ಡಂಬಕದ ಪೂಜೆ ಹೋಹ ಹೊತ್ತಿನ ಕೇಡು. ಆಡಂಬರದ ಪೂಜೆ ತಾಮ್ರದ ಮೇಲಣ ಸುವರ್ಣದ ಛಾಯೆ. ಇಂತೀ ಪೂಜೆಗೆ ಹೂ ಸೊಪ್ಪನಿಕ್ಕಿ ಮನ ಹೂಣದೆ ಮಾಡುವ ಪೂಜೆ ಬೇರು ನನೆಯದೆ ನೀರು, ಆಯವಿಲ್ಲದ ಗಾಯ, ಭಾವವಿಲ್ಲದ ಘಟ ವಾಯವೆಂದ ನಾರಾಯಣಪ್ರಿಯ ರಾಮನಾಥಾ.
ಡೊಂಕನ ಕೊಂಡು ಡೊಂಕನ ಕಾಡುವಡೆ ನಮ್ಮ ಡೊಂಕನೆ ಸಾಲದೆ ? ಕೆಮ್ಮುವನಾದಡೆ ನಮ್ಮವನೆ ಸಾಲದೆ ? ಎಂಬ ಲೋಕದ ಗಾದೆಯ ಮಾತಿನಂತೆ; ಈ ಡೊಂಕನ ಕೊಂಡು ಸಸಿನವ ಕೊಡಬಲ್ಲಡೆ ಅವರ ಹಿರಯರೆಂಬೆ ಗುರುವೆಂಬೆ. ಅವರಿಗೆ ನಮೋ ನಮೋ ಎಂಬೆ. ಈ ಡೊಂಕನ ಕೊಂಡು ಸಸಿನವ ಕೊಡಲರಿಯದಿದ್ದಡೆ, ಆ ಗುರುವಿಂಗೆ ಏಳನೆಯ ನರಕ, ಭವಘೋರದಲ್ಲಿ ಓಲಾಡುತ್ತಿಹ. ಇದು ಕಾರಣ, ಡೊಂಕನ ಕೊಂಡು ಸಸಿನವ ಕೊಡಬಲ್ಲ ಗುರು, ಅಪೂರ್ವ ಕಾಣಾ ಗುಹೇಶ್ವರಾ.