ಜಲದೊಳಗಣ ಬೊಬ್ಬುಳಿಕೆ ಜಲ ಘಟ್ಟಿಗೊಂಡಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ. ಮಹೇಂದ್ರ ಜಾಲವು ಮರೀಚಿಕಾ ಜಲವು. ಎಲ್ಲಿ ಹುಟ್ಟಿ ಎಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ. ಮಹಾನಾದ ಸುನಾದ, ಸುನಾದಕ್ಕೆ ಕೈಗೈದು ಆ ಸುನಾದವು ಮಹಾನಾದದೊಡನೆ ಮಥನಿಸಿ ಇವೆರಡರ ಪ್ರಾಣ ಚೈತನ್ಯ ಒಂದಾಗಿ ಹುಟ್ಟಿ ಅಡಗುವ ಭೇದವ ಬಲ್ಲೆನಾಗಿ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ.
ಜಂಗಮವಾಗಿ ಹುಟ್ಟಿದ ಮತ್ತೆ ಹಿಂದಣ ಹಜ್ಜೆಯ ಮೆಟ್ಟಲುಂಟೆ? ಜಂಗಮವೆಂಬ ಮಾತಿಂಗೊಳಗಾದಲ್ಲಿ ಮೂರು ಮಲತ್ರಯವ ಹಿಂಗಿರಬೇಕು. ಅನಂಗನ ಬಲೆಗೆ ಎಂದಿಗೂ ಸಿಲುಕದಿರಬೇಕು; ಅದು ನಿಜದ ಸಂಗ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಈ ಗುಣ ಆರಿಗೂ ಇಲ್ಲ ಇಲ್ಲಎಂದೆ.
ಜೀವವೆಂಬುದಿಲ್ಲ, ಭಾವವೆಂಬುದಿಲ್ಲ, ಬಯಕೆಯೆಂಬುದಿಲ್ಲ. ಮುಂದೆ ಪೂಜಿಸಿ ಕಂಡೆಹೆನೆಂಬುದಕ್ಕೆ ಮುನ್ನವೆ ಇಲ್ಲ. ಪೂರ್ವ ಅಪೂರ್ವವೆಂಬುದಿಲ್ಲ. ಇವಾವ ಬಂಧನವೂ ಇಲ್ಲದ ಅವಿರಳಂಗೆ ಒಂದರ ತೋರಿಕೆಯೂ ಇಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲಾ ಇಲ್ಲ, ನಿಲ್ಲು ಮಾಣು.