ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
ಧ್ಯಾನ ಧಾರಣ ಸಮಾಧಿ ಯೋಗಂಗಳಿಂದ ಕಾಬುದು ತನುಪ್ರಾಪ್ತಿ ಐಸೆ ? ಅದು ಸ್ಥೂಲ ಸೂಕ್ಷ್ಮ ಕಾರಣಕ್ಕೆ ಘಟಯೋಗಸಂಬಂಧ. ಅದು ಬ್ರಹ್ಮನ ಭಿತ್ತಿ, ವಿಷ್ಣುವಿನ ಆಗು, ರುದ್ರನ ಚೇಗೆ, ಅದು ಗುರು ಚರ ಪರಕ್ಕೆ ಕೊಟ್ಟ ಹಸಿಗೆ. ಸಾಕಾರದಲ್ಲಿ ಕಂಡು, ನಿರಾಕಾರದಲ್ಲಿ ಅರಿದು, ಬೆಳಗಿನ ಬಯಲಲ್ಲಿ ನಿರವಯಾಂಗನಾಗಿ ಇರಬೇಕು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವನರಿವುದಕ್ಕೆ.