ವೇದ ಶಾಸ್ತ್ರ ಪುರಾಣಗಳಿಂದ ಅರಿದೆವೆಂಬ
ಷಟ್ಸ್ಥಲಜ್ಞಾನಿಗಳು ನೀವು ಕೇಳಿರಣ್ಣಾ.
ನೀವು ಅರಿವ ಪರಿಯೆಂತುಟು ಹೇಳಿರಣ್ಣಾ.
ನಿಮ್ಮಸಂದೇಹ ನಿಮ್ಮ ನಿಮ್ಮ ತಿಂದು ತೇಗುಗು.
ನಿಮ್ಮ ಸಂಕಲ್ಪ ನಿಮ್ಮ ಕೊಂದು ಕೂಗುಗು.
ಅರಿವು ಸಂಬಂಧಿಗಳಿಂದ ಅರಿದೆವೆಂಬಿರಿ.
ಹೇಳುವ ಗುರು ಸಂದೇಹಿ, ಕೇಳುವ ಶಿಷ್ಯ ಸಂದೇಹಿ,
ಎನ್ನ ಅರಿವು ಬೇರೆ, ನಿಮ್ಮಾಚಾರ ಬೇರೆಯಾಗಿಪ್ಪುದು.
ನೀವೆನಗೆ ಕರ್ತರಾದ ಕಾರಣ ನಾ ನಿಮಗೆ ತೆತ್ತಿಗನಾದ ಕಾರಣ
ನಿಮ್ಮ ಸಂದೇಹ ಸಂಕಲ್ಪ ನಿವೃತ್ತಿಯ ಮಾಡುವನು ಕೇಳಿರಣ್ಣಾ.
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಇಷ್ಟಲಿಂಗವು
ಆ ಲಿಂಗದ ವೃತ್ತ ಗೋಳಕ ಗೋಮುಖ
ಇಂತೀ ತ್ರಿವಿಧಸ್ಥಾನಂಗಳಲ್ಲಿ ಭಿನ್ನವಾಗಲು
ಲಿಂಗಧ್ಯಾನದಲ್ಲಿ ನಿಂದು ಲಿಂಗೈಕ್ಯರ ಸಂಗದಲ್ಲಿ
ಅಂಗವ ಬಯಲ ಮಾಡುವರು.|| ಸಾಕ್ಷಿ ||
ಸರ್ವಾಂಗಲಿಂಗದೇಹಸ್ಯ ಲಿಂಗಭಿನ್ನ ವಿವರ್ಜಯೇತ್|
ತದ್ದೇಹ ಪರಿತ್ಯಾಗಃ ಮದ್ಭಕ್ತಸ್ಯ ಸುಲಕ್ಷಣಂ||
ಇಂತೆಂದುದಾಗಿ, ಇದಕ್ಕೆ ಸಂದೇಹಬೇಡ.
ಇನ್ನೊಂದು ಪರಿಯನ್ನು ಹೇಳಿಹೆನು ಕೇಳಿರಣ್ಣಾ.
ಅಖಂಡ ಪರಿಪೂರ್ಣಲಿಂಗವ ಶ್ರೀಗುರು ಕೈಯಲ್ಲಿ ಕೊಟ್ಟರೆ
ಶಕ್ತಿ ಸಂಪುಟದಿಂದ ಉತ್ಕøಷ್ಟಮುಖದೆ ಅಂಗವ ಬಯಲುಮಾಡಬೇಕು.
ಇನ್ನೊಂದು ಪರಿಯನ್ನು ಹೇಳಿಹೆನು ಕೇಳಿರಣ್ಣಾ.
ವೃತ್ತಗೋ[ಳಕ] ಗೋಮುಖಂಗಳಲ್ಲಿ ಮಂತ್ರಯುಕ್ತವಾಗಿ
ಮಾಯಾಬಂಧಗಳಿಂದ ಬಂಧಿಸಿ
ಅಖಂಡ ಲಿಂಗವೆಂದು ಕರಸ್ಥಲಕ್ಕೆ ಕೊಟ್ಟನಯ್ಯಾ ಶ್ರೀಗುರು.
ಶಕ್ತಿ ಸಂಪುಟದಿಂದ ಉತ್ಕøಷ್ಟವಾಯಿತ್ತೆಂದು
ಸಂದೇಹವ ಮಾಡುವ ಸ್ವಾಮಿದ್ರೋಹಿಗಳ ಮುಖವನೋಡಲಾಗದು.
ಇದಕ್ಕೆ ಸಂದೇಹವಿಲ್ಲ. ಅದೆಂತೆಂದಡೆ:
ವಿಯೋಗಾಚ್ಚಿವಶಕ್ತಿಶ್ಚನ ಶಂಕಾ ವೀರಶೈವಾನಾಂ|
ಮನೋಬಂಧಂ ತಥಾ ಕುರ್ಯಾತ್ ಲಿಂಗ ಧಾರಯೇತ್ಸುಧೀಃ||
ಇಂತೆಂದುದಾಗಿ,
ಮನೋರ್ಬಂಧಂಗಳಿಂದ ಬಂಧಿಸಿ ಆ ಲಿಂಗವನೆ ಧರಿಸೂದು.
ಭಕ್ತನಾದಡೂ, ಮಾಹೇಶ್ವರನಾದಡೂ, ಪ್ರಸಾದಿಯಾದಡೂ,
ಪ್ರಾಣಲಿಂಗಿಯಾದಡೂ, ಶರಣನಾದಡೂ, ಐಕ್ಯನಾದಡೂ
ಸಂದೇಹವಿಲ್ಲದೆ ಆ ಲಿಂಗವನು ಧರಿಸೂದು.
ಹಿಂಗಲ್ಲದೆ ಸಂದೇಹವುಂಟೆಂಬವರೆಲ್ಲರು
ಗುರುದ್ರೋಹಿಗಳು ಲಿಂಗದ್ರೋಹಿಗಳು ಜಂಗಮ ದ್ರೋಹಿಗಳು
ಪಾದೋದಕ ದ್ರೋಹಿಗಳು ಪ್ರಸಾದದ್ರೋಹಿಗಳು
ಇಂತಿವರಲ್ಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗವು
ಸ್ವಪ್ನದಲ್ಲಿಯೂ ಸುಳಿಯನು.