ಹರನಿಂದೆ ಗುರುನಿಂದೆ ಪರನಿಂದ್ಯವ ತೊರೆದು
ಶಿವಕೇಳಿಯೊಳಿಂಬುಗೊಂಡ ಕರ್ಣಕ್ಕೆ
ಕರ್ಣೇಂದ್ರಿಯವೆಲ್ಲಿಹುದೋ ?
ಕಾಮವೆಂಬ ಶೀತ, ಕ್ರೋಧವೆಂಬ ಉಷ್ಣ ,
ಮೋಹನ ಮುದ್ದುಮುಖ ಮೊಲೆ,
ಅಂಗನೆಯೆಂಬ ಮೃದು, ವಿಷಯಾತುರವೆಂಬ ಕಠಿಣವ ಮುಟ್ಟದೆ,
ಲಿಂಗ ಮುಟ್ಟಿ ಲಿಂಗವ ಪೂಜಿಸಿ ಲಿಂಗವ ಮೋಹಿಪ
ಹಸ್ತಕ್ಕೆ ತ್ವಗಿಂದ್ರಿಯವೆಲ್ಲಿಯದೋ ?
ಶ್ವೇತ ಪೀತ ಹರಿತ ಮಾಂಜಿಷ್ಟ ಮಾಣಿಕ್ಯ ಕಪೋತವರ್ಣವೆಂಬ
ಷಡುರೂಪವ ಕಳೆದು ಲಿಂಗದ ಷಡುರೂಪದೊಳಿಂಬುಪಡೆದುಕೊಂಡು
ಅನುಮಿಷದೃಷ್ಟಿ ಇಟ್ಟ ನಯನಕ್ಕೆ ನೇತ್ರೇಂದ್ರಿಯವೆಲ್ಲಿಯದೊ ?
ತಿಕ್ತ ಕಟು ಕಷಾಯ ಮಧುರ ಆಮ್ಲ ಲವಣವೆಂಬ
ಷಡುರುಚಿಗೆಳಸದೆ, ಲಿಂಗಾನುಭಾವಾಮೃತವ
ಸೇವಿಪ ಜಿಹ್ವೆಗೆ ಜಿಹ್ವೇಂದ್ರಿಯವೆಲ್ಲಿಯದೋ ?
ಗಂಧ ದುರ್ಗಂಧವನಳಿದು ಸ್ವಾನುಭಾವಸದ್ವಾಸನೆಗೆಳಸಿಪ್ಪ
ನಾಸಿಕಕ್ಕೆ ಘ್ರಾಣೇಂದ್ರಿಯವೆಲ್ಲಿಯದೋ ?
ಇಂತೀ ಪಂಚೇಂದ್ರಿಯಮುಖದಲ್ಲಿ ಪಂಚವದನನ ಮುಖವಾಗಿಪ್ಪ
ಶಿವಶರಣರು ಲಕ್ಷಗಾವುದದಲ್ಲಿದ್ದರೂ ಇರಲಿ,
ಅಲ್ಲಿಗೆನ್ನ ಮನಮಂ ಹರಿಯಬಿಟ್ಟು ನಮಸ್ಕರಿಸುವೆನು.
ಕಂದ :ಲಕ್ಷಯೋಜನದೊಳಾಡೆ
ಮುಕ್ಕಣ್ಣನ ಶರಣನೈದನೆನೆ ಕೇಳ್ದೊಲವಿಂ
ದಿಕ್ಕನೆ ಮನಮಂ ಕಳುಹಿ ಪ
ದಕ್ಕೆರಗುವೆ ನಾಂ ಪ್ರಸನ್ನಶಂಕರಲಿಂಗ.
ಈ ಕಾರಣ ನಿಮ್ಮ ಶರಣರ ನೆನೆದು ನೋಡಿ ವಾರ್ತೆಯ ಕೇಳಿ
ಮನಮುಟ್ಟಿ ದರುಶನವ ಮಾಡಲೆನ್ನ ಭವ ಹಿಂಗಿತ್ತು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.