ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ. ಬಲೆಯ ಬೀಸುವ ಗಂಡರಾರೂ ಇಲ್ಲ, ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ. ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ. ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು, ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು. ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?) ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು. ಹತ್ತೆ ಸಾರಿದ ಮೃಗವ ತಾನೆಚ್ಚಡೆ ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು. ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು. ಗುಹೇಶ್ವರಾ ನಿಮ್ಮ ಶರಣ ಕಟ್ಟಿದಿರ ಬಾಣಸದ ಮನೆಗೆ ಬಂದನು.
--------------
ಅಲ್ಲಮಪ್ರಭುದೇವರು
ಧನ ಧಾನ್ಯ ಅಷ್ಟಮಹದೈಶ್ವರ್ಯದೊಳು ಮನ ಹೀನನಾಗಿ ಮಾರ್ಗತಪ್ಪಿತು. ಬೆನಕನ ಮದುವೆಯಂತೆಯಾಯಿತು. ಇಂದು ನಾಳೆಯೆಂಬ ಸಂದೇಹಮಾತ್ರದಿಂದ ವನಿತೆ ಸುತ ಮಿತ್ರ ಕಳತ್ರಯದಿಂದ ಅನಾಚಾರ ಹೊಂದಿತು. ಮುನಿವ ವೈರಿಯ ಕೈಯ ಚಂದ್ರಾಯುಧದ ಮೊನೆಗೆ ಇದಿರು ಆದಂತಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಧರೆಯನಾಳುವ ಪರವಾದಿ ಬಿಜ್ಜಳನು ಮಡಿವಾಳಯ್ಯಗಳು ಕರೆಯಕಳುಹಿದರೆ ಬಾರದಿರಲು ಪಟ್ಟದಾನೆಯ ಮೇಲೆ ಪರಿಪರಿಬಣ್ಣ ಸಣ್ಣವಸ್ತ್ರವ ಹೇರಿಸಿ ಶರದ್ಥಿಯ ಮುಂದೆ ನೀ ನೂಕಿ ಬಾಯೆಂದು ಕಳುಹಲು, ಬರುವ ಪಟ್ಟದಾನೆಯ ಕಂಡು ಕಂಗೆಡದೆ ಕಡೆಗೋಡದೆ ತಟ್ಟನೆ ಸೀಳಿ ನಿಟ್ಟೆಲುವ ಮುರಿದು ಹೊದಕೆಯ ಮುರಿಗಿ ಮಾಡಿ ತಲೆಯ ಹರಿಯಲಿಟ್ಟು ದುಕೂಲವ ಸುಟ್ಟು ಪರಿಚಾರರ ನೆರೆಯಟ್ಟಿ ತಲೆಗಳ ಕುಟ್ಟುವದ ಕೇಳಿ ಕಂಗೆಟ್ಟು ಕಾಲಿಗೆರಗಲು ಕರುಣವ ಪಡೆದ ನಿಷ್ಠೆಯ ವೀರಮಡಿವಾಳಯ್ಯಗಳಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗಬ್ರ್ಥೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಬ್ಥೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಧೂಳುಪಾವಡವಾದಲ್ಲಿ ಆವ ನೀರನು ಹಾಯಬಹುದು. ಕಂಠಪಾವಡದಲ್ಲಿ ಉರದಿಂದ ಮೀರಿ ಹಾಯಲಾಗದು. ಸರ್ವಾಂಗಪಾವಡದಲ್ಲಿ ಹೊಳೆ ತಟಾಕ ಮಿಕ್ಕಾದ ಬಹುಜಲಂಗಳ ಮೆಟ್ಟಲಾಗದು. ಅದೆಂತೆಂದಡೆ ಆ ಲಿಂಗವೆಲ್ಲವು ವ್ರತಾಚಾರ ಲಿಂಗವಾದ ಕಾರಣ. ತಮ್ಮ ಲಿಂಗದ ಮಜ್ಜನದ ಅಗ್ಗಣಿಯಲ್ಲದೆ ತಮ್ಮಂಗವ ಮುಟ್ಟಲಾಗದು. ಇಂತೀ ಇವು ತಾವು ಕೊಂಡ ವ್ರತದಂಗದ ಭೇದವಲ್ಲದೆ ನಾನೊಂದು ನುಡಿದುದಿಲ್ಲ. ಇದಕ್ಕೆ ನಿಮ್ಮ ಭಾವವೆ ಸಾಕ್ಷಿ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ವ್ರತದಂಗದ ಭೇದ.
--------------
ಅಕ್ಕಮ್ಮ
ಧರಣಿಯ ಪಸರಿಸಿ, ಉರಗನನಡಿಯಿಟ್ಟು ಶರದ್ಥಿಯೇಳಕ್ಕೆ ಎರದನೊಕ್ಕುಡಿತೆ ಉದಕವ ಹರಿಯಜ ಸುರರಿಗೆ ಪರಿಪರಿಯ ಲೋಕವ ಕೊಟ್ಟು ಅರಿದಂತಿರ್ದ ಕಾಣಾ! ರಾಮನಾಥ
--------------
ಜೇಡರ ದಾಸಿಮಯ್ಯ
ಧರೆಯ ಮೇಲೆ ಹರಡಿರುವ ಶಿಲೆಯ ತಂದು ಕಲ್ಲುಕುಟಿಕ ಕಟೆದು ಲಿಂಗವ ಮಾಡಿದರೆ ಅದೆಂತು ಲಿಂಗವೆಂಬೆನಯ್ಯ ? ಅದು ಶಿಲೆಯು. ಆ ಲಿಂಗವ ತಂದು, ಗುರುವಿನ ಕೈಯಲ್ಲಿ ಕೊಟ್ಟು ದೀಕ್ಷೆ ಉಪದೇಶವಂ ಮಾಡಿ, ಆ ಲಿಂಗವ ಧರಿಸಿಕೊಂಡು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ, ಶಿಲಾಲಿಖಿತವ ತೊಡೆದು ಕಲಾಭೇದವನರಿದು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳನರಿದು ಇರಬಲ್ಲ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆಯ ಉದಕ ಮಾರುತನ ಸಂಗದಿಂದ, ಆಕಾಶಕ್ಕೆ ಎಯ್ದಿ ಭುವನಕ್ಕೆ ಸೂಸುವಂತೆ, ಆತ್ಮವಸ್ತುವಿನಲ್ಲಿ ಎಯ್ದಿ ವಸ್ತುವ ಬೆರಸುವಂತೆ, ಇದು ನಿಶ್ಚಯವೆಂದರಿದ ಆ ಚಿತ್ತ ಇಷ್ಟಲಿಂಗವೇ ಮೂರ್ತಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಧ್ಯಾನ ಧಾರಣ ಸಮಾದ್ಥಿಯೆಂಬೀ ಮೂರು, ಕರ್ಮಕಾಂಡ. ಚಿಚ್ಛಕ್ತಿ ಚಿದ್ಘನ ಸುಶಕ್ತಿ ಚಿದಾದಿತ್ಯಸಂಪದ ತ್ರಿವಿಧಭೇದ, ಜ್ಞಾನಕಾಂಡ. ಇಂತೀ ಭಾವ, ನಿಜವ ನೆಮ್ಮಿ ಕುರುಹುದೋರದೆ, ಭಾವ ನಿರ್ಭಾವವಾಗಿ ನಿಂದುದು ಪ್ರಾಣಲಿಂಗಸಂಬಂಧ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಧರಣಿಯನಾಳುವ ಅರಸಿಂಗೆ, ಮಾರಿಯ ಭಯ, ಭೂರಿಯ ಭಯ, ಚೋರ ಭಯ. ಅಗ್ನಿಯ ಭಯ, ಹಿರಿದಪ್ಪ ಅರಿರಾಯರ ಭಯ. ಇವೈದು ಭಯಕಂಜಿ, ಅಷ್ಟದಳಮಂಟಪದ ಕೋಣೆಯ ನೆರೆ ಪೂರ್ವದಿಕ್ಕಿನ ರಾಜ್ಯಕ್ಕೊಳಿತಂ ಬಯಸಿ, ಅಗ್ನಿಕೋಣೆಯ ರಾಜ್ಯವ ಭಕ್ಷಿಪೆನೆಂದು, ಯಮದಿಕ್ಕಿನ ರಾಜ್ಯವ ಕ್ರೋಧದಲ್ಲುರುಹುವೆನೆಂದು, ನೈಋತ್ಯದಿಕ್ಕಿನ ರಾಜ್ಯವ ಮರತು ಮಲಗಿಸುವೆನೆಂದು, ವರುಣದಿಕ್ಕಿನ ರಾಜ್ಯಕ್ಕೆ ಸತ್ಯವ ಬಯಸಿ, ವಾಯುವ್ಯದಿಕ್ಕಿನ ರಾಜ್ಯವ ಗಾಳಿಗಿಕ್ಕಿ ಹಾರಿಸುವೆನೆಂದು, ಕುಬೇರದಿಕ್ಕಿನ ರಾಜ್ಯಕ್ಕೆ ಧರ್ಮನು ಬಯಸಿ ಈಶಾನ್ಯಕೋಣೆಯ ರಾಜ್ಯದ ಹೆಣ್ಣ ವಿಷಯತೂರ್ಯದಲ್ಲಿ ದಳೆಯ ಹಿಡಿವೆನೆಂದು, ಅಷ್ಟದಿಕ್ಕಿನ ರಾಜ್ಯದ ನಟ್ಟನಡುವೆ ಕಷ್ಟಬಡುತಿರ್ಪ ಅರಸಿನ ಕಳವಳಿಕೆ ; ಬುದ್ಧಿಗುಡುವ ಮಂತ್ರಿ, ಕಪಿಚಾಷ್ಠಿ ತಂತ್ರಿ, ತಾಮಸಬುದ್ಧಿ ದಳವಾಯಿಗಳು, ದಶಗುಣಿಗಳು ಮನ್ನೆಯ ನಾಯಕರು, ಮದಡರು ಪಾಯದಳ. ಪರಿಯಾಟಗೊಳಿಸುವ ಅರಸಿನ ಪ್ರಜೆ ಪರಿವಾರ ಮಂತ್ರಿಮನ್ನೆಯರನೆಲ್ಲ ಕೈಸೆರೆಯ ಹಿಡಿದು ಆಳುವ ಅಂಗನೆ ರಾಜ್ಯಾದ್ಥಿಪತಿಯಾದುದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಧರಿಸಿರೊ ಶ್ರೀ ರುದ್ರಾಕ್ಷಿಯ ಬಾಹು ಉರ ಕಂಠ ಕರ್ಣ ಮಸ್ತಕದಲ್ಲಿ ಒಲಿದು. ಪದ : ಹರನಕ್ಷಿ ಜಲದಲ್ಲುದಯವಾಗಿ ಮುನಿ ವರ ವಿಶ್ವಾಮಿತ್ರ ಗೌತಮ ವಶಿಷ್ಠರ ನೆರೆ ಮುಕ್ತರ ಮಾಡಿ ಕೈಲಾಸಪದದೊಳ ಗಿರಿಸುವ ಭಸಿತ ರುದ್ರಾಕ್ಷಿಯನೊಲಿದು. | 1 | ನೆತ್ತಿಯೊಳಗೆ ತ್ರಯ ಶಿಖಿಗೇಕ ಮೇಣ್ ಚಿತ್ತಸಮಸ್ತಕೆ ಧಾರಣಗಳು ಅದ ರೊತ್ತಿಲಿ ಕರ್ಣಕುಂಡಲಕೆ ಏಕೈ ಕೆಂದು ವಿಸ್ತರಿಸಿ ರುದ್ರಾಕ್ಷಿಯನೊಲಿದು. | 2 | ಕೊರಳೊಳು ಬತ್ತೀಸ ಉರದೊಳು ಮಹಾ ಸರ ಅಷ್ಟಶತಮಾಲೆಯನುವೆ ನೀವು ಕರಕಂಕಣಕೆ ದಶಬಾಹುಪೂರಕೆ ನೆರೆ ಷೋಡಶ ರುದ್ರಕ್ಷಿಯನೊಲಿದು. | 3 | ಕರದಂಘ್ರಿಮಾಲೆಗೆ ದಶವೇಕ ಮಹಾಜಪ ಸರ [ಕೂಡಿಕೊಂಡು ಲೇಸೆಂದು] ಮೇಣ್ ವಿರಚಿಸಿ ಶಿವಪೂಜೆಯನು ಮಾಡೆ ಕರ್ಮ ಗಿರಿಗೊಜ್ರವೆನಿಪ ರುದ್ರಾಕ್ಷಿಯನೊಲಿದು. | 4 | ಇನಿತು ತೆರದ ರುದ್ರಾಕ್ಷಿಯ ಮಹಾ ಘನವೆಂಬಲ್ಲಿ ಮುಕ್ತಿಯ ಸಾರ ತ್ರಿಣಯ ಸದ್ಗುರು ಪಡುವಿಡಿ ಸಿದ್ಧಮಲ್ಲನಾ ನೆನವ ತೋರುವ ತತ್ವಚಿಂತಾಮಣಿಯನೊಲಿದು. | 5 |
--------------
ಹೇಮಗಲ್ಲ ಹಂಪ
ಧ್ಯಾನದಿಂದ ಮನದ ಕೊನೆಯಲ್ಲಿ ವಸ್ತುವ ಕಟ್ಟಿತಂದು ಇಷ್ಟಲಿಂಗದ ಗೊತ್ತಿನಲ್ಲಿ ಬೈಚಿಟ್ಟಿರಬೇಕೆಂಬುದು ಇದಾರ ದೃಷ್ಟವಯ್ಯಾ ? ಆ ದೃಷ್ಟಕ್ಕೆ ಆ ಮೂರ್ತಿ ಒಂದೆಂಬುದನರಿಯದೆ ನೆನೆವುದು ನೆನೆಹಿಸಿಕೊಂಬುದು ಉಭಯವಾದಲ್ಲಿ ಸಂದೇಹದ ಸಂದು. ಆ ಸಂದನಳಿದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನು ತಾನೆ.
--------------
ಪ್ರಸಾದಿ ಭೋಗಣ್ಣ
ಧರೆಯಾಕಾಶವಿಲ್ಲದಂದು, ತ್ರೈಮಂಡಲ ನೆಲೆಗೊಳ್ಳದಂದು, ಹೋಮ ನೇಮ ಜಪ ತಪವಿಲ್ಲದಂದು ನಿಮ್ಮನಾರು ಬಲ್ಲರು ? ಹರಿ ಬ್ರಹ್ಮಾದಿಗಳಿಗೆ ಅಗೋಚರ, ನಿರ್ಲೇಪ ನಿರಂಜನನಾಗಿ_ ವೇದಂಗಳರಿಯವು, ಶಾಸ್ತ್ರ ಸ್ಮೃತಿಗಳು ನಿಮ್ಮನರಿಯವು. ಗಗನಕಮಲಕುಸುಮ ಪರಿಮಳದಿಂದತ್ತತ್ತಲು ಗುಹೇಶ್ವರಾ ನಿಮ್ಮ ನಿಲವನಾರು ಬಲ್ಲರು ?
--------------
ಅಲ್ಲಮಪ್ರಭುದೇವರು
ಧನವ ಪಡೆದು ವಿಭೋಗವನರಿಯದ ಲೋಬ್ಥಿಗೆ ಸಿರಿಯೇಕೆ ಬಯಸುವಂತೆ ? ಲೇಸ ಕಂಡು, ಮನ ಬಯಸಿ, ಪಂಚಭೂತಿಕ ಸುಯ್ದು ಮರುಗುವಂತೆ, ಕನ್ನೆ ಅಳಿಯಳು, ಕನ್ನೆ ಉಳಿಯಳು. ಜವ್ವನ ತವಕದಿಂದ ಅವಳು ಕಂಗಳ ತಿರುಹುತ್ತ ಮತ್ತೊಬ್ಬಂಗೊಲಿದಡೆ, ಅದೆಂತು ಸೈರಿಸುವೆ ? ನಿಧಾನವ ಕಾಯ್ದಿಪ್ಪ ಬೆಂತರನಂತೆ ನೋಡಿ ಸೈರಿಸುವೆ? ಸಂಸಾರದಲ್ಲಿ ಹುಟ್ಟಿ, ಭಕ್ತಿಯನರಿಯದ ಭವದುಃಖಿಯ ಕಂಡು, ಸಕಳೇಶ್ವರದೇವ ನಗುವ.
--------------
ಸಕಳೇಶ ಮಾದರಸ

ಇನ್ನಷ್ಟು ...
-->