ಎನಗೆ ಇಲ್ಲಿ ಏನು ಬಸವ ಬಸವಾ ? ಎನಗೆ ಅದರ ಕುರುಹೇನು ಬಸವಾ ? ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು, ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು, ನಾನು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ ?
ಎಡೆಯ ಮಾಡಿದ ಎಡೆ ಏಕವಾರಕ್ಕೆ ಮುನ್ನವೇ (ತೀ)ರಿತ್ತು. ತೀರಿದ ಪ್ರಸಾದವನುಣಹೋದರೆ ಉಂಡವರೆಲ್ಲಾ ನನ್ನ ಗಂಡರಾದರು. ಅವರ ಕಂಡು ನಾನು ಮರುಳುಗೊಂಡರೆ ಮಹದನುಭವದಲ್ಲಿ ಕೂಟವಾಯಿತ್ತಯ್ಯ ಸಂಗಯ್ಯ.
ಎಲೆ ಅಯ್ಯಾ ಎಲೆ ಅಯ್ಯಾ ಏಕಾಕ್ಷರ ರೂಪ ಬಸವಾ, ಎಲೆ ಅಯ್ಯಾ ಎಲೆ ಅಯ್ಯಾ ನಿರಕ್ಷರರೂಪ ಬಸವಾ, ಎಲೆ ಅಯ್ಯಾ ಎಲೆ ಅಯ್ಯಾ ಮುನಿಮಾರ್ಗಶೀಲ ಬಸವಾ, ಸಂಗಯ್ಯಾ, ಎಲೆಯಿಲ್ಲದ ವೃಕ್ಷವಾದ ಬಸವಯ್ಯನು.
ಎಡೆಯಿಲ್ಲ ಕಡೆಯಿಲ್ಲ ಎನಗೆ ಎಲೆ ಅಯ್ಯ. ಪ್ರಾಣಲಿಂಗದ ಸಂಬಂಧದ ನೆಲೆಯ ಕಂಡಿಹೆನೆಂದರೆ, ಆ ಪ್ರಾಣಲಿಂಗ ಸಂಬಂಧ ಸಮರಸದಿರವ ನಾನೆತ್ತ ಬಲ್ಲೆನಯ್ಯ ? ಮರುಳು ಹೆಣ್ಣು ಪ್ರಣವ ಪ್ರಕಾಶದಿರವನರಿದು ಪರಮಸುಖಮೂರ್ತಿಯಾದೆನಯ್ಯ ಸಂಗಯ್ಯ.
ಎಸಳದಳವನಳಿದು ನಿಂದ ಬಸವಾ, ದಳರೂಪಿತದಲ್ಲಿ ಕುರುಹಡಗಿದ ಬಸವಾ, ಕುರುಹಿನ ರೂಪ ಕಂಡು ದೃಢ ಸ್ವರೂಪನರಿದು ಅನುಭಾವಿಯಾಗಿ ಅನುಭಾವದಿಂದ ಮುಕ್ತಿಯ ಕಂಡು ಮುಖವಿಕಸಿತವನೆಯ್ದಿ ನಿಂದನಯ್ಯ ಸಂಗಯ್ಯನಲ್ಲಿ ಬಸವಯ್ಯನು
ಎಡೆಯಲ್ಲಿ ಹುಟ್ಟಿದ ಭಕ್ತಿ ಎಡೆಯಲ್ಲಿಯೆ ಅಡಗಿತ್ತು. ಕಡೆಮುಟ್ಟಿ ನಡೆಯಲು ಆ ಕಡೆಯಳ ಸುಖವನರಿದು ಅರಿವನರಿದೆನಯ್ಯ. ಆವಾವ ಕಾಲವೂ ಆವಾವ ವಸ್ತುವೆನಗೆ ಹೃದಯವೆ ಕಂಡು ಮೂರ್ತಿ ಅನಿಮಿಷವಾಯಿತ್ತಯ್ಯ ಸಂಗಯ್ಯ.