ತತ್ವಮೂರರಾದಿಯನರಿದು,
ಮೂರರೊಳಗೆ ಮೂವತ್ತಾರುತತ್ತ್ವವ ಭೇದಿಸಿ,
ಆ ಮೂವತ್ತಾರುತತ್ತ್ವದೊಳಗೆ
ತ್ವಂಪದ ತತ್ಪದ ಅಸಿಪದಂಗಳನರಿದು,
ಅಕಾರ ಉಕಾರ ಮಕಾರವ ತಿಳಿದು,
ತ್ವಂಪದ ತತ್ಪದ ಅಸಿಪದಂಗಳ
ಅಕಾರ ಉಕಾರ ಮಕಾರದಲ್ಲಿ ಅಡಗಿಸಿ,
ಆ ಪ್ರಣವದ ಶಿರೋಮಧ್ಯದಲ್ಲಿಹುದೆ ಜ್ಯೋತಿರ್ಮಯಲಿಂಗ.
ಆ ಜ್ಯೋತಿರ್ಮಯಲಿಂಗವನರಿದ ಶರಣ
ಜ್ಞಾನಿಯೆಂಬೆನೆ ಜ್ಞಾನಿಯಲ್ಲ, ಅಜ್ಞಾನಿಯೆಂಬೆನೆ ಅದಕ್ಕೆ ಮುನ್ನವೆ ಅಲ್ಲ ,
ದ್ವೈತಿಯೆಂಬೆನೆ ದ್ವೈತಿಯಲ್ಲ, ಅದ್ವೈತಿಯೆಂಬೆನೆ ಅದ್ವೈತಿಯಲ್ಲ,
ಶೂನ್ಯನೆಂಬೆನೆ ಶೂನ್ಯನಲ್ಲ, ನಿಶ್ಶೂನ್ಯನೆಂಬೆನೆ ನಿಶ್ಶೂನ್ಯನಲ್ಲ.
ನಿಮ್ಮ ಶರಣನ ನಿಲವ ನೀನೆ ಬಲ್ಲೆಯಯ್ಯಾ
ಅಪ್ರಮಾಣಕೂಡಲಸಂಗಮದೇವಾ.