ಹಿರಿದುಂಟೆಂಬ ನುಡಿ ಚೋದ್ಯವಪ್ಪುದು ಶರಣಂಗೆ. ಅದೇನು ಕಾರಣವೆಂದೊಡೆ, ತನ್ನಿಂದ ತೋರಿದ ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶ ಆತ್ಮ ಸೂರ್ಯ ಚಂದ್ರ ತನ್ನಿಂದೆ ತೋರಿದ ಸಕಲಾರಂಭ. ಇದು ಕಾರಣ, ತಾನೊಂದರಿಂದ ತೋರಿದವನಲ್ಲ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಕಾರಣನಹುದು ಕಾರ್ಯನಲ್ಲ.
ಹರಗುರುವಾಕ್ಯ ಪ್ರಮಾಣವರಿಯದೆ ಅಜ್ಞಾನವಾವರಿಸಿ ವಾರ ತಿಥಿಯೆಂದು, ಸಂಕ್ರಾಂತಿ ಅಮವಾಸ್ಯೆಯೆಂದು ನೇಮಿಸಿ, ಮಾಡಿ ನೀಡಿ ಕರ್ಮ ಕಳೆದೆನೆಂಬ ವರ್ಮಗೇಡಿಗಳ ನೋಡಾ! ಮತ್ತೊಂದು ವೇಳೆ ಜಂಗಮ ಮನೆಗೆ ಬಂದರೆ ಅಡ್ಡಮೋರೆಯಿಕ್ಕುವ ಗೊಡ್ಡು ಮಾದಿಗರ ಶಿವಭಕ್ತರೆಂದರೆ ಅಘೋರ ನರಕವೈ ಗುರುನಿರಂಜನ ಚನ್ನಬಸವಲಿಂಗಾ.