ಸದ್ಭಕ್ತರು ಲಿಂಗಾರ್ಚನೆಯ ಮಾಡುವ ಕಾಲದಲ್ಲಿ,
ಕದವಂ ಮುಚ್ಚಿ, ಸಮಾಧಾನದಲ್ಲಿ ಲಿಂಗಾರ್ಚನೆಯ ಮಾಡುವದು.
ಶಿವಪೂಜೆಯ ಗುಪ್ತದಲ್ಲಿ ಮಾಡಬೇಕಾಗಿ ತೆರೆಯ ಕಟ್ಟುವದು.
ಪಾಪಿಯು ಕೋಪಿಯು, ಶಿವಾಚಾರಭ್ರಷ್ಟನು,
ಆಳಿಗೊಂಬವನು, ವೈದಿಕವಿಪ್ರನು,ಹೊಲ್ಲಹ ದೃಷ್ಟಿಯವನು,
ಅನಾಚಾರಿಯು, ಮೂರ್ಖನು, ತನ್ನ ಗುರುವನು ನಿಂದಿಸುವಾತನು,
ಇಂತಪ್ಪವರುಗಳ ಪ್ರಮಾದದಿಂದಾದಡೆಯೂ ಕಂಡಡೆ,
ತಾ ಮಾಡಿದ ಲಿಂಗಾರ್ಚನೆ ನಿಷ್ಫಲವಹುದು.
ಇದನರಿದು, ಸಕಳೇಶ್ವರಲಿಂಗವ ಏಕಾಂತದಲ್ಲಿ ಭಜಿಸುವ ಭಕ್ತಂಗೆ
ನಮೋ ನಮಃ ಎಂದು ಬದುಕಿದೆನಯ್ಯಾ.