ಐದು ಕೇರಿಯ ಮುಂದೆ ಒಂದು ಗ್ರಾಮವ ಕಂಡೆನಯ್ಯ, ಆ ಗ್ರಾಮದ ಮುಂದೆ ಒಂದು ಗುಡಿಯ ಕಂಡೆನಯ್ಯ. ಆ ಗುಡಿಯೊಳಗೊಬ್ಬ ಪುರುಷನು ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ! ಆ ಪುರುಷನ ಸರ್ಪ ನುಂಗಿ, ಆ ಸರ್ಪನ ಕಪ್ಪೆ ನುಂಗಿ ನಿರ್ವಯಲಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
ಐದು ಬಹಲ್ಲಿ ಒಂದಾಗಿ ಬಂದ ಮಾಯೆಯ, ಮೂರು ಬಹಾಗ ಮುಂದೆ ಬಂದ ಮಾಯೆಯ, ಆರೂ ಹಿಂಗಬಾರದು. ಒಂದು ಎಂಬನ್ನಕ್ಕ ಸಂದೇಹದ ಮಾಯೆ ಕೊಂದು ಕೂಗುತ್ತಿದೆ. ಇನ್ನೆಂದಿಂಗೆ ನೀನಳಿವೆ? ಇನ್ನೆಂದಿಂಗೆ ನಾನುಳಿವೆ? ಎಂಬ ಸಂದೇಹ ಸದಾಶಿವಮೂರ್ತಿಲಿಂಗದಲ್ಲಿಯೆ ಅಳಿಯಿತ್ತು.
ಐದಿಂದ್ರಿಯವನರಿತಲ್ಲದೆ, ಒಂದಿಂದ್ರಿಯಕ್ಕೆ ಸಂದ ಗುಣವನರಿಯಬಾರದು. ಆ ಗುಣ ಏಕಮೂರ್ತಿ ತ್ರಿವಿಧರೂಪಾದ ಕಾರಣ. ಪೂಜೆಯೆಂಬುದ ಪುಣ್ಯವೆಂಬ ಭಾವವಿಲ್ಲದೆ ಮಾಡಿದಡೆ ನಮ್ಮ ಗುಹೇಶ್ವರಲಿಂಗಕ್ಕೆ ಅನ್ಯವಿಲ್ಲ ಕಾಣಾ ಚಂದಯ್ಯ