ನಮ್ಮಂತುವ ತಿಳಿದು, ನೋಡಿದರೆ ಹೇಳಿಹೆನು.
ಅದೆಂತೆಂದರೆ, ಮೇಲು ಕೀಳಾಯಿತ್ತು, ಕೀಳು ಮೇಲಾಯಿತ್ತು.
ನಿರಾಳ ಆಳವಾಯಿತ್ತು, ಆಳ ನಿರಾಳವಾಯಿತ್ತು.
ಉತ್ತರ ಪೂರ್ವವಾಯಿತ್ತು, ಪೂರ್ವ ಉತ್ತರವಾಯಿತ್ತು,
ಗುರುವು ಶಿಷ್ಯನಾಯಿತ್ತು, ಶಿಷ್ಯ ಗುರುವಾಯಿತ್ತು.
ಅರ್ಪಿತ ಅನರ್ಪಿತವಾಯಿತ್ತು, ಅನರ್ಪಿತ ಅರ್ಪಿತವಾಯಿತ್ತು,
ಇಂತಪ್ಪ ಘನವ ವೇಧಿಸಿ ನುಡಿಯಬಲ್ಲರೆ,
ಆತನೆ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣ.
ನಡೆದುದೆ ಬಟ್ಟೆ, ನುಡಿದುದೆ ತತ್ವ.
ಇಂತಪ್ಪ ಸರ್ವಾಂಗ ಪ್ರಸಾದಿಯ ಪ್ರಸಾದವ ಕೊಂಡು,
ಸರ್ವಾಂಗ ಶುದ್ಧವಾಯಿತ್ತು.
ನಾ ನಿಮ್ಮ ಪಾದದೊಳು ನಿರ್ಮುಕ್ತನಾಗಿ ಏನೂ ಇಲ್ಲದಂತಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ .