ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ,
ಅಚ್ಚಪ್ರಸಾದ, ಅರ್ಪಿತಪ್ರಸಾದ, ಸಹಭೋಜನ,
ಆರರಲ್ಲಿ ಅರ್ಪಿತ, ಮೂರರಲ್ಲಿ ಮುಕ್ತವೆಂದು
ಊರೆಲ್ಲರ ಮುಂದೆ ದೂರಿಯಾಡುವ ನಾಯಿಮನುಜರಿರಾ,
ಹೀಗೇಕೆ ದೂರುವಿರಿ?
ಗುರುವೆಷ್ಟು, ಲಿಂಗವೆಷ್ಟು, ಜಂಗಮವೆಷ್ಟು, ಪ್ರಸಾದವೆಷ್ಟು, ಅರ್ಪಿತವೆಷ್ಟು?
ಇದರ ಅವಧಾನವನರಿದ ಶರಣಂಗೆ, ಒಂದಲ್ಲದೆ ಎರಡುಂಟೆ?
ಅವು ಒಂದೆಂಬುವನಕ ಬಂಧನವು.
ತತ್ವಾರ್ಥಕ್ಕೆ ಇದಿರಿಟ್ಟುಕೊಂಡಿಪ್ಪನಲ್ಲದೆ,
ಅರಿದ ಶರಣಂಗೆ ಒಂದೆಂಬುದು ಸಂದೇಹ.
ಈ ರೀತಿಯನರಿಯದೆ ತೂತುಬಾಯೊಳಗೆ ಮಾತಿಗೆ ತಂದು
ನುಡಿದಾಡುವ ಪಾತಕರ ಮೆಚ್ಚುವನೆ,
ನಮ್ಮ ಶರಣ ಬಸವಪ್ರಿಯ ಕೂಡಲಚೆನ್ನಬಸವಣ್ಣ ?