ಭವಿ ಭಕ್ತರೆಂಬೆರಡು ವಿವರವಾಯಿತು ನೋಡಾ ಅಯ್ಯಾ.
ಭವಿಗೆ ಶೈವ, ಭಕ್ತಂಗೆ ವೀರಶೈವ.
ಭವಿ ಶೈವಲಿಂಗವ ಪೂಜೆಮಾಡಿದರೆ
ಅವರ ಭಾವಕ್ಕೆ ಒಲಿವನಲ್ಲದೆ,
ಶಿವಭಕ್ತ ಶೈವಲಿಂಗವ ಪೂಜೆಮಾಡಿದರೆ ತಪ್ಪದು ನರಕ.
ಅದು ಕಾರಣವೆಂದರೆ :
ಶಿವಲಿಂಗ ಕರಸ್ಥಲದಲ್ಲಿರುತಿರೆ ಆ ಲಿಂಗದ ಪೂಜೆಯ ಮಾಡಿ,
ವರವ ಪಡೆಯಲರಿಯದೆ, ಅನ್ಯಲಿಂಗಕ್ಕೆ ಹರಿದು ಹೋಗಿ,
ಗಡಗಡನುರುಳಿ, ಆ ಲಿಂಗದೇವಾಲಯವ ಪ್ರದಕ್ಷಣ ಮಾಡಿದರೆ,
ಕುನ್ನಿ ಬೂದಿಯೊಳಗೆ ಹೊರಳಿ ಲಟಪಟನೆ ಝಾಡಿಸಿ ಎದ್ದು
ತುಡುಗಿಗೆ ಮನೆಯೊಳು ಹೊಕ್ಕು ಸುತ್ತುತಿರೆ
ನಡುನೆತ್ತಿಯ ಮೇಲೆ ಬಡಿವಂತೆ,
ಏನೆಂದು ಸಟೆಮಾಡನಯ್ಯಾ ಇಂತಪ್ಪ ಅಜ್ಞಾನಿಗಳ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?