ಇಂದು ಭಾನುವನೊಂದುಗೂಡಿಸಿ,
ಬಿಂದು ನಾದವನೊಂದುಮಾಡಿ,
ಅವರಲ್ಲಿ ತಂದಿರಿಸಿದ ಜೀವ ಪ್ರಾಣಂಗಳನು.
ಅವರೊಳಗೆ ಕರಣೇಂದ್ರಿಯಗಳ ಹುರಿಗೊಳಿಸಿ,
ನಾಡಿ ಚಕ್ರಂಗಳಿಂದ ಜಂತ್ರವ ಹೂಡಿ ನಿಲಿಸಿ,
ತಾಯಿ ಉಂಡ ಅನ್ನರಸವ ನಾಭಿಸೂತ್ರದಲ್ಲಿ ಶಿಶುವಿಗೆ ಊಡಿಸಿ,
ಜೀವಿಸಿದ ಶಿಶುವ ಯೋನಿಮುಖದಿಂ ಹೊರವಡಿಸಿ,
ತಾಯಿಯ ಸ್ತನದಲ್ಲಿ ಅಮೃತವ ತುಂಬಿ ಊಡಿಸಿ,
ಸಲಹುವ ದೇವನ ಮರೆವ ಜೀವರಿಗೆ ಇನ್ನಾವಗತಿಯೂ ಇಲ್ಲಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.