ನ ಪದದಿಂದ ಪ್ರಾರಂಭವಾಗುವ ವಚನಗಳು:
ನಡೆದು ನಡೆಯದವನ ಕಂಡು, ನುಡಿದು ನುಡಿಯದವನ ಕಂಡು,ಅರಿದು ಅರಿಯದವನ ಕಂಡು,ತ್ರಿವಿಧ ಭೇದಂಗಳಲ್ಲಿ ಭೇದಿಸಿ ಛೇದಿಸಿ ನಿಂದುದು,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ನಿಂದ ವಾಸ.
ನಿತ್ಯ ಚಿಲಮೆಯ ನೋಡುವಾತಂಗೆ ಉಚ್ಚೆಯ ಬಚ್ಚಲ ತೋಡಲಾಗದು.ಭಕ್ತರನಲ್ಲದೆ ಭವಿಗಳ ಬೇಡೆನೆಂಬಾತಂಗೆಅಚ್ಚೊತ್ತಿದ ಲಕ್ಷ್ಮಿಯ ಮುದ್ರೆಯ ಹಿಡಿಯಲಾಗದು.ಕೊಂಡ ವ್ರತಕ್ಕೆ ಸಂದೇಹ ಕುಳ್ಳಿರೆ, ಅಂಗವ ಹೊರಲಾಗದು.ಇಂತಿವನರಿಯದೆ,ನಾ ವ್ರತಸ್ಥನೆಂದು ಕೊಂಡಾಡುತಿಪ್ಪ ಭಂಡರನೊಪ್ಪ,ಈಶಾನ್ಯಮೂರ್ತಿ ಮಲ್ಲಿಕಾರ್ಜುನವು.
ನೀ ಹಾಕಿದ ಮುಂಡಿಗೆ ಎನಗೂ ಸರಿ, ನಿನಗೂ ಸರಿ.ನಾ ಹಾಕಿದ ಮುಂಡಿಗೆ ನಿನ್ನ ಕೇಡು, ಎನ್ನ ಕೇಡು.ಗರ್ಭವ ಹೊತ್ತಿದ ಸ್ತ್ರೀ ಅಳಿದಂತೆ.ಶಿವಲೆಂಕನ ಮಾತು,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಹಾಕಿದ ಮುಂಡಿಗೆ.
ನಾದವಿಲ್ಲದೆ ಬಿಂದುವಿಲ್ಲ, ಬಿಂದುವಿಲ್ಲೆದ ಕಳೆಯಿಲ್ಲ,ಕಳೆಯಿಲ್ಲದೆ ಲಿಂಗವಿಲ್ಲ.ಇಂತೀ ತ್ರಿವಿಧಭೇದಂಗಳಲ್ಲಿ ಗುರುವಿನ ಆದಿಯನರಿತು,ಲಿಂಗದ ಭೇದವನರಿತು, ಜಂಗಮದ ಪೂರ್ವವನರಿತು,ತಾ ಪುನರ್ಜಾತನಾಗಬೇಕು. ಇಂತೀ ಅರ್ಪಿತಭೇದ,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿತಲ್ಲದಾಗದು.