ಹುಸಿಯುಳ್ಳವ ಭಕ್ತನಲ್ಲ, ವಿಷಯವುಳ್ಳವ ಮಾಹೇಶ್ವರನಲ್ಲ,
ಆಸೆಯುಳ್ಳವ ಪ್ರಸಾದಿಯಲ್ಲ, ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ,
ತನುಗುಣವುಳ್ಳವ ಶರಣನಲ್ಲ, ಜನನಮರಣವುಳ್ಳವ ಐಕ್ಯನಲ್ಲ.
ಈ ಆರರ ಅರಿವಿನ ಅರ್ಕದ ಸಂಪತ್ತಿನ ಭೋಗ ಹಿಂಗಿದಡೆ
ಸ್ವಯಂ ಜಾತನೆಂಬೆ._ಆ ದೇಹ ನಿಜದೇಹವೆಂಬೆ
ಆ ನಿಜದೇಹ ಇರಿದರರಿಯದು, ತರಿದರರಿಯದು, ಹೊಯ್ದರರಿಯದು,
ಬಯ್ದರರಿಯದು, ಸ್ತುತಿಸಿದರರಿಯದು, ನಿಂದಿಸಿದರರಿಯದು,
ಪುಣ್ಯವನರಿಯದು, ಪಾಪವನರಿಯದು, ಸುಖವನರಿಯದು
ದುಃಖವನರಿಯದು, ಕಾಲವನರಿಯದು, ಕರ್ಮವನರಿಯದು
ಜನನವನರಿಯದು, ಮರಣವನರಿಯದು_
ಇಂತೀ ಷಡುಸ್ಥಲದೊಳಗೆ ತಾ ಒಂದು ನಿಜವಿಲ್ಲವಾಗಿ
ನಾವು ಹಿರಿಯರು ನಾವು ಗುರುಗಳು
ನಾವು ಸಕಲಶಾಸ್ತ್ರಸಂಪನ್ನ ಷಡುಸ್ಥಲದ ಜ್ಞಾನಿಗಳು
ಎಂಬ ಮೂಕೊರೆಯರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
ಕುತ್ತಗೆಯುದ್ದ ಹೂಳಿಸಿಕೊಂಡು ಮುಗಿಲುದ್ದಕ್ಕೆ ಹಾರಲುಂಟೆ ?