆನಿಸಿಪ್ಪವೆಲ್ಲಾ ಇರುಳಿನ ಪೂಜೆ. ನಿನ್ನ ಪ್ರಕಾಶದಲ್ಲಿ ಎನ್ನ ಮರೆದಿಪ್ಪೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ. ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ ? ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು. ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ.
--------------
ಅಕ್ಕಮಹಾದೇವಿ
ಸತ್ತ ಹೆಣ ಕೂಗಿದುದುಂಟು, ಬೈತಿಟ್ಟ ಬಯಕೆ ಕರೆದುದುಂಟು, ಹೆಪ್ಪಿಟ್ಟ ಹಾಲು ಗಟ್ಟಿಗೊಂಡು ಸಿಹಿಯಾದುದುಂಟು. ಇದ ನಿಶ್ಚೈಸಿ ನೋಡಿ ಚೆನ್ನಮಲ್ಲಿಕಾರ್ಜುನದೇವರಲ್ಲಿ.
--------------
ಅಕ್ಕಮಹಾದೇವಿ
ಸೆಜ್ಜೆಯನುಪ್ಪರಿಸಿ ಶಿವಲಿಂಗ ಕರಸ್ಥಲಕ್ಕೆ ಬರಲು, ಪ್ರಜ್ವಲಿಸಿ ತೊಳತೊಳಗಿ ಬೆಳಗುತ್ತಿಹ ಕಾಂತಿಯೊಳು ಪ್ರಜ್ವಲಿಸಿ, ದೃಷ್ಟಿನಟ್ಟು ಒಜ್ಜರಿಸಿ ಸುರಿವ ಅಶ್ರುಜಲ ಶಿವಸುಖ ಸಾರಾಯನಲ್ಲಿ ಸಜ್ಜನಸತಿಯ ರತಿಯೊಡಗೂಡಿ ಲಜ್ಜೆಗೆಟ್ಟು ನಿಮ್ಮ ನೆರೆದೆನು ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಸುಟ್ಟ ಬೂದಿಯೊಳಗೊಂದು ಸುಡದ ಬೂದಿಯ ಕಂಡೆ, ಆ ಸುಡದ ಬೂದಿಯ ಬೆಟ್ಟವ ಮಾಡಿದಾತನ ಗುಟ್ಟನಾರು ಕಂಡುದಿಲ್ಲ. ನಾನು ಆತನನರಿದು ಶರಣೆಂದು ಬದುಕಿದೆ. ಆ ಬೆಟ್ಟದ ಮೇಲೆ ಅನೇಕ ವಸ್ತುಗಳ ಕಂಡು ಚರಿಸುತ್ತಿದ್ದೇನೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಸುಖದ ಸುಖಿಗಳ ಸಂಭಾಷಣೆಯಿಂದ ದುಃಖಕ್ಕೆ ವಿಶ್ರಾಮವಾಯಿತ್ತು. ಭಾವಕ್ಕೆ ತಾರ್ಕಣೆಯಾದಲ್ಲಿ, ನೆನಹಕ್ಕೆ ವಿಶ್ರಾಮವಾಯಿತ್ತು. ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರ ಸಂಗದಿಂದ.
--------------
ಅಕ್ಕಮಹಾದೇವಿ
ಸತಿ ಎಂಬುದು ಮಾಟ, ಪತಿಯೆಂಬುದು ಮಾಟ, ತನುವೆಂಬುದು ಮಾಯೆ, ಮನವೆಂಬುದು ಮಾಯೆ, ಸುಖವೆಂಬುದು ಮಾಯೆ, ಚೆನ್ನಮಲ್ಲಿಕಾರ್ಜುನನೆನಗೆ ಕೈಹಿಡಿದ ಗಂಡನಲ್ಲದೆ ಮಿಕ್ಕಿನವರೆಲ್ಲರೂ ಮೂಗಿಲ್ಲದ ಬಣ್ಣದ ಬೊಂಬೆಗಳು ಕಾಣಯ್ಯಾ.
--------------
ಅಕ್ಕಮಹಾದೇವಿ
ಸಂಸಾರಸಂಗದಲ್ಲಿರ್ದೆ ನೋಡಾ ನಾನು. ಸಂಸಾರ ನಿಸ್ಸಾರವೆಂದು ತೋರಿದನೆನಗೆ ಶ್ರೀಗುರು. ಅಂಗವಿಕಾರದ ಸಂಗವ ನಿಲಿಸಿ, ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು, ಹಿಂದಣ ಜನ್ಮವ ತೊಡೆದು, ಮುಂದಣ ಪಥವ ತೋರಿದನೆನ್ನ ತಂದೆ. ಚೆನ್ನಮಲ್ಲಿಕಾರ್ಜುನನ ನಿಜವ ತೋರಿದನೆನ್ನ ಗುರು.
--------------
ಅಕ್ಕಮಹಾದೇವಿ
ಸಜ್ಜನೆಯಾಗಿ ಮಜ್ಜನಕ್ಕೆರೆವೆ, ಶಾಂತಳಾಗಿ ಪೂಜೆಮಾಡುವೆ, ಸಮರತಿಯಿಂದ ನಿಮ್ಮ ಹಾಡುವೆ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.
--------------
ಅಕ್ಕಮಹಾದೇವಿ
ಸಂಗನಬಸವಣ್ಣನ ಪಾದವ ಕಂಡೆನಾಗಿ ಎನ್ನ ಅಂಗ ನಾಸ್ತಿಯಾಯಿತ್ತು. ಚೆನ್ನಬಸವಣ್ಣನ ಪಾದವ ಕಂಡೆನಾಗಿ ಎನ್ನ ಪ್ರಾಣ ಬಯಲಾಯಿತ್ತು. ಪ್ರಭುವೆ, ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ ಎನಗೆ ಅರಿವು ಸ್ವಾಯತವಾಯಿತ್ತು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಕರುಣವ ಪಡೆದೆನಾಗಿ ಎನಗಾವ ಜಂಜಡವೂ ಇಲ್ಲವಯ್ಯಾ ಪ್ರಭುವೆ.
--------------
ಅಕ್ಕಮಹಾದೇವಿ
ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ ತಚ್ಫಿಷ್ಯನ ಮಸ್ತಕದ ಮೇಲೆ ತನ್ನ ಹಸ್ತವನಿರಿಸಿದಡೆ ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ. ಒಪ್ಪುವ ಶ್ರೀ ವಿಭೂತಿಯ ನೊಸಲಿಂಗೆ ಪಟ್ಟವಕಟ್ಟಿದಡೆ ಮುಕ್ತಿರಾಜ್ಯದ ಒಡೆತನಕ್ಕೆ ಪಟ್ಟವಕಟ್ಟಿದಂತಾಯಿತ್ತಯ್ಯಾ. ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಕಳಶದಭಿಷೇಕವ ಮಾಡಿಸಲು, ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯಾ. ನೆರೆದ ಶಿವಗಣಂಗಳ ಮಧ್ಯದಲ್ಲಿ ಮಹಾಲಿಂಗವನು ಕರತಳಾಮಳಕವಾಗಿ ಶಿಷ್ಯನ ಕರಸ್ಥಲಕ್ಕೆ ಇತ್ತು, ಅಂಗದಲ್ಲಿ ಪ್ರತಿಷ್ಢಿಸಿ, ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ, ಕಂಕಣವ ಕಟ್ಟಿದಲ್ಲಿ, ಕಾಯವೆ ಕೈಲಾಸವಾಯಿತ್ತು ; ಪ್ರಾಣವೆ ಪಂಚಬ್ರಹ್ಮಮಯಲಿಂಗವಾಯಿತ್ತು. ಇಂತು ಮುಂದ ತೋರಿ ಹಿಂದ ಬಿಡಿಸಿದ ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಸಂಗದಿಂದಲ್ಲದೆ ಅಗ್ನಿ ಹುಟ್ಟದು, ಸಂಗದಿಂದಲ್ಲದೆ ಬೀಜ ಮೊಳೆದೋರದು, ಸಂಗದಿಂದಲ್ಲದೆ ಹೂವಾಗದು. ಸಂಗದಿಂದಲ್ಲದೆ ಸರ್ವಸುಖದೋರದು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು ಪರಮಸುಖಿಯಾದೆನಯ್ಯಾ.
--------------
ಅಕ್ಕಮಹಾದೇವಿ
ಸಟೆ ಹಿರಿದಾಯಿತ್ತು ಇನ್ನೇವೆನಿನ್ನೇವೆ. ದಿಟ ಕಿರಿದಾಯಿತ್ತು ಇನ್ನೇವೆನಿನ್ನೇವೆ. ಡಂಬಕ ಮಿಗಿಲಾಯಿತ್ತು ಇನ್ನೇವೆನಿನ್ನೇವೆ. ನಂಬುಗೆಯೆಯ್ದದಿನ್ನೇವೆನಿನ್ನೇವೆ. ಆಮಿಷ ಘನವಾಯತ್ತಿನ್ನೇವೆನಿನ್ನೇವೆ. ತಾಮಸ ಘನವಾಯಿತ್ತಿನ್ನೇವೆನಿನ್ನೇವೆ. ಚೆನ್ನಮಲ್ಲಿಕಾರ್ಜುನಯ್ಯಾ ಭಕ್ತಿಯೆನ್ನಲ್ಲಿಲ್ಲ ಇನ್ನೇವೆನಿನ್ನೇವೆ.
--------------
ಅಕ್ಕಮಹಾದೇವಿ
ಸತ್ತಾದಡೆ ಶರೀರಂ ಪೋದಡೆ ಪೋಗಲಿ, ಲೋಕದ ಗಂಡರನೊಲ್ಲೆ ; ಲೋಕದ ಹೆಂಡಿರು ಬೇಕಾದೊಡೆ ಮಾಡಿಕೊಳ್ಳೆಲೆ ; ಉರಿಯದಿರು ಉರಿಯದಿರು ಉರಿಯದಿರು. ಚೆನ್ನಮಲ್ಲಿಕಾರ್ಜುನನಲ್ಲದೆ ಲೋಕದ ಗಂಡರು ಎನಗೆ ನೆನೆಯಲು ಬಾರದು, ಸೋಂಕಲಿ ಬಾರದು, ಅಲ್ಲದ ಮೋರೆ ಕಂಡಣ್ಣ.
--------------
ಅಕ್ಕಮಹಾದೇವಿ
ಸಪ್ತಧಾತುಗಳಿಂದ ಬಳಸಲ್ಪಟ್ಟ ಈ ಶರೀರವೆ ಶಿವನ ಪಟ್ಟಣವೆಂದು ಹೇಳಲ್ಪಟ್ಟಿತ್ತು. ಈ ಪಿಂಡವೆಂಬ ಪಟ್ಟಣದಲ್ಲಿ ಸೂಕ್ಷ್ಮವಾದಂಥಧಾರಾಕಾಶದಿಂದ ಮನೋಹರವಾಗಿದ್ದ ಹೃದಯಕಮಲವೆ ಅಂತಃಪುರವು. ಅಲ್ಲಿ ನಿತ್ಯಪರಿಪೂರ್ಣತ್ವದಿಂದ ಸಿದ್ಧನಾಗಿ ಸಚ್ಚಿದಾನಂದವೇ ಕುರುಹಾಗುಳ್ಳ ಪರಮಶಿವನು ಜಲದಲ್ಲಿ ತೋರುತ್ತಿರ್ದ ಆಕಾಶದೋಪಾದಿಯಲ್ಲಿ ಪ್ರತ್ಯಕ್ಷವಾಗಿ ಪ್ರಕಾಶವೇ ಸ್ವರೂಪವಾಗುಳ್ಳಾತನಾಗಿ ಇರುತಿರ್ದನು. ಆ ಜಲಮಧ್ಯದಲ್ಲಿಯ ಆಕಾಶ ಬಿಂಬದಲ್ಲಿರುತಿರ್ದ ಘಟಾಕಾಶದೋಪಾದಿಯಲ್ಲಿ [ಅ]ಖಂಡಿತನಾಗಿರ್ದ ಚಿದ್ರೂಪನಾದ ಶಿವನನು ಭಾವಿಸುವುದಯ್ಯ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.
--------------
ಅಕ್ಕಮಹಾದೇವಿ
ಸ್ಥಾನಭೇದ ಸಂಶಯ ಆಧಾರ ಸ್ವಾದಿಷ್ಟ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೆ ಎಂಬ ಷಟ್‍ಚಕ್ರಂಗಳ ವರ್ತನೆಯ ನುಡಿದಡೇನು ? ಆದಿ ಅನಾದಿಯ ಕೇಳಿದಡೇನು ? ತನ್ನಲ್ಲಿದ್ದುದ ತಾನರಿಯದನ್ನಕ್ಕ ಉನ್ಮನಿಯ ರಭಸದ ಸಿಂಹಾಸನದ ಮೇಲೆ ಚೆನ್ನಮಲ್ಲಿಕಾರ್ಜುನನ ಭೇದಿಸಲರಿಯರು.
--------------
ಅಕ್ಕಮಹಾದೇವಿ
ಸಾವಿರ ಹೊನ್ನಿಂಗೆ ಸಾದಕೊಂಡು ಸುಣ್ಣವ ಬೆರಸಿದಂತೆ ಮಾಡಿದೆಯಯ್ಯಾ. ಮೂರು ಲಕ್ಷದ ಬೆಲೆಗೆ ರತ್ನವ ಕೊಂಡು ಮಡುವಿನಲ್ಲಿ ಇಟ್ಟಂತೆ ಮಾಡಿದೆಯಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಮುಟ್ಟಿ ಪಾವನವ ಮಾಡಿ ಕಷ್ಟಸಂಸಾರಿಗೊಪ್ಪಿಸುವಂತೆ ಮಾಡಿದೆಯಯ್ಯಾ.
--------------
ಅಕ್ಕಮಹಾದೇವಿ
ಸಂಸಾರವ ನಿರ್ವಾಣವ ಮಾಡಿ, ಮನವ ವಜ್ರತುರಗವ ಮಾಡಿ, ಜೀವವ ರಾವುತನ ಮಾಡಿ, ಮೇಲಕ್ಕೆ ಉಪ್ಪರಿಸಲೀಯದೆ, ಮುಂದಕ್ಕೆ ಮುಗ್ಗರಿಸಲೀಯದೆ ಈ ವಾರುವನ ಹಿಂದಕ್ಕೆ ಬರಸೆಳೆದು ನಿಲಿಸಿ, ಮೋಹರವಾಗಿದ್ದ ದಳದ ಮೇಲೆ, ಅಟ್ಟಿ ಮುಟ್ಟಿ ತಿವಿದು ಹೊಯಿದು ನಿಲಿಸಲರಿಯದೆ, ಧವಳಬಣ್ಣದ ಕೆಸರುಗಲ್ಲ ಮೆಟ್ಟಿ ತೊತ್ತಳದುಳಿವುತ್ತಲು ಇದಾರಯ್ಯಾ. ಅಂಗಡಿಯ ರಾಜಬೀದಿಯೊಳಗೆ ಬಿದ್ದ ರತ್ನಸೆಟ್ಟಿ ಈ ಥಳಥಳನೆ ಹೊಳೆವ ಪ್ರಜ್ವಲಿತವ ಕಾಣದೆ ಹಳಹಳನೆ ಹಳಸುತ್ತೈದಾರೆ ಅಯ್ಯಾ. ಆಧಾರಸ್ಥಾನದ ಇಂಗಳವನಿಕ್ಕಿ ವಾಯು ಪವನದಿಂದ ನಿಲಿಸಲು, ಆ ಅಗ್ನಿಯ ಸೆಕೆ ಹೋಗಿ ಬ್ರಹ್ಮರಂಧ್ರವ ಮುಟ್ಟಲು, ಅಲ್ಲಿರ್ದ ಅಮೃತದ ಕೊಡನೊಡೆದು ಕೆಳಗಣ ಹೃದಯಸ್ಥಾನದ ಮೇಲೆ ಬೀಳಲ್ಕೆ, ಮರಸಿದ ಮಾಣಿಕ್ಯದ ಬೆಳಗು ಕಾಣಬಹುದು. ಇದನಾರಯ್ಯಾ ಬಲ್ಲರು :ಹಮ್ಮಳಿದ ಶರಣರ ಮೇಲೆ ? ಇಹಪರವ ಬಲ್ಲ ಶರಣ, ಪಂಚೇಂದ್ರಿಯದ ಇಂಗಿತವ ಬಲ್ಲ ಶರಣ. ಒಡಲ ಬಿಟ್ಟ ಶರಣನಲ್ಲದೆ ಉಳಿದ ಪ್ರಾಣಘಾತಕ ಪಾತಕರಿವರೆತ್ತಲು, ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣಂಗಲ್ಲದೆ ?
--------------
ಅಕ್ಕಮಹಾದೇವಿ
ಸಟೆದಿಟವೆಂಬ ಎರಡುವಿಡಿದು ನಡೆವುದೀ ಲೋಕವೆಲ್ಲವು. ಸಟೆದಿಟವೆಂಬ ಎರಡುವಿಡಿದು ನುಡಿವುದೀ ಲೋಕವೆಲ್ಲವು. ಸಟೆದಿಟವೆಂಬ ಎರಡುವಿಡಿದು ನಡೆವನೆ ಶರಣನು ? ಗುರುಲಿಂಗಜಂಗಮದಲ್ಲಿ ಸಟೆಯ ಬಳಸಿದಡೆ ಅವನು ತ್ರಿವಿಧಕ್ಕೆ ದ್ರೋಹಿ, ಅಘೋರ ನರಕಿ. ಉಂಬುದೆಲ್ಲ ಕಿಲ್ಬಿಷ, ತಿಂಬುದೆಲ್ಲ ಅಡಗು, ಕುಡಿವುದೆಲ್ಲ ಸುರೆ. ಹುಸಿಯೆಂಬುದೆ ಹೊಲೆ, ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯಾ ? ಹುಸಿಯನಾಡಿ ಲಿಂಗವ ಪೂಜಿಸಿದಡೆ ಹೊಳ್ಳ ಬಿತ್ತಿ ಫಲವನರಸುವಂತೆ,
--------------
ಅಕ್ಕಮಹಾದೇವಿ
ಸಾಕ್ಷಿ ಸತ್ತಿತ್ತು, ಪತ್ರ ಬೆಂದಿತ್ತು, ಲೆಕ್ಕ ತುಂಬಿತ್ತು, ಜೀವ ಜೀವಿತದ ಆಸೆ ನಿಂದುದು, ಭಾಷೆ ಹೋಯಿತ್ತು, ದೇಶವೆಲ್ಲರಿಯೆ ಎನ್ನ ದೇವ ಚೆನ್ನಮಲ್ಲಿಕಾರ್ಜುನನ ನಂಬಿ ಹಂಬಲ ಮರೆದೆನಾಗಿ.
--------------
ಅಕ್ಕಮಹಾದೇವಿ
ಸಂಸಾರವೆಂಬ ಹಗೆಯಯ್ಯಾ ಎನ್ನ ತಂದೆ. ಎನ್ನ ವಂಶವಂಶದಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯಾ. ಎನ್ನುವನರಸಿಯರಸಿ ಹಿಡಿದು ಕೊಲುತ್ತಿದೆಯಯ್ಯಾ. ನಿನ್ನ ನಾ ಮರೆಹೊಕ್ಕೆ ಕಾಯಯ್ಯಾ. ಎನ್ನ ಬಿನ್ನಪವನವಧರಿಸಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಸುಖಸಾರಾಯ ಸುಶೀಲರನುವ ಸುಖಸಾರಾಯರೆ ಬಲ್ಲರು. ನಿಸ್ಸೀಮರು ನಿಸ್ಸೀಮರು ನೆರೆವಲ್ಲಿ ಪರಮಸುಖಿಗಳ ಬಲ್ಲರು. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಲಿಂಗೈಕ್ಯರನುವ ಲಿಂಗೈಕ್ಯರೆ ಬಲ್ಲರು.
--------------
ಅಕ್ಕಮಹಾದೇವಿ