ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಜಂಗಮವೆಂದಡೆ ನಡೆನುಡಿ ಸಿದ್ಧಿಯಾಗಿರಬೇಕು. ಮೂರು ಮಲಕ್ಕೆ ಸಿಕ್ಕದೆ, ಆರರಡಿಗೆ ಅ[ಡಿ]ಮೆಯಾಗದೆ, ಆ ಗುಣ ತೋರುವುದಕ್ಕೆ ಮೊದಲೆ ಮೀರಿ ಇರಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜಡಶೀಲಗಳ ಹೊತ್ತು ಕೆಡುವೊಡಲಹೊರೆವ ತುಡುಗುಣಿಗಳಾಚಾರಕ್ಕಗಣಿತ ನೋಡಾ ನಮ್ಮ ವೀರಮಾಹೇಶ್ವರನು. ಮನದಿಚ್ಫೆಗನುವಾದ ತನುಸುಖಪದಾರ್ಥವನು ದಿನದಿನಕ್ಕೆ ವ್ರತವೆಂದು ತಿನಬಂದ ಶುನಕನಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮುಟ್ಟುತಟ್ಟುಗಳಿಂದೆ ಕೆಟ್ಟೆನಲ್ಲಾಯೆಂದು ಕಟ್ಟುಕಾವಲಿಗೊಂಡು ಕೆಟ್ಟಸಿಟ್ಟುಗಳಿಂದೆ ಬಟ್ಟೆಯನು ಹಿಡಿವ ಪಟ್ಟುಗುಡುವನಂತಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮತ್ತೆಂತೆಂದೊಡೆ : ಪರಧನ ಪರಸತಿ ಪರಹಿಂಸೆ ಪರನಿಂದೆ ಪರದೈವ ಪರಸಮಯಾದಿ ದುರಾಸೆವಿಡಿದು ನಡೆಯದಿಹುದೇ ಶೀಲ ನೋಡಾ ನಮ್ಮ ವೀರಮಾಹೇಶ್ವರಂಗೆ. ತನು ಮನ ಪ್ರಾಣಾದಿ ಸಕಲ ಕರಣಾದಿ ಗುಣವಳಿದು ಗುರುನಿರಂಜನ ಚನ್ನಬಸವಲಿಂಗನ ನೆನಹು ಬಿಡದಿಹುದೇ ವ್ರತ ನೋಡಾ ನಮ್ಮ ವೀರಮಾಹೇಶ್ವರಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಗತ್ಪ್ರಪಂಚ ಮಾಡಿ, ಆ ಜಗದಲ್ಲಿ ಜೀವರೂಪಿಂದ ಬಳಿಸಂದನೆಂದು ಹೇಳುವ ಶ್ರುತಿಯಂತಿರಲಿ, ಜೀವನೆ ಶಿವನಾದಡೆ ಶೋಕ ಮೋಹ ಋಣ ರೋಗ ಪುಣ್ಯ ಪಾಪ ಕಾಲ ಕಲ್ಪಿತ ಪ್ರಳಯ ಪ್ರಕೃತಿ ಸಂಸಾರಪಾಶಬದ್ಧವುಂಟೆ? ಇವೆಲ್ಲವೂ ಜೀವಂಗಲ್ಲದೆ ಶಿವಂಗಿಲ್ಲವಾಗಿ ತ್ರಿಗುಣರಹಿತ ಸೌರಾಷ್ಟ್ರ ಸೋಮೇಶ್ವರನು.
--------------
ಆದಯ್ಯ
ಜಾಗ್ರದಲ್ಲಿಹ ಮನುಷ್ಯಂಗೆ ಸ್ವಪ್ನ ಸುಷುಪ್ತಿ ಮಿಥ್ಯವೆಂಬುದು ಪ್ರಸಿದ್ಧ. ಸ್ವಪ್ನದಲ್ಲಿಹ ಮನುಷ್ಯಂಗೆ [ಜಾಗ್ರ] ಸುಷುಪ್ತಿ ಎಂಬುದು ತೋರಬಾರದು, ಸುಷುಪ್ತಿಯಲ್ಲಿ ಜಾಗ್ರ ಸ್ವಪ್ನವೆಂಬುದು ತಿಲಮಾತ್ರ ತಿಳಿಯಬಾರದು, ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಜಂಗಮಫಲವೆಲ್ಲವೂ ದೇವತೆಗಳಾಹಾರವು; ಸ್ಥಾವರಫಲವೆಲ್ಲವೂ ಮನುಷ್ಯರಾಹಾರವು. ಅದೆಂತೆಂದೊಡೆ : ದೇವತಾಬಿಂದುವಿನಲ್ಲಿ ಮನುಷ್ಯಕೃತ್ಯದಿಂದುದ್ಭವಿಸುವುದೆಲ್ಲ ಸ್ಥಾವರವು; ಮನುಷ್ಯ ಬಿಂದುವಿನಲ್ಲಿ ದೇವತಾ ಕೃತ್ಯದಿಂದುದ್ಭವಿಸುವುದೆಲ್ಲ ಜಂಗಮವು. ಮನುಷ್ಯರು ಶೂದ್ರಮುಖದಿಂ ಕೊಂಬುತಿರ್ಪರು. ದೇವತೆಗಳು ಬ್ರಾಹ್ಮಣಮುಖದಿಂ ಕೊಂಬುತಿರ್ಪರು. ಪೃಥ್ವಿಯಲ್ಲಿ ಎಂಬತ್ತುನಾಲ್ಕುಲಕ್ಷವಿಧ ಜಂಗಮಗಳು ಹೇಗೋ ದೇವತೆಗಳಲ್ಲಿಯೂ ಹಾಗೆ. ದೇವತೆಗಳು ತಮ್ಮ ಕರ್ಮಫಲವು ತೀರಿದೊಡೆ, ತದ್ಧೋಷ ಕರ್ಮಾನುಸಾರಮಾಗಿ ಪಂಚಾಶಲ್ಲಕ್ಷ ದೇಹಗಳೊಂದಂ ಹೊಂದಿ ಆಯಾ ಆಹಾರಂಗಳಂ ಭುಂಜಿಸುತ್ತಾ. ತದಾನುಗುಣ್ಯಮಾಗಿ ಕ್ರೀಡಿಸುತ್ತರ್ಪಂದದಿ, ಮನುಷ್ಯನು ಇಹಲೋಕಕರ್ಮವು ತೀರಿದಲ್ಲಿ ಆ ಕರ್ಮಫಲಕ್ಕೆ ತಕ್ಕ ಮರಣವಂ ಹೊಂದಿ, ದೇವತಾ ಪಿಶಾಚಾಂತಮಾದ ದೇಹಗಳೊಳೊಂದು ದೇಹವನ್ನೆತ್ತಿ, ಸುಖದುಃಖಗಳನನುಭವಿಸುತ್ತಾ ತನ್ನ ಅದ್ಥಿಕಾರಕ್ಕೆ ದೇವತೆಯನ್ನು ಗ್ರಹಿಸಿ, ಆ ದೇವತಾಮುಖದಿಂ ಆಹಾರಂಗಳಂ ಗ್ರಹಿಸುವಂತೆ, ಆ ದೇವತೆಗಳು ತಮ್ಮ ಅದ್ಥಿಕಾರಕ್ಕನುಗುಣವಾಗಿ ಮನುಷ್ಯರಂ ಗ್ರಹಿಸಿ, ಆ ಮನುಷ್ಯಮುಖದಿಂ ಆಹಾರಂಗಳಂ ಕೊಂಬುತಿರ್ಪರು. ದೇವೆತಗಳಿಗೆ ಮಂತ್ರದಿಂದಾವಾಹನೋಚ್ಚಾಟನೆಗಳು, ಮನುಷ್ಯರಿಗೆ ತಂತ್ರದಿಂದಾವಾಹನೋಚ್ಚಾಟನೆಗಳು. ಮನುಷ್ಯರಿಗೆ ತಂತ್ರದಿಂ ಕೂಡಿದ ಮಂತ್ರವು, ದೇವತೆಗಳಿಗೆ ಮಂತ್ರದಿಂ ಕೂಡಿದ ತಂತ್ರವು, ಇಂತು ಮನುಷ್ಯರೂಪದಿಂದ ಸತ್ತು. ದೇವತಾರೂಪದಿಂ ಹುಟ್ಟುತ್ತಿರ್ಪ ದಂದುಗವಂ ಬಿಡಿಸಿ, ನಿನ್ನಲ್ಲಿ ಸತ್ತು ಹುಟ್ಟುತ್ತಿರ್ಪ ನಿಜಸುಖವಂ ಕೊಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ ? ಆಠಾವು ಹಿಂಗಿದಡೆ ಭಂಗಿತನು ಕಂಡಾ. ಅಂತರಂಗದಲೊದಗೂದನರಿಯರು ಗುಹೇಶ್ವರನೆಂಬುದು ಮೀರಿದ ಘನವು
--------------
ಅಲ್ಲಮಪ್ರಭುದೇವರು
ಜಾಲಗಾರನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ, ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವಂತೆ, ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರಗುವಂತೆ,_ ಠಕ್ಕನ ಪೂಜೆಗೆ ಮೆಚ್ಚುವನೆ ನಮ್ಮ ಗುಹೇಶ್ವರನು?
--------------
ಅಲ್ಲಮಪ್ರಭುದೇವರು
ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಜಂಗಮವ ಕರತಂದು ಮನೆಯಲ್ಲಿ ಕುಳ್ಳಿರಿಸಿ, ಅಂಗದ ಮೇಲಣ ಜಪವನೆಣಿಸುವ ಭಕ್ತನ ಜಪದ ಬಾಯಲ್ಲಿ ಕೆರಹನಿಕ್ಕಲಿ! ಅವನ ಲಿಂಗಾರ್ಚನೆಯ ಬಾಯಲ್ಲಿ ಹುಡಿಯ ಹೊಯ್ಯಲಿ! ಜಂಗಮದ ತೃಪ್ತಿಯನರಿಯದೆ ಲಿಂಗವಂತನೆಂತಾದನೊ ? ಮರುಳೆ! ಅವ ಪಿಸುಣ, ಹೊಲೆಯನೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜ್ಞಾನ ಜ್ಞಾನವೆಂದು ಕೇಳಿದೆವಯ್ಯಾ ಗುರುಹಿರಿಯರಿಂದ. ಕೇಳಿದಲ್ಲಿ ಅಂಗವಾಲಿಲ್ಲ, ಕೇಳದೆ ಬಿಟ್ಟ್ಲಲ್ಲಿ ಅಂಗವಾಯಿತ್ತು. ಇದೇನು ಕೌತುಕ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಜ್ಯೋತಿಯ ತಮವೆಡೆಗೊಡಂತೆ ಚಂದ್ರಮನ ರಾಹುಎಡೆಗೊಂಡಂತೆ ನಿಧಾನವ ಸರ್ಪನೆಡೆಗೊಂಡಂತೆ ಅಂಬುದ್ಥಿಯ ಅನಲನೆಡೆಗೊಂಡಂತೆ ಮನವ ಮಾಯವಡೆಗೊಂಡು ನಿಮ್ಮ ನೆನಹ ನೆಲೆಗೊಳಲೀಯದೆ ಮರಣಕ್ಕೊಳಗುಮಾಡುತ್ತಿಪ್ಪುದಯ್ಯ. ಈ ತಮವ ಪರಿಹರಿಸಿ ಎನ್ನನುಳುಹಿಕೊಳ್ಳಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಗದಗಲದಲ್ಲಿ ಹಬ್ಬಿದ ಬಲೆ, ಯುಗಜುಗಕ್ಕೆ ತೆಗೆಯದು ನೋಡಾ ! [ಅದು] ಬಗೆಯಲ್ಲಿ ಭ್ರಮೆಗೊಳ್ಳದು;_ತನ್ನ ಇರವಿನ ಪರಿ ಇಂತುಟಾಗಿ ! ಜಗದ ಪ್ರಾಣಿಗಳುಲಿದುಲಿದು ಮರಳಿ ಮತ್ತಲ್ಲಿಯೆ ಬೀಳಲು; ಬಲೆಯ ನೇಣು ಬಗ್ಗುರಿಯ ಕೈಯಲಿರಲು,_ ಬಲೆಯ ನೇಣ ಕಣ್ಣಿ ಕಳಚಿ, ಲಿಂಗಕ್ಕೆ ಪ್ರಾಣ ಶರಣೆನ್ನುತ್ತವೆ ನಿಂದು, ಒಡಲುಪಾಧಿಯನರಿಯದೆ ಬೆಳಗಿನಲ್ಲಿ ನಿಂದು, ಬೇಡಿದವರಿಗೆ ಅಣಿಮಾದಿ ಗುಣಂಗಳನಿತ್ತು, ಮನೋಮಧ್ಯದಲ್ಲಿ ನಿಲಿಸಿ ನೆನೆವುತ್ತಿರ್ದು ಸುಖಿಯಾದ; ಪ್ರಾಣನಾಥನ ಕಾಯ ಶೂನ್ಯಲಿಂಗಕ್ಕೆ, ಪ್ರಾಣಶೂನ್ಯಶರಣ. ಗುಹೇಶ್ವರಲಿಂಗವ ಬೆರಸಿ ಬೇರಿಲ್ಲ.
--------------
ಅಲ್ಲಮಪ್ರಭುದೇವರು
ಜ್ಞಾನದುದಯವೇ ಭಕ್ತ, ಜ್ಞಾನದ ಶೂನ್ಯವೇ ಐಕ್ಯ. ಇಂತೀ ಜ್ಞಾನದಾದ್ಯಂತವನರಿವರಿವೆ ಸರ್ವಜ್ಞನಾದ ಈಶ್ವರ ನೋಡಾ. ಅದೆಂತೆಂದಡೆ: ``ಚಿದೋದಯಶ್ಚ ಸದ್ಭಕ್ತೋ ಚಿತ್ಯೂನ್ಯಂಚೈಕ್ಯಮೇವ ಚ ಉಭಯೋರೈಕ್ಯ ವಿಜ್ಞೇಯಾತ್ಸರ್ವಜ್ಞಮೀಶ್ವರಃ'' (?) ಎಂದುದಾಗಿ ಇಂತೀ ಷಟ್ಸ್ಥಲದೊಳಗಾದ್ಯಂತವಡಗಿಹ ಭೇದವ ನೀ ನಲ್ಲದನ್ಯರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಜ್ಞಾನಿ ತಾನಾದಡೆ ಮಾನವರ ಗುಣವೇನಾದಡೂ ಆಗಲಿ. ಭಾನುತೇಜಕ್ಕೆ ನಾನಾಗುಣವೆಲ್ಲವೂ ಸರಿ. ಬೀಸುವ ವಾಯುವಿಂಗೆ ಸುಗುಣ ದುರ್ಗುಣವಿಲ್ಲ. ಇದು ಅಜಾತನ ಒಲುಮೆ. ಮಿಕ್ಕಿನ ಮಾತಿನ ಮಕ್ಕಳಿಗಿಲ್ಲಯೆಂದೆ, ಜಗದೀಶನ ಒಲುಮೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜನಿತವಿಲ್ಲದೆ ಜನಿಸಿ ಸ್ವಯವಾದ ಹರನೇ ನೀನು ನಿರೂಪನೇರಿ ಜನಿಸಿ ಜನಿತವ ಬಗೆಯರಾಗಿ ಎಮ್ಮ ಪುರಾತನರೇ ನಿರೂಪರು, ಕುಲದಲ್ಲಿ ಹುಟ್ಟಿ ಕುಲವ ಬೆರೆಸರಾಗಿ ಎಮ್ಮ ಪುರಾತನರೇ ಕುಲಜರು. ಆದಿಲಿಂಗ ಅನಾದಿಶರಣ. ಹೆಸರಿಲ್ಲದ ದೆಶೆಗೇಡಿ ಲಿಂಗವ ವಶಕ್ಕೆ ತಂದು ಹೆಸರಿಟ್ಟು ಕರೆದರೆ ನೀನು ಸುಲಭನೇ? ಅಲ್ಲ. ನೀನು ಕುಲಗೇಡಿ, ನಿನ್ನನಾರು ಬಲ್ಲರು? ನೀನಗೋಚರ. ಹರನೇ, ನೀ ಬೇಡಿತ್ತ ಕೊಟ್ಟು ನೀ ಬಂದರೆ ನಿನ್ನನಾಗುಮಾಡಿದರಲ್ಲದೆ ಎಮ್ಮ ಪುರಾತನರು ನಿಮ್ಮಲ್ಲಿಗೆ ಬಂದು ದೈನ್ಯಬಟ್ಟು ಬೇಡಿದರಲ್ಲೈ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ

ಇನ್ನಷ್ಟು ...
-->