ಶಿವಾಚಾರಸಂಪನ್ನನಾಗಿ ಶಿವಭಕ್ತನೆನಿಸಿಕೊಂಡು
ಶಿವಲಿಂಗವು ಕರಸ್ಥಲ ಉರಸ್ಥಲ ಶಿರಸ್ಥಲದಲ್ಲಿರುತಿರೆ
ಅದ ಮರೆದು, ಹಲವು ದೇವರ ಪೂಜೆಮಾಡಿ,
ಹಲವು ದೇವರ ಬಳಿಯಲ್ಲಿ ನೀರ ಕುಡಿದು,
ಹಲವು ದೇವರ ನೈವೇದ್ಯವ ತಿಂಬ ಹೊಲೆಯನ
ಶಿವಭಕ್ತನೆನಬಹುದೆ ? ಎನಲಾಗದು.
ಅದೇನು ಕಾರಣವೆಂದಡೆ, ಅದಕ್ಕೆ ಸಾಕ್ಷಿ :
``ಶಿವಾಚಾರೇಣ ಸಂಪನ್ನಃ ಪ್ರಸಾದಂ ಭುಂಜತೇ ಯದಿ |
ಅಪ್ರಸಾದೀ ಅನಾಚಾರೀ ಸರ್ವಭಕ್ತಶ್ಚ ವಾಯಸಃ ||''
ಎಂಬುದನರಿಯದೆ,
ಮತ್ತೆ ಕೇಳು ಗ್ರಂಥ ಸಾಕ್ಷಿಯ ಮನುಜ :
ಸಾಕ್ಷಿ :``ಲಿಂಗಾರ್ಚನೈಕ ಪರಾಣಾಂ ಅನ್ಯದೈವಂತು ಪೂಜನಂ |
ಶ್ವಾನಯೋನಿಶತಂ ಗತ್ವಾ ರೌರವಂ ನರಕಂ ವ್ರಜೇತ್ ||''
ಎಂಬುದನರಿಯದೆ, ಮತ್ತೆ ಮೇಣ್,
ಸಾಕ್ಷಿ :``ಶಿವಲಿಂಗಂ ಪರಿತ್ಯಜ್ಯ ಅನ್ಯದೈವಮುಪಾಸತೇ |
ಪ್ರಸಾದಂ ನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ ||''
ಹೀಗೆಂಬುದನರಿಯದೆ,
ಲಿಂಗವಿದ್ದು ಅನ್ಯದೈವಂಗಳಿಗೆರಗಿ, ಆಚಾರಭ್ರಷ್ಟನಾಗಿ
ಪಾದೋದಕ ಪ್ರಸಾದವ ಕೊಂಡರೆ ಎಂದೆಂದಿಗೂ ಭವಹಿಂಗದು.
ಅದೇನುಕಾರಣ ಹಿಂಗದೆಂದರೆ ಹೇಳುವೆ ಕೇಳಿರಣ್ಣಾ :
ಹೆಗ್ಗಣವನೊಳ ಹೋಗಿಸಿ ನೆಲಗಟ್ಟ ಹೊರೆದಂತೆ,
ಅನ್ಯಕೆ ಹರಿವ ದುರ್ಗುಣವ ಕೆಡೆಮೆಟ್ಟದೆ
ಶಿವಭಕ್ತರೆಂದೆಂದು ನುಡಿದುಕೊಂಡು ನಡೆದರೆ,
ಹಂದಿ ನಾಯಿ ನರಿ ವಾಯಸನ ಜನ್ಮ ತಪ್ಪದೆಂದಾತ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.