ಸಂಸಾರವ ನಿರ್ವಾಣವ ಮಾಡಿ,
ಮನವ ವಜ್ರತುರಗವ ಮಾಡಿ,
ಜೀವವ ರಾವುತನ ಮಾಡಿ,
ಮೇಲಕ್ಕೆ ಉಪ್ಪರಿಸಲೀಯದೆ,
ಮುಂದಕ್ಕೆ ಮುಗ್ಗರಿಸಲೀಯದೆ
ಈ ವಾರುವನ ಹಿಂದಕ್ಕೆ ಬರಸೆಳೆದು ನಿಲಿಸಿ,
ಮೋಹರವಾಗಿದ್ದ ದಳದ ಮೇಲೆ,
ಅಟ್ಟಿ ಮುಟ್ಟಿ ತಿವಿದು ಹೊಯಿದು ನಿಲಿಸಲರಿಯದೆ,
ಧವಳಬಣ್ಣದ ಕೆಸರುಗಲ್ಲ ಮೆಟ್ಟಿ
ತೊತ್ತಳದುಳಿವುತ್ತಲು ಇದಾರಯ್ಯಾ.
ಅಂಗಡಿಯ ರಾಜಬೀದಿಯೊಳಗೆ ಬಿದ್ದ ರತ್ನಸೆಟ್ಟಿ
ಈ ಥಳಥಳನೆ ಹೊಳೆವ ಪ್ರಜ್ವಲಿತವ ಕಾಣದೆ
ಹಳಹಳನೆ ಹಳಸುತ್ತೈದಾರೆ ಅಯ್ಯಾ.
ಆಧಾರಸ್ಥಾನದ ಇಂಗಳವನಿಕ್ಕಿ
ವಾಯು ಪವನದಿಂದ ನಿಲಿಸಲು,
ಆ ಅಗ್ನಿಯ ಸೆಕೆ ಹೋಗಿ ಬ್ರಹ್ಮರಂಧ್ರವ ಮುಟ್ಟಲು,
ಅಲ್ಲಿರ್ದ ಅಮೃತದ ಕೊಡನೊಡೆದು
ಕೆಳಗಣ ಹೃದಯಸ್ಥಾನದ ಮೇಲೆ ಬೀಳಲ್ಕೆ,
ಮರಸಿದ ಮಾಣಿಕ್ಯದ ಬೆಳಗು ಕಾಣಬಹುದು.
ಇದನಾರಯ್ಯಾ ಬಲ್ಲರು :ಹಮ್ಮಳಿದ ಶರಣರ ಮೇಲೆ ?
ಇಹಪರವ ಬಲ್ಲ ಶರಣ, ಪಂಚೇಂದ್ರಿಯದ ಇಂಗಿತವ ಬಲ್ಲ ಶರಣ.
ಒಡಲ ಬಿಟ್ಟ ಶರಣನಲ್ಲದೆ ಉಳಿದ ಪ್ರಾಣಘಾತಕ ಪಾತಕರಿವರೆತ್ತಲು,
ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣಂಗಲ್ಲದೆ ?