ರೋಗಿಗೆ ಹಾಲು ಸಿಹಿಯಪ್ಪುದೆ? ಗೂಗೆಗೆ ರವಿ ಲೇಸಪ್ಪುದೆ? ಚೋರಗೆ ಬೆಳಗು ಗುಣವಪ್ಪುದೆ? ಭವಸಾಗರದ ಸಮಯದಲ್ಲಿದ್ದವರು ನಿರ್ಭಾವನ ಭಾವವನೆತ್ತ ಬಲ್ಲರು? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
ರುದ್ರದೇವ ಮಹಾದೇವ ಇವರಿಬ್ಬರೂ ಬೀಗರಯ್ಯಾ. ಒಬ್ಬರು ಹೆಣ್ಣಿನವರು, ಒಬ್ಬರು ಗಂಡಿನವರು. ಹಂದರವಿಕ್ಕಿತ್ತು, ಮದುವೆ ನೆರೆಯಿತ್ತು, ಶೋಬನವೆಂದಲ್ಲಿಯೇ ಅಳಿಯಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.