ಸಪ್ತಧಾತುಗಳಿಂದ ದೇಹವಾಗಿ ಬೆಳೆದ ಪಿಂಡ
ಅಪಾದಮಸ್ತಕವೆಲ್ಲ ಬ್ರಹ್ಮಾಂಡಸಂಗ್ರಹಮಾಗಿ
ತೋರ್ಪುದದೆಂತೆಂದಡೆ :
ಪಾದತಳದಲ್ಲಿ ಅತಳಲೋಕ, ಪಾದೋಧ್ರ್ವದಲ್ಲಿ ವಿತಳಲೋಕ,
ಜಂಘೆಯಲ್ಲಿ ಸುತಳಲೋಕ, ಜಾನುವಿನಲ್ಲಿ ನಿತಳಲೋಕ,
ಊರುದ್ವಯದಲ್ಲಿ ತಳಾತಳಲೋಕ, ಗುಹ್ಯಸ್ಥಾನದಲ್ಲಿ ರಸಾತಳಲೋಕ,
ಕಟಿಯಲ್ಲಿ ಪಾತಾಳಲೋಕ.
ಆ ಕಟಿಸ್ಥಾನದ ಪಾತಾಳಲೋಕದ ಮೇಲೆ
ಅಧೋಬ್ರಹ್ಮರಂಧ್ರ ವಳಯಾಕೃತವಾಗಿಹುದು.
ಆ ಅಧೋಬ್ರಹ್ಮರಂಧ್ರದ ವಳಯಾಕೃತದೊಳು
ಅಮೃತವೆಂಬ ಮಹಾಜಲವಿಹುದು.
ಅಮೃತವೆಂಬ ಮಹಾಜಲದಮೇಲೆ
ಅಧೋಜ್ಯೋತಿಪ್ರಣಮಲಿಂಗವೆಂಬ ಮಹಾಕಮಠನಿಹುದು.
ಆ ಮಹಾಕಮಠನ ಮೇಲೆ ಅಧೋಕುಂಡಲಿಯ ಸರ್ಪನೆಂಬ
ಮಹಾವಾಸುಗಿ ಇಹುದು.
ಸಂಸ್ಥಿತ, ತೃಣೀಕೃತ, ವರ್ತಿನಿ, ಕ್ರೋಧಿನಿ, ಮೋಹಿನಿ,
ಅತಿಚಾರಿಣಿ, ಗಂಧಚಾರಿಣಿ, ವಾಸಿನಿಯೆಂಬ
ಅಂತರಂಗದ ಅಷ್ಟಮದಂಗಳೆಂಬ ಅಷ್ಟದಿಕ್ಮಹಾಗಜಂಗಳ ಮೇಲೆ
ಭೂಲೋಕವಿಹುದು.
ಆ ಭೂಲೋಕ ನಾಭಿಸ್ಥಾನಂಗಳಲ್ಲಿಹುದು.
ಕುಕ್ಷಿಯಲ್ಲಿ ಭುವರ್ಲೋಕವಿಹುದು.
ಹೃದಯಸ್ಥಾನದಲ್ಲಿ ಸ್ವರ್ಲೋಕವಿಹುದು.
ವಕ್ಷದಲ್ಲಿ ಮಹರ್ಲೋಕವಿಹುದು.
ಕಂಠಸ್ಥಾನದಲ್ಲಿ ಜನರ್ಲೋಕವಿಹುದು.
ಲಲಾಟದಲ್ಲಿ ತಪರ್ಲೋಕವಿಹುದು.
ಶಿರಸ್ಥಾನದಲ್ಲಿ ಸತ್ಯರ್ಲೋಕವಿಹುದು.
ಬ್ರಹ್ಮರಂಧ್ರದಲ್ಲಿ ಮಹಾಪ್ರಳಯಜಲವಿಹುದು.
ಶಿಖಾಚಕ್ರದಲ್ಲಿ ಶಿವಾಂಡವಿಹುದು.
ಪಶ್ಚಿಮಚಕ್ರದಲ್ಲಿ ಚಿದ್ಬ್ರಹ್ಮಾಂಡವಿಹುದು.
ಇದಕ್ಕೆ ಶ್ರೀ ಮಹಾದೇವ ಉವಾಚ :
``ಪಾದಸ್ವತಲಂ ವಿದ್ಯಾತ್ ಪಾದೋಧ್ರ್ವಂ ವಿತಲಂ ಭವೇತ್ |
ಸುತಲಂ ಜಂಘದೇಶೇಷು ನಿತಲಂ ಜಾನುನೋದಯೇ ||
ತಲಾತಲಂ ಚ ಉಭ್ಯಾಗಂ ಗುಹ್ಯಸ್ಥಾನೇ ರಸಾತಲಂ |
ಪಾತಾಲಂ ಕಟಿರಿತ್ಯುಕ್ತಂ ಸಪ್ತಮಂ ಪರಿಕೀರ್ತಿತಂ ||
ಭೂಲೋಕಂ ನಾಭಿಮಧ್ಯಸ್ಥಂ ಭುವರ್ಲೋಕಂತು ಕುಕ್ಷಿಗಂ |
ಹೃದಿಸ್ಥಂ ಸ್ವರ್ಲೋಕಂತು ಮಹರ್ಲೋಕಂತು ವಕ್ಷಸಿ ||
ಕಂಠಸ್ಥಂ ಜನರ್ಲೋಕಂತು ತಪರ್ಲೋಕಂ ಲಲಾಟಕೇ |
ಸತ್ಯರ್ಲೋಕಮೂದ್ರ್ಧನ್ಯಸ್ತಿಂ ಭುವನಾನಿ ಚತುರ್ದಶ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.