ಲಿಂಗಪೂಜೆಯ ಮಾಡುತ್ತ ತಮ್ಮಂಗ ಸುಖದ ಸಲುವಾಗಿ
ಹಂಪೆಯ ಕಂಗಳರ ಹಾಗೆ ಕೂಗುತ್ತ , ಅರಚುತ್ತ ,
ಸತಿಸುತರೊಳಗೆ ಹೊಡೆದಾಡುತಿಪ್ಪರಲ್ಲದೆ,
ಆ ಲಿಂಗಕ್ಕೆ ತನಗೆ ಒಡೆಯರಾಗಿದ್ದ ಜಂಗಮ ಬಂದರೆ, ಎತ್ತಲೆಂದರಿಯರು.
ಇಂತಪ್ಪ ಕತ್ತಲೆಮನುಜರು, ಲಿಂಗವ ಕಟ್ಟಿದರೇನು ?
ಜಂಗಮಕಿಕ್ಕಿದರೇನು ? ಗುರುವಿಂಗೆ ಶರಣೆಂದರೇನು ?
ತಮ್ಮ ಮರಣಬಾಧೆಯ ಗೆಲುವನಕ ಹುರುಳಿಲ್ಲ ಹುರುಳಿಲ್ಲ .
ಮಾಡಿದ ಭಕ್ತಿ , ಅತ್ತಿಯ ಹಣ್ಣ ಬಿಚ್ಚಿದಂತೆ.
ಅವರು ಹೊತ್ತಿಪ್ಪ ವೇಷ ದೊಡ್ಡದು.
ಎಮ್ಮ ಸಮಯ ನಾನದನರಿದು, ನಿಮ್ಮಲ್ಲಿ ನಿರ್ಮುಕ್ತನಾದ ಬಳಿಕ,
ಈ ಜಗವೇನಾದರೇನಯ್ಯ ಬಸವಪ್ರಿಯ ಕೂಡಲಚೆನ್ನಬಸವಣ್ಣಾ .