ಸ ಪದದಿಂದ ಪ್ರಾರಂಭವಾಗುವ ವಚನಗಳು:
ಸಕಲ ಬಹುಕೃತವೆಂಬ ಗಹನದಲ್ಲಿ,ಜೀವವೆಂಬ ದಂತಿ ತಿರುಗಾಡುತ್ತಿರಲಾಗಿ,ಅರಿವೆಂಬ ಕೇಸರಿ ಅದ ಕಂಡು ಒದಗಿಯೈದಿ,ಮಸ್ತಕದ ಕುಂಭಸ್ಥಲವನೊಡೆದು ಸೇವಿಸುತ್ತಿರಲಾಗಿ,ಶಾರ್ದೂಲ ಹೋಯಿತ್ತು, ಕೇಸರಿ ಬಿಟ್ಟಿತ್ತು ,ಗಜ ಬದುಕಿತ್ತು, ಶಾರ್ದೂಲ ಶಂಕೆಯ ಹರಿಯಿತ್ತು .ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,ಲೀಲೆಗೆ ಹೊರಗಾಗಿ ಸ್ವಯಂಭುವಾಯಿತ್ತು.
ಸಾರಿದುದ ಕಂಡು, ಕೇಳಿ ಮೀರಿ ನಡೆದಡೆ,ಅವನ ಗಾರುಮಾಡಿದಡೆ, ಕೇಡುಂಟೆ ಅಯ್ಯಾ ?ದೃಷ್ಟದಿಂದ, ಶರಣರ ಸಂಗದಿಂದ, ಶ್ರುತಿಸ್ಮೃತಿತತ್ವಂಗಳಿಂದ,ಪಾಪಪುಣ್ಯಗಳೆಂಬುದನರಿದು ಮರೆಯಬಹುದೆ ?ಗುರುವಿಗೂ ಆಚರಣೆ, ಲಿಂಗಕ್ಕೂ ಆಚರಣೆ, ಜಂಗಮಕ್ಕೂ ಆಚರಣೆ,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೂ ಆಚರಣೆ,
ಸಕಲ ಗಂಧಕ್ಕೆ ವಾಯುವೆ ಬೀಜ, ಸಕಲ ಉತ್ಪತ್ಯಕ್ಕೆ ಅಪ್ಪುವೆ ಬೀಜ.ಸಕಲ ಪ್ರಕೃತಿಗೆ ಜೀವವೆ ಬೀಜ.ಇಂತೀ ಭೇದವನರಿತಲ್ಲಿ,ಆತ್ಮನ ವಿವರ ಹೆರೆಹಿಂಗಿದಲ್ಲದೆ, ನಿಜತತ್ವ ಪರಮನಲ್ಲ.ಪರಮ ಪರತತ್ವವ ಕೂಡಿ ಬೆರಸಿದಲ್ಲಿ,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
ಸ್ತ್ರೀಲಿಂಗ ನಾಸ್ತಿಯಾಗಿರಬೇಕು ಗುರುವಿನಿರವು.ಪುಲ್ಲಿಂಗ ನಾಸ್ತಿಯಾಗಿರಬೇಕು ಲಿಂಗದಿರವು.ನಪುಂಸಕಲಿಂಗ ನಾಸ್ತಿಯಾಗಿರಬೇಕು ಜಂಗಮದಿರವು.ತ್ರಿವಿಧಬಿಂದು ಲಿಂಗ ನಾಸ್ತಿ.ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,ನಾದ ಬಿಂದು ಕಳೆಗೆ ಹೊರಗಾಯಿತ್ತು.
ಸ್ವಯಂಪಾಕದಲ್ಲಿ ಆದ ದ್ರವ್ಯವ,ಪರರು ಕಂಡಹರೆಂದು ಮರೆಮಾಡಿಕೊಂಡಿಪ್ಪ ಪರಿಯಿನ್ನೆಂತೊ ?ಮಹಾಘನವನಾ ಧರಿಸಿ ನುಡಿವುತ್ತಿಪ್ಪ ನಾಲಗೆ,ಛಂಡತಾಂಬೂಲ ಮೊದಲಾದ ಭಾವವನೆಲ್ಲರೂ ಕಾಣುತ್ತ,ವ್ರತದ ಠಾವೆಲ್ಲಿ ಸಿಕ್ಕಿತ್ತು ?ಮೊಲೆಯ ಮುಚ್ಚಿ, ಸೀರೆಯ ತೆಗೆದಂತಾಯಿತ್ತು.ಇಂತಿವನರಿದು, ಇದಿರಿಚ್ಛೆಯ ಮರೆದು, ತನ್ನ ಸ್ವಯಿಚ್ಛೆಯನರಿದುದು,ತನ್ನ ಮುಚ್ಚು, ಘನಲಿಂಗದ ಅಚ್ಚು.ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದವ್ರತಾಚಾರಕ್ಕೆ ಇಕ್ಕದ ಗೊತ್ತು.
ಸುಖದುಃಖಾದಿಗಳ ಮೀರುವ ಎನ್ನವರ ಕಾಣೆ.ಸುಖದುಃಖಾದಿಗಳ ಮೀರುವ ನಿನ್ನವರ ಕಾಣೆ.ಇನ್ನೇನು ಹೇಳುವೆ ? ನಡುಹೊಳೆಯಲ್ಲಿ ಹರುಗೋಲ ಹರಿದಂತೆ,ಅಂಬಿಗನ ಕೊರಳ ಸುತ್ತಿ ಬಂದವರೆಲ್ಲರೂಉಭಯವು ಹೊಂದಿದಂತಾಯಿತ್ತು.ನೀ ಎನ್ನ ಬಟ್ಟೆ, ನಾ ನಿನ್ನ ಬಟ್ಟೆ.ಉಭಯವು ಬಂದ ಬಟ್ಟೆಯಾದೆವಲ್ಲ.ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.