ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆ ಅನಾಹತಚಕ್ರದ ದ್ವಾದಶದಳದ ಪದ್ಮವ ಪೊಕ್ಕು ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಕುಂಕುಮವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ, ಅಗ್ನಿಯ ಪಟುಮಾಡಿ,ಮನ ಪವನ ಬಿಂದು ಸಂಯೋಗದಿಂದ ವಿಶುದ್ಧಿಚಕ್ರದ ಷೋಡಶದಳದ ಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ [ವಿಶುದ್ದಿಚಕ್ರದ] ಷೋಡಶದಳಪದ್ಮವ ಪೊಕ್ಕುನೋಡಿ ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು ಅಲ್ಲಿ ಶ್ವೇತವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ, ಅಗ್ನಿಯ ಪಟುಮಾಡಿ, ಮನ-ಪವನ-ಬಿಂದು ಸಂಯೋಗದಿಂದ ಆಜ್ಞಾಚಕ್ರದ ದ್ವಿದಳಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಸಹಸ್ರದಳ ಪದ್ಮವ ಪೊಕ್ಕು ನೋಡಿ ಸಾದ್ಥಿಸಿ, ``ಸಹಸ್ರಶಿರ್ಷಾಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ | ಸ ಭೂಮಿಂ ವಿಶ್ವತೋವೃತ್ವಾ ಅತ್ಯತಿಷ್ಠದ್ದಶಾಂಗುಲಂ ||'' ಎಂಬ ಪರಮಪುರುಷನ ಕಂಡು ನಮೋ ನಮೋ ಎನುತಿರ್ದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಮಹಾಸದಾಶಿವ ತತ್ವದ ಪಂಚಮುಖದಲ್ಲಿ ಉತ್ಪತ್ಯವಾದ ಪಂಚಮಹಾಭೂತಬ್ರಹ್ಮಾಂಡಕಪಾಲದೊಳು ಪಂಚಭೂತ ಬ್ರಹ್ಮಾಂಡಕಪಾಲ ಉತ್ಪತ್ಯವದೆಂತೆಂದೊಡೆ : ಆ ಮಹಾಶಿವತತ್ವದ ನಿರ್ಭಾವ ಮುಖದಲ್ಲಿ ಆತ್ಮನುತ್ಪತ್ಯವಾದನು. ಆ ಆತ್ಮನಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಆಕಾಶದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ವಾಯುವಿನಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಅಗ್ನಿಯಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಅಪ್ಪುವಿನಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಇದಕ್ಕೆ ಈಶ್ವರ ಉವಾಚ : ``ಆತ್ಮನ್ಯಾಕಾಶಸಂಭೂತಿರಾಕಾಶಾದ್ವಾಯು ಸಂಭವಃ | ವಾಯೋರಗ್ನಿಃ ಸಮುತ್ಪತ್ತಿರಗ್ನೇರಾಪ ಉದಾಹೃತಂ | ಅಪ್ ಪೃಥ್ವೀಚ ಸಂಭೂತಿರ್ಲಕ್ಷಣೈಕಪ್ರಭಾವತಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಪ್ರಾಣಲಿಂಗಿಯಲ್ಲಿಯ ಶರಣಂಗೆ ವಾಯುವಿನಲ್ಲಿಯ ಆಕಾಶವೇ ಅಂಗ. ಆ ಅಂಗಕ್ಕೆ ಸುಮನದಲ್ಲಿಯ ಸುಜ್ಞಾನವೇ ಹಸ್ತ. ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ. ಆ ಪ್ರಸಾದಲಿಂಗದಮುಖದಲ್ಲಿ ಮಿಶ್ರವಾದ ಸ್ಪರ್ಶನದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಧ್ಯಾನವನೆಚ್ಚಲರಿಯದೆ ಸುಷುಪ್ತಿಯ ಹಾಂಗೆ ಅಂತಃಕರಣಚತುಷ್ಟಯಂಗಳು ಸುಸ್ಥಿರವಾಗಿಹುದೆ ಸಮಾದ್ಥಿಯೋಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿಮೂಲ ಅನಾದಿಮೂಲವಿಲ್ಲದಂದು, ಅಜಾಂಡ ಬ್ರಹ್ಮಾಂಡವಿಲ್ಲದಂದು, ವೇದಾಂತ ಸಿದ್ಧಾಂತವಿಲ್ಲದಂದು, ವ್ಯೋಮ ವ್ಯೋಮಾಕಾಶವಿಲ್ಲದಂದು, ಜೀವಹಂಸ ಪರಮಹಂಸರಿಲ್ಲದಂದು, ಅಜಪೆ ಗಾಯತ್ರಿ ಇಲ್ಲದಂದು, ಅನಂತಕೋಟಿ ವೇದಾಗಮ ಶಾಸ್ತ್ರಪುರಾಣಂಗಳಿಲ್ಲದಂದು, ಭಾವ ನಿರ್ಭಾವವಿಲ್ಲದಂದು, ಶೂನ್ಯ ನಿಶ್ಶೂನ್ಯವಿಲ್ಲದಂದು, ಅವಾಚ್ಯಪ್ರಣವವಾಗಿದ್ದನಯ್ಯಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಐಕ್ಯನಲ್ಲಿಯ ಮಾಹೇಶ್ವರಂಗೆ ಆತ್ಮನಲ್ಲಿಯ ಅಪ್ಪುವೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಬುದ್ಧಿಯೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಗುರುಲಿಂಗವೇ ಲಿಂಗ. ಆ ಗುರುಲಿಂಗದಮುಖದಲ್ಲಿ ರಸತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ [ಆಜ್ಞಾಚಕ್ರದ] ದ್ವಿದಳಪದ್ಮವ ಹೊಕ್ಕು ನೋಡಿ ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು ಜೀವ ಪರಮರಂ ಏಕೀಕರಿಸಿ ಅಲ್ಲಿ ಮಾಣಿಕ್ಯವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಓಂಕಾರಜ್ಯೋತಿಯಂ ಬೆರಸುತ್ತ ಉನ್ಮನಿಯ ಬೆಳಗನೊಳಕೊಂಡು ಕರ್ಣದ್ವಾರದಲ್ಲಿ ಶಂಖ ದುಂದುಬ್ಥಿ ಧ್ವನಿಗಳಂ ಕೇಳುತ್ತ ಪರಮಕಾಷ್ಠಿಯಾಗಿ ತಾನೇ ಜಗತ್ತಾಗಿ ``ಅಣೋರಣೀಯಾನ್ ಮಹತೋ ಮಹೀಯಾನ್'' ``ಏಕಮೇವ ಅದ್ವಿತೀಯಂ'' ಎಂಬ ಶ್ರುತಿಪ್ರಮಾಣದರಿವು ನೆಲೆಗೊಂಡು ಷಡುಚಕ್ರ ಪ್ರಾಪ್ತಿಯಾಗಿ, ಮನ-ಪವನ-ಬಿಂದು-ರವಿ-ಶಶಿ-ಶಿಖಿಗಳನೇಕೀಕರಿಸಿ ಮೇಗಣ ಬಯಲ ಬಾಗಿಲಂ ತೆಗೆದು ಸಹಸ್ರದಳಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಆದಿ ಪ್ರಣವದ ನೆನಹುಮಾತ್ರದಲ್ಲಿ ಆದಿ ಅಕಾರ, ಆದಿ ಉಕಾರ, ಆದಿ ಮಕಾರವೆಂಬ ಪ್ರಣವತ್ರಯಂಗಳುತ್ಪತ್ಯವಾಯಿತ್ತು . ಆ ಆದಿ ಅಕಾರ, ಆದಿ ಉಕಾರ, ಆದಿ ಮಕಾರ-ಇವು ಮೂರು ಬೀಜಾಕ್ಷರ. ಆದಿ ಅಕಾರವೆ ಆದಿನಾದ, ಆದಿ ಉಕಾರವೇ ಆದಿಬಿಂದು, ಆದಿ ಮಕಾರವೆ ಆದಿಕಲೆ. ಆದಿ ಅಕಾರವೇ ನಿರಾಳಾತ್ಮನು, ಆದಿ ಉಕಾರವೇ ನಿರಂಜನಾತ್ಮನು, ಆದಿ ಮಕಾರವೆ ನಿರಾಮಯಾತ್ಮಕನು ನೋಡಾ. ಇದಕ್ಕೆ ಶ್ರೀಮಹಾದೇವೋವಾಚ: ``ಅಕಾರಂ ನಾದರೂಪೇಣ ಉಕಾರೋ ಬಿಂದುರುಚ್ಯತೇ | ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ || ಓಂಕಾರೋ ಜ್ಯೋತಿರೂಪಂಚ ಓಂಕಾರೋ ಪರಮೇಶ್ವರಃ | ನಾದರೂಪಂ ನಿರಾಲಂಬಂ ಬಿಂದುರೂಪಂ ನಿರಂಜನಂ | ನಾದಬಿಂದೂಭಯೋಃ ಕರ್ತಾ ರುದ್ರಃ ಶಂಭುಃ ನಿರಾಮಯಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಐಕ್ಯನಲ್ಲಿಯ ಪ್ರಸಾದಿಗೆ ಆತ್ಮನಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ನಿರಹಂಕಾರವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಶಿವಲಿಂಗವೇ ಲಿಂಗ. ಆ ಶಿವಲಿಂಗದ ಮುಖದಲ್ಲಿ ರೂಪತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿ ಅಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಉಕಾರದಲ್ಲಿ ಕುಂಡಲಾಕಾರ ಅರ್ಧಚಂದ್ರಕಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಮಕಾರದಲ್ಲಿ ದರ್ಪಣಾಕಾರ ಜ್ಯೋತಿಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಅಕಾರ ಉಕಾರ ಮಕಾರ-ಈ ಮೂರು ಏಕವಾಗಿ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವ ಉತ್ಪತ್ಯವಾಗದ ಮುನ್ನ ಮುನ್ನವೆ ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಶರಣನಲ್ಲಿಯ ಮಾಹೇಶ್ವರಂಗೆ ಆಕಾಶದಲ್ಲಿಯ ಅಪ್ಪುವೇ ಅಂಗ. ಆ ಅಂಗಕ್ಕೆ ಸುಜ್ಞಾನದಲ್ಲಿಯ ಸುಬುದ್ಧಿಯೇ ಹಸ್ತ. ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಗುರುಲಿಂಗವೇ ಲಿಂಗ. ಆ ಗುರುಲಿಂಗದಮುಖದಲ್ಲಿ ತಂತಿವಿಡಿದು ಹುಟ್ಟಿದ ನಾದದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿಮೂಲ ಅನಾದಿಮೂಲಂಗಳಿಗತ್ತತ್ತವಾಗಿಹ ಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿ ಅನಂತಕೋಟಿಬ್ರಹ್ಮಾಂಡಂಗಳ ಅನಂತಕೋಟಿಮಹಾಭುವನಂಗಳ ಅನಂತಕೋಟಿಲೋಕಾದಿಲೋಕಂಗಳ ಸೃಜಿಸಬೇಕೆಂಬ ನೆನಹುಮಾತ್ರದಲ್ಲಿ ಈ ನಿರಂಜನಾತೀತ ಪ್ರಣವದುತ್ಪತ್ಯವಾಯಿತ್ತು. ಆ ಅವಾಚ್ಯಪ್ರಣವದ ನೆನಹುಮಾತ್ರದಲ್ಲಿಯೇ ನಿರಂಜನ ಕಲಾಪ್ರಣವವು ಉತ್ಪತ್ಯವಾಯಿತ್ತು. ಆ ನಿರಂಜನಾತೀತ ಕಲಾಪ್ರಣವದ ನೆನಹುಮಾತ್ರದಲ್ಲಿಯೇ ಅನಾದಿಪ್ರಣವದುತ್ಪತ್ಯವಾಯಿತ್ತು. ಆ ಅನಾದಿಪ್ರಣವದ ನೆನಹುಮಾತ್ರದಲ್ಲಿಯೇ ಅನಾದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು. ಆ ಅನಾದಿ ಅಕಾರ ಉಕಾರ ಮಕಾರದ ನೆನಹುಮಾತ್ರದಲ್ಲಿಯೇ ಅದಿಪ್ರಣವ ಉತ್ಪತ್ಯವಾಯಿತ್ತು. ಆ ಆದಿಪ್ರಣವದ ನೆನಹು ಮಾತ್ರದಲ್ಲಿಯೇ. ಆದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಚಕ್ರಾತೀತಾಗಮೇ : ``ಅಖಂಡಮೂಲ ಚಿಂತಾಯಾಂ ನಿರಂಜನಾತೀತೋದ್ಭವಃ | ನಿರಂಜನಾತೀತ ಚಿಂತಾಯಾಂ ನಿರಂಜನೋಂಕಾರಸಂಭವಃ || ನಿರಂಜನಸ್ಯ ಚಿಂತಾಯಾಂ ಅವಾಚ್ಯಂ ನಾಮ ಜಾಯತೇ | ಅವಾಚ್ಯಸ್ಯ ಚ ಚಿಂತಾಯಾಂ ಕಲಾನಾಮ ಸಮುದ್ಗತಃ || ಕಲಾಪ್ರಣವಚಿಂತಾಯಾಂ ಅನಾದಿಪ್ರಣವ್ದೋಭವತ್ | ಅನಾದಿಪ್ರಣವ ಚಿಂತಾಯಾಂ ಅನಾದಿಮಂತ್ರ ಸಂಭವಃ || ಅನಾದಿಮಂತ್ರಚಿಂತಾಯಾಂ ಆದಿಪ್ರಣವ ಸಂಭವಃ | ಆದಿಪ್ರಣವಚಿಂತಾಯಾಂ ಅಕ್ಷರತ್ರಯಮುದ್ಗತಂ ||'' ಇಂತೆಂದುದಾಗಿ. ಇದಕ್ಕೆ ಮಹಾವೇದದ ಪ್ರಣವ ಪುರುಷಸೂಕ್ತೆ ೀ : ``ಓಂ ಅಖಂಡಮೂಲಚಿಂತಾಯಾಂ ನಿರಂಜನಾತೀತಮಜಾಯತ | ಕಲಾಪ್ರಣವ ತದಸ್ಯಾ ಅನಾದಿ ಓಂಕಾರ್ದೋಜಾಯತ || ಅನಾದ್ಯೋಂಕಾರಚಿಂತಾಯಾಮನಾದಿ ತ್ರಿಯಕ್ಷರಮಜಾಯತ | ಅನಾದಿ ತ್ರಿಯಕ್ಷರ ಚಿಂತಾಯಾಂ ಆದಿಪ್ರಣವ್ದೋಜಾಯತ | ನಿರಂಜನಾತೀತ ಪ್ರಣವಾಭ್ಯಾಂ ನಿರಂಜನಪ್ರಣವ್ದೋಜಾಯತ | ನಿರಂಜನಪ್ರಣವಾದಸ್ಯ ಅವಾಚ್ಯೋಂಕಾರ್ದೋಜಾಯತ | ಅವಾಚ್ಯೋಂಕಾರಚಿಂತಾಭ್ಯಾಂ ಕಲಾಪ್ರಣವ್ದೋಜಾಯತ | ಆದಿಪ್ರಣವಚಿಂತಾಯಾಂ ಅಕ್ಷರತ್ರಯಮಜಾಯತ ||'' ಇಂತೆಂದುದು ಶ್ರುತಿ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಅಖಂಡ ಮಹಾಮೂಲಸ್ವಾಮಿಯ ಸ್ಥಲದ ವಚನವೆಂತೆಂದೊಡೆ : ನಿರಂಜನಾತೀತಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ, ಅನಾದಿಪ್ರಣವ, ಆದಿಪ್ರಣವ ಶಿವಪ್ರಣವ, ಶಕ್ತಿಪ್ರಣವ, ಶಿವಶಕ್ತಿರಹಿತವಾಗಿಹ ಮಹಾಪ್ರಣವ ಮೊದಲಾದ ಅನಂತಕೋಟಿ ಪ್ರಣವಂಗಳಿಲ್ಲದಂದು, ಚಿತ್ಪ್ರಕಾಶ ಚಿದಾಕಾಶ ಮಹದಾಕಾಶ ಮಹಾಕಾಶ ಶಿವಾಕಾಶ ಬಿಂದ್ವಾಕಾಶ ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ ಅನಂತಕೋಟಿ ಮಹಾಪ್ರಣವಾಕಾಶ, ಅತಿಪ್ರಣವಾಕಾಶ ಅತಿಮಹಾತೀತಪ್ರಣವಾಕಾಶಗಳಿಲ್ಲದಂದು, ಆದಿ ಅನಾದಿ ಸಂಗತ ಅನಂತ ಅರ್ಭಕ ತಮಂಧ ತಾರಜ ತಂಡಜ ಬ್ಥಿನ್ನಜ ಬ್ಥಿನ್ನಾಯುಕ್ತ ಅವ್ಯಕ್ತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳೆಂಬ ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಯುಗಂಗಳು ಅತಿಮಹಾಯುಗಂಗಳು, ಅತಿಮಹಾತೀತಮಹಾಯುಗಂಗಳಿಲ್ಲದಂದು, ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡ ಮಹಾಮೂಲಸ್ವಾಮಿಯು ಇದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಮಹಾಸದಾಶಿವತತ್ವದಲ್ಲಿ ಸದಾಶಿವನುತ್ಪತ್ಯವಾಗಿ ಆಕಾಶಕ್ಕೆ ಅದ್ಥಿದೇವತೆಯಾಗಿಹನು. ಆಕಾಶತತ್ವದಲ್ಲಿ ಏಕಶಿರ ದ್ವಿಭುಜ ತ್ರಿನೇತ್ರವನುಳ್ಳ ಈಶ್ವರತತ್ವ ಉತ್ಪತ್ಯವಾಗಿ ವಾಯುವಿಂಗೆ ಅದ್ಥಿದೇವತೆಯಾಗಿಹನು. ಆ ಈಶ್ವರತತ್ವದಲ್ಲಿ ಪಂಚಮುಖರುದ್ರನುತ್ಪತ್ಯವಾಗಿ ಅಗ್ನಿಗೆ ಅದ್ಥಿದೇವತೆಯಾಗಿಹನು. ಆ ಪಂಚಮುಖರುದ್ರನಲ್ಲಿ ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ಸಹಸ್ರಪಾದವನುಳ್ಳ ವಿರಾಟ್‍ಪುರುಷನುತ್ಪತ್ಯವಾದನು. ಆ ವಿರಾಟ್ಪುರುಷನಲ್ಲಿ ಏಕಶಿರ ದ್ವಿಭುಜವನುಳ್ಳ ವಿಷ್ಣು ಉತ್ಪತ್ಯವಾಗಿ ಅಪ್ಪುವಿಗೆ ಅದ್ಥಿದೇವತೆಯಾಗಿಹನು. ಆ ವಿಷ್ಣುವಿನಲ್ಲಿ ಚತುರ್ಮುಖಬ್ರಹ್ಮ ಉತ್ಪತ್ಯವಾಗಿ ಪೃಥ್ವಿಗೆ ಅದ್ಥಿದೇವತೆಯಾಗಿಹನು. ಆ ಬ್ರಹ್ಮನಲ್ಲಿ ಸರ್ವಜೀವಂಗಳುತ್ಪತ್ಯ ನೋಡಾ. ಇದಕ್ಕೆ ಕಾಲಾಗ್ನಿರುದ್ರಸಂಹಿತಾಯಾಂ : ಶ್ರೀ ಮಹಾದೇವ ಉವಾಚ- ``ಪಂಚವಕ್ತ್ರಸದಾಖ್ಯಾನಾಂ ಈಶ್ವರಶ್ಚ ಸಜಾಯತೇ | ತಥಾ ಈಶ್ವರತತ್ವೇ ಚ ಕಾಲರುದ್ರ ಸಮುದ್ಭವಃ | ಪಂಚವಕ್ತ್ರಃ ಮಹಾರುದ್ರ ವಿರಾಟ್ಪುರುಷ ಜಾಯತೇ | ವಿರಾಟ್ಪುರುಷ ಮಹಾತತ್ವೇ ಆದಿ ವಿಷ್ಣುಸಮುದ್ಭವಃ | ವಿಷ್ಣುತತ್ವಾತ್‍ಮಹಾದೇವಿ ವಿರಿಂಚಿತತ್ವಃ ಜಾಯತೇ | ಚತುರ್ಮುಖಬ್ರಹ್ಮತತ್ವೇ ಸರ್ವಜೀವಸ್ತವೋಸ್ತಥಾ | ಇತಿ ತತ್ವೋದ್ಭವಂ ಜ್ಞಾನಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಆನಂದಭೈರವಿ : ``ಪೃಥ್ವೀ ಬ್ರಹ್ಮಾ ಜಲಂ ವಿಷ್ಣು ಸ್ತಥಾ ರುದ್ರೋ ಹುತಾಶನಃ | ಈಶ್ವರೋ ಪವನೋ ದೇವಾಃ ಆಕಾಶಶ್ಚ ಸದಾಶಿವಃ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ | ಭೂಮ್ಯಾದಿ ದೈವಮಿತ್ಯುಕ್ತಂ ಇತಿ ಭೇದಂ ವರಾನನೇ ||'' ಇತೆಂದುದಾಗಿ, ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ. ಆದಿ ಅಕಾರಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ. ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ. ಆ ಆದಿ ಕಲೆ ನಾದ ಬಿಂದುಪ್ರಣವಕ್ಕೆ ಆದಿ ಪ್ರಕೃತಿಪ್ರಣವವೇ ಆಧಾರ. ಆ ಆದಿಪ್ರಕೃತಿಪ್ರಣವಕ್ಕೆ ಪ್ರಾಣಮಾತ್ರೆಯಪ್ರಣವವೇ ಆಧಾರ. ಆ ಪ್ರಾಣಮಾತ್ರೆಯಪ್ರಣವಕ್ಕೆ ಅಖಂಡಜ್ಯೋತಿರ್ಮಯವಾಗಿಹ ಲಿಂಗವೇ ಆಧಾರ. `ಮ' ಎಂದಡೆ ಆದಿ ಅನುಸ್ವಾರಪ್ರಣವ, `ಅ' ಎಂದಡೆ ಆದಿ ನಾದ ಪ್ರಣವ, `ಉ' ಎಂಬ ಆದಿಬಿಂದುಪ್ರಣವದಲ್ಲಿ ಬಂದು ಕೂಡಿ ಮಯೆಂಬ ಅನುಸ್ವಾರಪ್ರಣವದಲ್ಲಿ ಬಂದು ಕೂಡಲು ಮಹದೋಂಕಾರವಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿ ಅನಾದಿಯಿಲ್ಲದಂದು ತಾನೆ ಪ್ರಣವಸ್ವರೂಪನು. ಅನಂತ ಬ್ರಹ್ಮಾಂಡವಿಲ್ಲದಂದು ತಾನೆ ನಾದಬಿಂದುಕಲಾತೀತನು. ಜೀವಪರಮರಿಲ್ಲದಂದು ತಾನೆ ನಾಮ ಸ್ವರೂಪ ಕ್ರಿಯಾತೀತನು. ಸಚರಾಚರಂಗಳೆಲ್ಲಾ ರಚನೆಗೆ ಬಾರದಂದು ತಾನೆ ಅಖಂಡಪರಿಪೂರ್ಣ ಅಪ್ರಮೇಯ ಅಗೋಚರ ಅಪ್ರಮಾಣ ಅನಂತ ತೇಜೋಮಯವಾಗಿಹ ಮಹಾಘನಲಿಂಗ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆತ್ಮನೆ ಅಂಗವಾದ ಐಕ್ಯ ಭಾವವೆಂಬ ಹಸ್ತದಲ್ಲಿ ಮಹಾಲಿಂಗಕ್ಕೆ ಮನವೆಂಬ ಮುಖದಲ್ಲಿ ಪರಿಣಾಮ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆತ್ಮಾಂಗೋ ಭಾವಹಸ್ತೇನ ಐಕ್ಯಶ್ಚಾಪಿ ಮಹಾತ್ಮನೇ | ಹೃನ್ಮುಖೀ ಅರ್ಪಿತಂಚೈವ ಪದಾರ್ಥಂ ತೃಪ್ತಿಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಅಖಂಡಮಹಾಜ್ಯೋತಿಪ್ರಣವದ ಅರ್ಧಚಂದ್ರಕಸ್ವರೂಪವಾಗಿಹ ಬ್ರಹ್ಮಾನಂದಬ್ರಹ್ಮದಲ್ಲಿ ಈಶ್ವರ, ವಾಯು, ಸ್ಪರ್ಶ, ಮನ, ತ್ವಕ್ಕು, ಪಾಣೇಂದ್ರಿಯವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ಈಶ್ವರೋ ವಾಯು ಸಂಸ್ಪರ್ಶೇ ಮನಸ್ತತ್ವಾನಿ ಉಚ್ಯತೇ | ಷಟ್‍ಸಮ್ಮಿಶ್ರಿತಂ ಯಸ್ತು ಬ್ರಹ್ಮಾನಂದಶ್ಚ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಐಕ್ಯನಲ್ಲಿಯ ಶರಣಂಗೆ ಆತ್ಮನಲ್ಲಿಯ ಆಕಾಶವೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಜ್ಞಾನವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ. ಆ ಪ್ರಸಾದಲಿಂಗಮುಖದಲ್ಲಿ ಶಬ್ದತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಐಕ್ಯನಲ್ಲಿಯ ಪ್ರಾಣಲಿಂಗಿಗೆ ಆತ್ಮನಲ್ಲಿಯ ವಾಯುವೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಮನವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ. ಆ ಜಂಗಮಲಿಂಗದಮುಖದಲ್ಲಿ ಸ್ಪರ್ಶನತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿ ಅಕಾರ ಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ. ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ. ಆದಿ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ. ಆ ಆದಿ ನಾದಬಿಂದುಕಲಾಪ್ರಣವಣಕ್ಕೆ ಆ ಆದಿ ಪ್ರಕೃತಿಪ್ರಣವವೇ ಆಧಾರ. ಆ ಆದಿ ಪ್ರಕೃತಿಪ್ರಣವಕ್ಕೆ ಆ ಆದಿ ಪ್ರಾಣಮಾತ್ರೆಯ ಪ್ರಣವವೇ ಆಧಾರ. ಆ ಆದಿ ಪ್ರಾಣಮಾತ್ರೆಯ ಪ್ರಣವಕ್ಕೆ ಆ ಅಖಂಡಜ್ಯೋತಿರ್ಮಯಲಿಂಗವೇ ಆಧಾರ. ಆದಿ ಅ ಎಂದರೆ ಆದಿ ಅನಾಹತಪ್ರಣವ, ಆದಿ ಉ ಎಂದರೆ ಆದಿ ನಾದ ಪ್ರಣವವಳಿಯಿತ್ತು. ಆದಿ ಮ ಎಂಬ ಪ್ರಣವದಲ್ಲಿ ಆದಿ ಬಿಂದುಪ್ರಣವ ಬಂದು ಕೂಡಲು ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವವಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಅಖಂಡಮಹಾಜ್ಯೋತಿಪ್ರಣವದ ಕುಂಡಲಾಕಾರವಾಗಿಹ ಕಲಾಬ್ರಹ್ಮದಲ್ಲಿ ರುದ್ರ, ಅಗ್ನಿ, ರೂಪ, ಅಹಂಕಾರ, ನೇತ್ರ, ಪಾದೇಂದ್ರಿಯವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತು ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ರುದ್ರಂ ತೇಜಸ್ತಥಾ ರೂಪಂ ಮಹಾನೇತ್ರಂ ಚ ಪಾದಯೋಃ | ಷಡಂಗಮಿಶ್ರಿತಂ ಚೇತಿ ಕಲಾಬ್ರಹ್ಮೇತಿ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಮಾಹೇಶ್ವರನಲ್ಲಿಯ ಪ್ರಸಾದಿಗೆ ಅಪ್ಪುವಿನಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಸುಬುದ್ಧಿಯಲ್ಲಿಯ ನಿರಹಂಕಾರವೆ ಹಸ್ತ. ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಶಿವಲಿಂಗವೆ ಲಿಂಗ. ಆ ಶಿವಲಿಂಗಮುಖದಲ್ಲಿ ಖಾರವಾದ ರುಚಿಯ ದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ

ಇನ್ನಷ್ಟು ...