ಲಿಂಗವೇದಿಯಾದ ಶರಣಂಗೆ,
ಕಂಗಳ ಕೊನೆಯಿಂದ ನೋಡಿದ ಸರ್ವಲೋಕವೆಲ್ಲ
ಚಿದಾಕಾಶಮಯವಾಗಿ ತೋರುವುದಲ್ಲದೆ,
ಮತ್ತೊಂದು ಪರಿಯಾಗಿ ತೋರದು ನೋಡಾ.
ಆ ಶರಣನು ಬ್ರಹ್ಮಜ್ಞಾನವೇ ಜೋಡಾಗಿ ದುಃಖರಹಿತನು.
ಆ ಅಜಡರೂಪ ನಿಜಯೋಗಿಯ
ಜ್ಞಾನವು ಸುಷುಪ್ತಿಯನೈದಿತ್ತಾಗಿ,
ಆಕಾಶದ ಕುಸುಮದಂತೆ, ತನುವಿಲ್ಲದ ಘನರೂಪನು.
ಮನವೆಂಬ ಅಣುವ ನುಂಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪದದಲ್ಲಿ
ಪ್ರವೇಶವಾಗಿಹನು.