ಶ್ರೀಗುರುಕರುಣ ಕಟಾಕ್ಷಮಾತ್ರದಿಂದ ಶಿವಲಿಂಗದ ಒಲುಮೆ. ಆ ಶಿವಲಿಂಗದ ಒಲುಮೆಗೆ ಗುರುಕರುಣವೇ ಮುಖ್ಯ. ಅದು ಕಾರಣ, ಗುರುಪೂಜೆಯ ಮಾಡಿ, ಗುರು ಕೃಪೆಯನೆ ಪಡೆದಿಹುದಯ್ಯ. ಉಪಮಿಸಬಾರದ ಮಹಾದೇವನು, ಪ್ರತ್ಯಕ್ಷವಾಗಿ, ಗುರುರೂಪಿಂದ ಇಹನೆಂದರಿದು, ಗುರುಭಕ್ತಿಯನೆ ಮಾಡುವುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ಶ್ರೋತ್ರೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿದ ಆಕಾಶವನು, ತ್ವಗಿಂದ್ರಿಯವನು ಆ ಇಂದ್ರಿಯದೊಡನೆ ಕೂಡಿದ ವಾಯುವನು, ನೇತ್ರೇಂದ್ರಿಯವನು ಈ ಇಂದ್ರಿಯದೊಡನೆ ಕೂಡಿದ ಅಗ್ನಿಯನು, ಜಿಹ್ವೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿಹ ಅಪ್ಪುವನು, ನಾಸಿಕೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿಹ ಪೃಥ್ವಿಯನು, ಈ ಭೂತಂಗಳು ಕೂಡಿ, ಸಕಲೇಂದ್ರಿಯ ಶಬ್ದಾದಿ ವಿಷಯಾರ್ಪಣವ ಮಾಡಿ, ಪ್ರಸಾದವ ಪಡೆದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮಪ್ರಸಾದಿಗಳು.
ಶಮೆ ದಮೆ ವಿವೇಕ ವೈರಾಗ್ಯ ಪರಿಪೂರ್ಣಭಾವ ಶಾಂತಿ ಕಾರುಣ್ಯ ಶ್ರದ್ಧೆ ಸತ್ಯ ಸದ್ಭಕ್ತಿ ಶಿವಜ್ಞಾನ ಶಿವಾನಂದ ಉದಯವಾದ ಮಹಾಭಕ್ತನ ಹೃದಯದಲ್ಲಿ ಶಿವನಿಪ್ಪ. ಆತನ ದರ್ಶನ ಸ್ಪರ್ಶನ ಸಂಭಾಷಣೆಯಿಂದ ಕೇವಲ ಮುಕ್ತಿಯುಪ್ಪುದು ತಪ್ಪದಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ಶಿವಜ್ಞಾನೋದಯವಾದ ಭಕ್ತನ ಪೂರ್ವಾಶ್ರಯವಳಿದು ಭಕ್ತನಾಗಬೇಕೆಂಬಿರಿ. ಭವಿಗೆ ಪೂರ್ವಾಶ್ರಯವಲ್ಲದೆ ಭಕ್ತಂಗೆ ಪೂರ್ವಾಶ್ರಯವುಂಟೆ? ಇಲ್ಲವಾಗಿ. ``ಅಜ್ಞಾನಂ ಪೂರ್ವಮಿತ್ಯಾಕಹುರ್ಭವೋSನಾದಿಸ್ಥಲಾಶ್ರಯಃ| ಸರ್ವಂ ನಿರಸಿತವ್ಯಂ ಚ ಪ್ರಯತ್ನೇನ ವಿಪಶ್ಚಿತಾ' ಎಂದುದಾಗಿ, ಮಲ ಮಾಯಾ ಸಂಸಾರದಲ್ಲಿ ಮರಳಿ ಮರಳಿ ಬಪ್ಪಾತನೆ ಭವಿ. ಸಂಸಾರವಳಿದು, ನಿಜವುಳಿದು ಗುರು ಲಿಂಗ ಜಂಗಮಕ್ಕೆ ಮಾಡುವ ಭಕ್ತಂಗೆ ಭವವಿಲ್ಲ. ಆತನು ಜೀವನ್ಮುಕನಾಗಿಹನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ಶಿವನ ಶಿವಪ್ರಸಾದಿಯ ಉಭಯಸಂಬಂಧ ಸಹಭೋಗವೆಂತೆಂದೊಡೆ: ಶಿವ ತನ್ನ ನೇತ್ರಂಗಳನು ಪ್ರಸಾದಿಯ ನೇತ್ರದಲ್ಲಿ ಕೂಡಿ ರೂಪವನರಿವನು. ಶಿವ ತನ್ನ ಶ್ರೋತ್ರಂಗಳನು ಪ್ರಸಾದಿಯ ಶ್ರೋತ್ರದಲ್ಲಿ ಕೂಡಿ ಶಬ್ದವನರಿವನು. ಶಿವ ತನ್ನ ಘ್ರಾಣವನು ಪ್ರಸಾದಿಯ ಘ್ರಾಣದಲ್ಲಿ ಕೂಡಿ ಗಂಧವನರಿವನು. ಶಿವ ತನ್ನ ಜಿಹ್ವೆಯನು ಪ್ರಸಾದಿಯ ಜಿಹ್ವೆಯಲ್ಲಿ ಕೂಡಿ ರಸವನರಿವನು. ಶಿವ ತನ್ನ ಅಂಗವನು ಪ್ರಸಾದಿಯ ಅಂಗದಲ್ಲಿ ಕೂಡಿ ಸ್ಪರ್ಶವನರಿವನು. ಶಿವ ತಾನು ಬೇರೆ ಭೋಗಿಸಲೊಲ್ಲದೆ, ಪ್ರಸಾದಿಯ ಹೊಕ್ಕು ಭೋಗಿಸುವನಾಗಿ, ಸೋಹಂ ಎನ್ನದೆ ದೈತಾದ್ವೆತವ ಮೀರಿದ ಪ್ರಸಾದಿ ಸಂಗನಬಸವಣ್ಣನ ಸುಖಾತಿಶಯವನೇನೆಂದುಪಮಿಸುವೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ಶಿರ ಮುಖ ಹೃದಯ ಪಾದ ಬಾಹುಗಳೆಲ್ಲ ಶಿವನ ಅವಯವಂಗಳಾದವು. ಶ್ರೋತ್ರ ತ್ವಕ್ ನೇತ್ರ ಜಿಹ್ವೆ ಘ್ರಾಣವೆಂಬವೆಲ್ಲ ಶಿವನ ಇಂದ್ರಿಯಂಗಳಾದವು. ಮನ ಬುದ್ಧಿ ಚಿತ್ತ ಅಹಂಕಾರಗಳೆಲ್ಲಾ ಶಿವನ ಕರಣಂಗಳಾದವು. ಪ್ರಾಣ ಅಪಾನ ವ್ಯಾನ ಉದಾನ ಸಮಾನ ಎಂಬವುಗಳಲ್ಲಿ ಶಿವನ ಚೈತನ್ಯವಿದ್ದುದಾಗಿ ಒಳಗಿದ್ದ ಚೇತನವು ನೀವೇ. ಒಳಗೆ ನೀವು, ಹೊರಗೆ ನೀವು:ನಾನೆಂಬುದಿಲ್ಲ. ನಾನೇನ ಮಾಡಿತ್ತೆಲ್ಲಾ ನಿಮ್ಮ ವಿನೋದ. ಎನ್ನ ಸರ್ವ ಭೋಗವೆಲ್ಲ ನಿಮ್ಮ ಭೋಗವಯ್ಯ. ಕರ್ತೃತ್ವ ನಿಮ್ಮದಾಗಿ, ಎನಗೆ ಕರ್ತೃತ್ವವಿಲ್ಲ. ನಾ ನಿಮ್ಮೊಳಗು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ಶ್ರೀಗುರುಕರುಣವ ಪಡೆಯಲೆಂದು ಹೋದಡೆ, ಗುರುವೆನ್ನ ಕಾಯವ ಶುದ್ಧವ ಮಾಡಿ, ಕಾಯದಲ್ಲಿ ಮಂತ್ರವನಿರಿಸಿ, ಮಂತ್ರಕಾಯನ ಮಾಡಿದನು. ಜೀವವ ಶುದ್ಧವ ಮಾಡಿ, ಜೀವದಲ್ಲಿ ಲಿಂಗವನಿರಿಸಿ, ಲಿಂಗಪ್ರಾಣಿಯ ಮಾಡಿದನು. ಶಿವಮಂತ್ರ ವಾಚ್ಯ ವಾಚಕ ಸಂಬಂಧವಾದ ಕಾರಣ, ಕಾಯವೇ ಜ್ಞಾನಕಾಯವಾಯಿತ್ತು, ಜೀವ ಶಿವನಾಯಿತ್ತು. ಇಂತು ಶ್ರೀಗುರುವಿನ ಕಾರುಣ್ಯದಿಂದ ನಾನು ಬದುಕಿದೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ಶರಣನ ಶರೀರವ ಸೋಂಕಿದ ರವಿ ತನ್ನ ಮಂಡಲವ ಬಿಟ್ಟು ಶಿವಸಾಮೀಪ್ಯವ ಪಡೆಯದಿಪ್ಪನೆ ಅಯ್ಯಾ? ನರಜನ್ಮದಲ್ಲಿ ಹುಟ್ಟಿದವನು ಗುರುಹಸ್ತ ಸೋಂಕಿದ ಬಳಿಕ, ಹರನಾಗದಿಪ್ಪನೆ ಅಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?
ಶ್ರೀ ಗುರುವಿನ ಮಂತ್ರೋಪದೇಶವು ಶಬ್ದ ಪ್ರಸಾದಕ್ಕಾಶ್ರಯವಾಯಿತ್ತು. ಶ್ರೀ ಗುರುವಿನ ಹಸ್ತ ಮಸ್ತಕ ಸಂಯೋಗವು ಸ್ಪರ್ಶನಪ್ರಸಾದಕ್ಕಾಶ್ರಯವಾಯಿತ್ತು. ಶ್ರೀ ಗುರುವಿನ ಕೃಪಾವಲೋಕನವು ಅವಲೋಕನಪ್ರಸಾದಕ್ಕಾಶ್ರಯವಾಯಿತ್ತು. ಶ್ರೀಗುರುವಿನ ನಿರ್ಮಾಲ್ಯ ಗಂಧವು ಸದ್ಗುಣಗಂಧಪ್ರಸಾದಕ್ಕಾಶ್ರಯವಾಯಿತ್ತು. ಇಂತಪ್ಪ ಶ್ರೀಗುರುವಿನ ಪ್ರಸಾದವ ಪಡೆದಾತಂಗೆ ಭವಮಾಲೆಯುಂಟೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.