ಅಯ್ಯಾ, ಅಂತರಂಗದಲ್ಲಿ ಅಷ್ಟಮಲಂಗಳಿಗೆ ಮೋಹಿಸಿ,
ಬಹಿರಂಗದಲ್ಲಿ ಭಕ್ತಿ-ಜ್ಞಾನ-ವೈರಾಗ್ಯ-ಷಟ್ಸ್ಥಲದ ಸುದ್ದಿಯ ಹೇಳಿ,
ದಶಾವತಾರದಾಟವ ತೊಟ್ಟಂತೆ ಗುರುಮುಖವಿಲ್ಲದೆ
ವಿಭೂತಿ ರುದ್ರಾಕ್ಷಿ ಶಿವಲಿಂಗ ಲಾಂಛನವ ಧರಿಸಿ,
ಒಳಗೆ ಶುದ್ಧವಿಲ್ಲದೆ ಬರಿದೆ
ಶಿವಪ್ರಸಾದದ ಸುದ್ಧಿಯ ಹೇಳುವವರಲ್ಲಿ
ಅಷ್ಟಾವರಣ ಪರಿಚಾರವಿಲ್ಲ ನೋಡ!
ತನ್ನಂತರಂಗ ಬಹಿರಂಗದಲ್ಲಿ ಚಿಜ್ಯೋತಿರ್ಲಿಂಗವೆಂಬ ರಮಣನ
ಸದ್ಗುರುಮುಖದಿಂ ಕೂಡಿ ಎರಡಳಿದು,
ಆ ಲಿಂಗದ ಚಿಚ್ಚೆತನ್ಯವೆ ನಿರಂಜನ ಜಂಗಮವೆಂದು
ಆ ಜಂಗಮವೆ ತಾನೆಂದರಿದು,
ತನ್ನ ಚಿತ್ಕಳೆಯ ಚಿದ್ವಿಭೂತಿ-ರುದ್ರಾಕ್ಷಿ, ಲಾಂಛನ,
ತನ್ನ ಪರಮಾನುಭಾವನೆ ಮಹಾಮಂತ್ರ,
ತನ್ನ ನಿಜಾನಂದವೆ ಪಾದೋದಕ-ಪ್ರಸಾದ,
ತನ್ನ ಸತ್ಯ ಸದಾಚಾರ ನಡೆನುಡಿಯೆ ಪರಮ ಕೈಲಾಸ!
ಇಂತು ಪ್ರಮಥರು ಆಚರಿಸಿದ ಭೇದವ ತಿಳಿಯದೆ
ಬರಿದೆ ಅಹಂಕರಿಸಿ
ಗುರುಸ್ಥಲ, ಚರಸ್ಥಲ, ಪರಸ್ಥಲ, ಶಿವಭಕ್ತಿ, ಶಿವಭಕ್ತ, ಶಿವಶರಣ,
ಶಿವಪ್ರಸಾದಿಗಳೆಂದು ವಾಗದ್ವೆ ೈತವ ನುಡಿವವರಲ್ಲಿ
ಪರತತ್ತ್ವಸ್ವರೂಪ ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಇಲ್ಲ ಇಲ್ಲ ಎಂದೆ!