ತತ್ತ್ವ ಮೂವತ್ತಾರರಿಂದತ್ತತ್ತ ಪರಕ್ಕೆ ಪರವಾದ ಗುರುವಿನ ಅಂಗ ತಾನೆ ಸಕಲ ನಿಃಕಲರೂಪಾದ ಲಿಂಗವು. ಅದು ತಾನೆ ಮತ್ತೆ ಸಕಲಾಂಗವೆನಿಸುವ ಜಂಗಮವು. ಆ ಜಂಗಮವು ತಾನೆ ಗುರುವಿನ ನಿಃಕಲಾಂಗವು. ಆ ಶ್ರೀಗುರುವಿನ ಕಳೆಯಿಂದ ಹುಟ್ಟಿದ ನಿಜಸುಖವೇ ಪ್ರಸಾದಲಿಂಗವು, ಇಂತು ಗುರು ಲಿಂಗ ಜಂಗಮವೆನಿಸುವ ಶುದ್ಧ ಸಿದ್ಧ ಪ್ರಸಿದ್ಧ ಲಿಂಗಕಳೆಗಳಿಂದತಿಶಯವಾಗಿ ಬೆಳಗುವ ಶರಣ ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
ತ್ರಾಸಿನ ತೂಕದಂತೆ, ಅಂಗ ಲಿಂಗ ಸಮವಾಗಿ, ಬಿಲುಗಾರನೆಸುಗೆಯ ಬಾಣದ ಕೂಡೆ ಕಾಣಿಸುವ ಘಾಯದಂತೆ, ಹೂಣಿಸಿದರ್ಪಿತಸಂಧಾನವೆಸವುತ್ತ, ಅಕ್ಷರದೊಡನೆ ತೋರುವ ಶಬ್ದದಂತೆ, ಅಂಗ ಲಿಂಗೈಕ್ಯವನರಿದಾಂತಗೆ ಅನರ್ಪಿತವೆಂಬುದುಂಟೇ? ಇಲ್ಲ. ಆತ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗೆ, ಅಡಗಿ ಅರ್ಪಿಸುವ ಸುಯಿಧಾನಿ ತಾನು.
ತಾನೇ ಲಿಂಗವೆಂದರಿದು, ಮತ್ತೆ ಬೇರೆ ಲಿಂಗವಿದೆಂದು ಕಲ್ಪಿಸಿ ರೂಹಿಸಿ ಭಾವಿಸಿ ನೋಡಲು ಅದು ಭಾವಸಂಕಲ್ಪವಲ್ಲದೆ ನಿಜವಲ್ಲ. ಶುಕ್ತಿಯಲ್ಲಿ ರಜತಭಾವ ತೋರಿತ್ತೆಂದಡೆ, ಅದು ಸಹಜವೇ? ಇದು ಭಾವಸಂಕಲ್ಪವೆಂದರಿದಾಗವೆ ಭಾವ ನಿಃಪನ್ನವಾಗಿ ಪರಿಪೂರ್ಣ ಬೋಧಪರಾನಂದರೂಪ ತಾನೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೆ, ಲಿಂಗವಲ್ಲದೆ ಬೇರೆ ಲಿಂಗವಿಲ್ಲ.
ತನ್ನಲ್ಲಿ ತಾನು ಪ್ರತ್ಯಕ್ಷಾನುಭಾವದಿಂದ ತಿಳಿದುನೋಡಿ, ಆ ತಿಳಿದ ತಿಳಿವಿನೊಳಗೆ, ಲಿಂಗದ ನಿಜವ ಕಂಡು ಕಾಂಬ ಜ್ಞಾನ ತಾನೆಂದರಿದು, ಕಾಂಬುದು ಕಾಣಿಸಿಕೊಂಬು[ದು] ಎರಡೊಂದಾದ ನಿಲವು ತಾನೆ ನಿಮ್ಮ ನಿಲುವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ತಟಿದಂಕುರದಂತೆ ಕ್ಷಣದಲ್ಲಿ ತೋರಿಯಡಗುವ ಸಂಸಾರ. ಇದರಲ್ಲೇನು ಲೇಸಕಂಡು, ನಿತ್ಯಾನಂದ ಚಿದಾತ್ಮಸುಖವ ಬಿಡುವೆ? ಈ ಸಂಸಾರ ಸ್ಥಿರವಲ್ಲ. ಬೇಗ ಗುರು ಚರಣವ ದೃಢವಿಡಿ. ಕಾಬೆ, ಮುಂದೆ ನೀನು ಕೈವಲ್ಯವ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಹ ಸೌಖ್ಯವನು.
ತನುವೆಂಬ ಭೂಮಿಯ ಮೇಲೆ, ಶೃಂಗಾರದ ಇಂದ್ರಕೂಟಗಿರಿಯೆಂಬ ಕೈಲಾಸದಲ್ಲಿ ಉತ್ತರ ದಕ್ಷಿಣ ಪಶ್ಚಿಮದಳದ ಆತ್ಮ ಶಕ್ತಿ ಬಿಂದು ನಾದಗಳ ಮಧ್ಯದಲ್ಲಿ ಶೂನ್ಯಸಿಂಹಾಸನವೆಂಬ ಸುಜ್ಞಾನಪೀಠದ ಮೇಲೆ ನೀವು ಮೂರ್ತಿಗೊಂಡಿಹಿರಾಗಿ ಕಂಡು ಹರುಷಿತನಾದೆನು. ಸೂರ್ಯಮಂಡಲದ ದ್ವಾತ್ರಿಂಶದಳದ ರುದ್ರರು ರುದ್ರಶಕ್ತಿಯರು ನಿಮ್ಮನೋಲೈಸುತ್ತಿಹರು. ಚಂದ್ರಮಂಡಲದ ಷೋಡಶದಳದ ರುದ್ರರು ರುದ್ರಶಕ್ತಿಯರು ನಿಮ್ಮನೋಲೈಸುತ್ತಿಹರು. ಅಗ್ನಿಮಂಡಲದ ಅಷ್ಟದಳದ ರುದ್ರರು ರುದ್ರಶಕ್ತಿಯರು ನಿಮ್ಮನೋಲೈಸುತ್ತಿಹರು. ಈ ಪರಿಯಿಂದ ದೇವರದೇವನ ಓಲಗವನೇನೆಂದು ಹೇಳುವೆನು. ಮತ್ತೆ ಭೇರಿ ಮೃದಂಗ ನಾಗಸರ ಕೊಳಲು ವೀಣೆ ಕಹಳೆ ಘಂಟೆ ಶಂಖನಾದ ನಾನಾ ಬಹುವಿಧದ ಕೇಳಿಕೆಯ ಅವಸರದಲ್ಲಿ ರಾಜಿಸುವ ರಾಜಯೋಗದ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರಾದ ರಾಜಯೋಗಿಗಳೇ ಬಲ್ಲರು.
ತಾಲು ಮೂಲ ದ್ವಾದಶಾಂತದ ಮೇಲಣ ಚಿತ್ಕಲಾ ಸೂರ್ಯನು ನೆತ್ತಿಯ ಮಧ್ಯಮಂಡಲದಲ್ಲಿ ನಿಂದು, ಉದಯಾಸ್ತಮಯವಿಲ್ಲದೆ ಬೆಳಗಲು, ಮೂರು ಲೋಕದ ಕತ್ತಲೆ ಹರಿದು ಹೋಯಿತ್ತು ನೋಡಾ. ಆ ಮೂರು ಲೋಕದ ಕಳ್ಳರೆಲ್ಲಾ ಬೆಳ್ಳರಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನ ಬೆಂಬಳಿಯಲ್ಲಿಯೆ ಲಿಂಗವನಾರಾಧಿಸುತ್ತಿರ್ದರು.
ತೆರಹಿಲ್ಲದ ಕುರುಹಿಲ್ಲದ ಅರಿವಿಗಗೋಚರವಾದ ಮಹಾಪ್ರಸಾದವ ಕೊಂಡು, ತಾ ಪ್ರಸಾದವರೂಪನಾದ ಬಳಿಕ, ಮುಖ್ಯಲಕ್ಷಾ ್ಯರ್ಥ ಮೊದಲಾದ ಸರ್ವಾಲಂಬನ ಉಂಟೇ? ಇಲ್ಲವಾಗಿ. ಮನವಾತ್ಮಜ್ಯೋತಿಯಲಡಗಿ, ಜ್ಞಾನ ಜ್ಞೇಯಂಗಳೇಕವಾದ ಬಳಿಕ, ಮಾತೃಮೇಯ ಪ್ರಮಾಣಾದಿ ವ್ಯವಹಾರಗಳುಂಟೇ? ಇಲ್ಲವಾಗಿ. ಇದು ಕಾರಣ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ಶರಣ ನಿಶ್ಚಿಂತ ನಿವಾಸಿ.
ತನು ಮುಂತಾದ ಕ್ರೀಯಿಂದ ಗುರುಭಕ್ತನಹುದಯ್ಯ. ಮನ ಮುಂತಾದ ಕ್ರೀಯಿಂದ ಲಿಂಗಭಕ್ತನಹುದಯ್ಯ. ಧನ ಮುಂತಾದ ಕ್ರೀಯಿಂದ ಜಂಗಮಭಕ್ತನಹುದಯ್ಯ. ಇಂತು ತನು ಮನ ಧನವ, ಗುರು ಲಿಂಗ ಜಂಗಮಕ್ಕೆ ಕೊಟ್ಟು ತಾ ನಿರ್ಲೇಪಿಯಾದನಯ್ಯ ನಿಮ್ಮ ಭಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.