ಬ್ರಹ್ಮಕಲ್ಪಿತವಾದ ತ್ರಿಪುರನುರುಹಬೇಕೆಂದು,
ಪರಮೇಶ್ವರನು ತ್ರಿಯಕ್ಷಿಯಿಂದ ನೋಡುತ್ತಿರಲು,
ಆ ಮೂರು ನೇತ್ರಂಗಳಿಂದ ಉದಕದ ಬಿಂದುಗಳು,
ಭೂಮಿಯ ಮೇಲೆ ಪತನವಾಗಲು,
ಸರ್ವಾನುಗ್ರಹಾರ್ಥವಾಗಿ, ರುದ್ರಾಕ್ಷಿಯ ವೃಕ್ಷಂಗಳು
ಹುಟ್ಟಿದವಂದು ನೋಡಾ.
ಆ ರುದ್ರಾಕ್ಷಿಯ ವೃಕ್ಷದ ಬೀಜಂಗಳ ಧರಿಸಿದವರು, ಸ್ಮರಿಸಿದವರು,
ಕೊಂಡಾಡಿದವರು, ರುದ್ರಾಕ್ಷಿಯಲ್ಲಿ ಜಪವ ಮಾಡಿದವರು,
ಕೈವಲ್ಯವನಿತೆಗೆ ವಲ್ಲಭರಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ
ಸುಖದಿಹರು ನೋಡಾ.