ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಡೆಯರು ದೇವರಿಗೆ ಕೊಟ್ಟಲ್ಲದೆ, ಕೊಳ್ಳೆನೆಂಬ ಮೃಡನ ಭಕ್ತರ ನೋಡಾ. ಒಡೆಯರಿಗೊಂದು ಪರಿ, ತನಗೊಂದು ಪರಿ ಮಾಡುವ ಸಡಗರವ ನೋಡಾ. ಒಡೆಯಂಗೆ ಭೆಟ್ಟಿ, ಮನೆಯೊಡಯಂಗೆ ತುಪ್ಪ ಕಟ್ಟು ಮೊಸರು ಮೃಷ್ಟಾನ್ನ. ಒಡೆಯರಿಗೆ ಕುರುಹ ತೋರಿ, ತಾ ಹಿರಿದಾಗಿ ಉಂಬ ಕಡುಗಲಿಯ ನೋಡಾ. ಇವರಡಿಯಲ್ಲಿ ಬಂದಡೆ, ಇವರನೊಡಗೂಡಿ ನುಡಿದೆನಾದಡೆ, ಜೇನಗಡಿಗೆಯಲ್ಲಿ ಬಿದ್ದ ಗುದಿಮಕ್ಷಿಕನಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಪ್ಪದ ಕಪ್ಪೆ ಸರ್ಪನ ನುಂಗಿತ್ತ ಕಂಡೆ. ತುಪ್ಪುಳು ಬಾರದ ಮರಿ ಹೆತ್ತ ತಾಯ ನುಂಗಿತ್ತ ಕಂಡೆ. ಕೊಂಬಿನ ಮೇಲಣ ಕೋಡಗ ಕೊಂಬ ನುಂಗಿತ್ತ ನೋಡಾ. ಬೀಸಿದ ಬಲೆಯ ಮತ್ಸ್ಯ ಗ್ರಾಸವ ಕೊಂಡಿತ್ತು ನೋಡಾ. ಅರಿದೆಹೆನೆಂಬ ಅರಿವ, ಮರೆದೆಹೆನೆಂಬ ಮರವೆಯ ಕಳೆದುಳಿದ ಪರಿಯಿನ್ನೆಂತೊ ? ಅರಿವುದೆ ಮರವೆ, ಮರೆವುದೆ ಅರಿವು. ಅರಿವು ಮರವೆ ಉಳ್ಳನ್ನಕ್ಕ ಕುರಿತು ಮಾಡುವುದೇನು ? ಕುರುಹಿಂಗೆ ನಷ್ಟ, ಆ ಕುರುಹಿನಲ್ಲಿ ಅರಿದೆಹೆನೆಂಬ ಅರಿವು ತಾನೆ ಭ್ರಮೆ. ಆರೆಂಬುದ ತಿಳಿದಲ್ಲಿ, ಕೂಡಿದ ಕೂಟಕ್ಕೆ ಒಳಗಲ್ಲ ಹೊರಗಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಂದು ಪಕ್ಷಿಗೆ ಐದು ತಲೆ, ಶಿರವೊಂದರಲ್ಲಿಯೆ ಮೂಡಿತ್ತು ನೋಡಾ. ಒಡಲು ಒಂದಾಯಿತ್ತು, ಬಣ್ಣ ಹದಿನಾರಾಯಿತ್ತು. ಅದರ ಚಂದ ಇಪ್ಪತ್ತೈದಾಯಿತ್ತು, ಹುಟ್ಟಿದ ಗರಿ ನೂರೊಂದಾಯಿತ್ತು. ಆ ಹಕ್ಕಿಯ ಜೀವವಿದ್ದಂತೆ ಕೊಂದು, ಸುಡದ ಬೆಂಕಿಯಲ್ಲಿ ಸುಟ್ಟು, ತಲೆಯಿಲ್ಲದ ಕಣ್ಣಿನಲ್ಲಿ ನೋಡಿ, ಬಾಯಿಲ್ಲದ ನಾಲಗೆಯಲ್ಲಿ ಸವಿದು, ಸವಿವುದಕ್ಕೆ ಮೊದಲೆ ರುಚಿಯನರ್ಪಿತವ ಮಾಡಿದ ಜ್ಞಾನಜಂಗಮವ ನೋಡಾ. ಆತನ ಇರವು ತುರುಬೊ? ಜಡೆಯೊ? ಅರಿಯಬಾರದಣ್ಣಾ. ಎಣ್ಣೆ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮಕೊಂಡ ಗಂಧದಂತೆ, ರಸ ಕೊಂಡ ಪಾಷಾಣದಂತೆ, ಹೆಸರಿಡಬಾರದಯ್ಯಾ, ಆ ಜಂಗಮದಿರವ. ಆ ಜಂಗಮ ಬಂದು ಎನ್ನ ಹುಳ್ಳಿಯಂ ಬಿಡಿಸಿ, ತಳ್ಳಿಯಂ ಹರಿದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ತಲ್ಲೀಯವಾದ.
--------------
ಮೋಳಿಗೆ ಮಾರಯ್ಯ
ಒಂದು ಬೀಜವ ಬಿತ್ತಿದಡೆ ಮೂರುಫಲವಾಯಿತ್ತು. ಆ ಫಲ ಬಲಿದು ಬೆಳೆದ ಮತ್ತೆ, ಒಂದ ಉದಯದಲ್ಲಿ ಕೊಯ್ದೆ, ಒಂದ ಮಧ್ಯಾಹ್ನದಲ್ಲಿ ಕೊಯ್ದೆ, ಒಂದ ಹೊತ್ತು ಸಂದ ಮತ್ತೆ ಕೊಯ್ದೆ. ಈ ಮೂರರೆಯನೊಂದು ಮಾಡಿ ಮೆಟ್ಟಿಸಿದೆ. ಭಕ್ತಿಜ್ಞಾನವೈರಾಗ್ಯವೆಂಬ ಎತ್ತಿನ ಕೈಯಲ್ಲಿ ತೂರಿದೆ ಕೊಂಗವನೆತ್ತಿ ಅಂಗವೆಂಬ ಹೊಳ್ಳು ಹಾರಿತ್ತು. ಸಂಸಾರವೆಂಬ ಚೊಳ್ಳು ನಿತ್ಯಾನಿತ್ಯ ವಿವೇಕವೆಂಬ ಕೊಳಗವ ಹಿಡಿದಳೆಯಲಾಗಿ, ನೂರೊಂದು ಕೊಳಗವಾಯಿತ್ತು. ಹೆಡಗೆಗೆ ಅಳವಡಿಸುವಾಗ ಐವತ್ತೊಂದು ಕೊಳಗವಾಯಿತ್ತು. ನಡುಮನೆಯಲ್ಲಿ ಸುರಿವಾಗ ಇಪ್ಪತ್ತೈದು ಕೊಳಗವಾಯಿತ್ತು. ಪಡುವಣ ಕೋಣೆಯಲ್ಲಿ ಮಡಗಿರಿಸುವಾಗ, ಪಡಿಯ ನೋಡಲಾಗಿ ಐಗಳವಾಯಿತ್ತು. ಅದು ಬಿಡುಬಿಸಿಲಿನಲ್ಲಿ ಒಣಗೆ, ಅದು ಪಡಿಪುಚ್ಚಕ್ಕೆ ಮೂಗಳವಾಯಿತ್ತು. ಆ ಮೂಗಳವ ನಡುಮೊರದಲ್ಲಿ ಸುರಿಯೆ, ಪಡಿಗಣಿಸುವಾಗ ಒಕ್ಕುಳವಾಯಿತ್ತು. ಈ ಒಕ್ಕುಳವ ಕುಟ್ಟಿ, ಮಿಕ್ಕುದ ಕೇರೆ ಮತ್ತೆ ಒಬ್ಬಳವಾಯಿತ್ತು. ಒಬ್ಬಳವ ಕುಡಿಕೆಯಲ್ಲಿ ಹೊಯ್ದು ನಿರುತದಿಂ ನೋಡೆ, ಮೂರು ಮಾನವ ನುಂಗಿ, ಒಂದು ಮಾನವಾಯಿತ್ತು. ಒಂದು ಮಾನವನಟ್ಟು ಕುಡಿಕೆಯಲ್ಲಿ ಕುಸುರೆ ಕೂಳೊಡೆದು ಬಾಲಗೋಗರವಾಯಿತ್ತು. ಉಂಡವರತ್ತ, ನಾನಿತ್ತ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಂದು ಶಿಲೆಯೊಡೆದು ಮೂರಾದ ಭೇದವ ನೋಡಾ. ಒಂದು ಶಿಲೆ, ಶೂಲ ಕಪಾಲ ಡಿಂಡಿಮ ರುಂಡಮಾಲೆ ಐದು ತಲೆ, ತಲೆಯೊಳಗೊಬ್ಬಳು, ತೊಡೆಯೊಳಗೊಬ್ಬಳು. ಇಂತೀ ಕಡುಗಲಿಯ ದೇವನೆಂಬರು ನೋಡಾ. ಎನ್ನ ದೇವಂಗೈದು ಮುಖವಿಲ್ಲ, ಈರೈದು ಭುಜವಿಲ್ಲ. ಎನ್ನ ದೇವಂಗೆ ತೊಡೆಮುಡಿಯೊಳಾರನೂ ಕಾಣೆ. [ಹಿಡಿ]ವುದಕ್ಕೆ ಕೈದಿಲ್ಲ, ಕೊಡುವುದಕ್ಕೆ ವರವಿಲ್ಲ. ತೊಡುವುದಕ್ಕಾಭರಣವಿಲ್ಲ, ಒಡಗೂಡುವುದಕ್ಕೆಪುರುಷ[ನಿಲ್ಲ]. ತನಗೆ ಮತಿಯಿಲ್ಲ, ತನ್ನನರಿವವರಿಗೆ ಗತಿಯಿಲ್ಲ. ಗತಿಯಿಲ್ಲವಾಗಿ ಶ್ರುತಿಯಿಲ್ಲ, ಶ್ರುತಿಯಿಲ್ಲವಾಗಿ ನಾದವಿಲ್ಲ. ನಾದವಿಲ್ಲಾಗಿ ಬಿಂದುವಿಲ್ಲ, ಬಿಂದುವಿಲ್ಲವಾಗಿ ಕಳೆಯಿಲ್ಲ. ಇಂತಿವೆಲ್ಲವೂ ಇಲ್ಲವಾಗಿ ಹೊದ್ದಲಿಲ್ಲ, ಹೊದ್ದಲಿಲ್ಲವಾಗಿ ಸಂದಿಲ್ಲ, ಸಂದಿಲ್ಲವಾಗಿ ಸಂದೇಹವಿಲ್ಲ. ನಿಃಕಳಂಕ ಮಲ್ಲಿಕಾರ್ಜುನನಲ್ಲದೆ ಎಲ್ಲಿಯೂ ಕಾಣೆ.
--------------
ಮೋಳಿಗೆ ಮಾರಯ್ಯ
ಒಡೆಯರ ಕಟ್ಟಳೆಯಾದ ಮತ್ತೆ, ಒಡಗೂಡಿ ಸಹಪಂಙÂ್ತಯಲ್ಲಿ ಮೃಡಶರಣನ ಪ್ರಸಾದವ ಕೊಳಲೊಲ್ಲದೆ, ತುಡುಗುಣಿನಾಯಂತೆ ತೊಗಲಗಡಿಗೆಯ ತುಂಬುವ, ಗುರುಪಾತಕರಿಗೆಲ್ಲಿಯದೊ ಒಡೆಯರ ಕಟ್ಟಳೆ? ಒಡೆಯನ ನಿರೀಕ್ಷಣೆಯಲ್ಲಿ ಸರಿಗದ್ದುಗೆಯನೊಲ್ಲದೆ, ಒಡೆಯಂಗೆ ಮನೋಹರವಾಗಿ ಸಡಗರಿಸಿ ಸಮರ್ಪಿಸಿದ ಮತ್ತೆ, ತನ್ನೊಳಗಿಪ್ಪ ಆತ್ಮಂಗೆ ತೃಪ್ತಿ, ಕೂರ್ಮನ ಶಿಶುವಿನ ಸ್ನೇಹದಂತೆ. ಹೀಂಗಲ್ಲದೆ ಭಕ್ತಿ ಸಲ್ಲ. ಎನಗೆ ಪರಸೇವೆ ಪರಾಙ್ಮುಖವೆಂದು, ಒಡೆಯರಿಗೆ ಎಡೆಮಾಡೆಂದು ಎನಗೆ ತಳುವೆಂದಡೆ, ಒಪ್ಪುವರೆ ನಿಜಶರಣರು? ಸತಿ ಕೋಣೆಯಲ್ಲಿದ್ದು, ಪತಿ ನಡುಮನೆಯಲ್ಲಿದ್ದಡೆ ರತಿಕೂಟವುಂಟೆ? ಇದರ ಗಸಣೆಗಂಜಿ, ವಿಶೇಷವನರಿಯದ ಪಶುಗಳಿಗೆಲ್ಲಿಯೂ, [ಐಕ್ಯಾನುಭಾವ], ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಒಂದ ಕಂಡು ಒಂದನರಿದೆಹೆನೆಂಬನ್ನಕ್ಕ, ಸಂದೇಹಪದದಲ್ಲಿ ಅರಿವುದಿನ್ನೇನೋ? ಒಂದನರಿತು, ಒಂದ ಮರೆತು, ಬೇರೊಂದ ಕಂಡಹೆನೆನುವ ಒಡಲದೇನೋ? ಆ ದ್ವಂದ್ವವಳಿದು, ನಿಂದ ನಿಜವೆ ಸಂದೇಹಕ್ಕೆ ಒಡಲಿಲ್ಲ ನಿಂದುದು, ಷಡುಸ್ಥಲಭರಿತ ಪರಿಪೂರ್ಣ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಡಲಿಲ್ಲದ ಭಕ್ತಂಗೆ ನಿರ್ಜೀವಿ ಜಂಗಮ ಸುಳಿದ ನೋಡಯ್ಯಾ. ಆ ಜಂಗಮ ಸುಳಿದಡೆ, ಆ ಭಕ್ತನೋಡಲು ತುಂಬಿ ಜೀವವಾಯಿತ್ತು. ಆ ಜಂಗಮದ ಭೇದವನರಿಯಲಾಗಿ, ಆ ಜೀವವಳಿದು, ನೀ ನಾನೆಂಬ ಭಾವಕ್ಕೆ ನೆಲೆಯಾಯಿತ್ತು. ಆ ಜಂಗಮದ ಕಳಾಪರಿಪೂರ್ಣವನರಿಯಲಾಗಿ, ಆ ಭಾವ ಮಹತ್ವವನೊಳಕೊಂಡಿತ್ತಯ್ಯಾ. ಆ ಒಳಕೊಂಡ ಮಹತ್ವವೆ ಮಹದೊಡಗೂಡಿ ಹೋಯಿತ್ತು. ಹೋದ ಮತ್ತೆ ನಾ ನೀನೆಂಬುದಿಲ್ಲ. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಳಲೆಯಲಟ್ಟಿದ ಹಾಲು, ಆ ಮಗುವಿನ ತಳದ ಏಣಲೆ ಕುಡಿಯಿತ್ತು. ಬೆಟ್ಟಿನಲ್ಲಿಕ್ಕಿದ ತುಪ್ಪವ, ಆ ಮಗುವಿನ ಪಿಟ್ಟವೆ ತಿಂದಿತ್ತು. ಬೆಣ್ಣೆಯ ಮಡಕೆಯ ನೊಣ ನುಂಗಿತ್ತು. ನುಂಗಿದ ನೊಣದ ಹಿಂದೆ ಹಿಡಿಯಲಾಗಿ, ಉಗುಳದು ಬೆಣ್ಣೆಯ, ಕೊಡದು ಮಡಕೆಯ ಇದರಗಡುತನವ ನೋಡಾ, ಅದ ಹಿಡಿದು ಕೊಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಡಗೂಡಿಪ್ಪ ಲಿಂಗವನರಿಯದೆ ಅಡಿಯಿಟ್ಟು, ಪೊಡವಿಯೊಳಗಣ ಅಡವಿ ಗಿಡುಗಳಲ್ಲಿಪ್ಪ ಮೃಡಾಲಯಮಂ ಕಂಡು, ಪೊಕ್ಕು ಸಡಗರಿಸಿಕೊಂಡು ವರವ ಹಡೆವೆನೆಂದು ಬೇಡುವುದು ಕುರಿತು, ಅದು ಜರಿದು ಬೀಳೆ, ಕೊಟ್ಟ [ನೆ]ರವನೆಂದು ನಿಶ್ಚಯ ಮಾಡಿದ ಮತ್ತೆ, ಸಾವರ ಕಂಡು ಅಚ್ಚುಗಬಡುತ್ತಿದ್ದೇನೆ. ಇವರಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಒಡಲಿಲ್ಲದೆ ಆತ್ಮನಿರಬಲ್ಲುದೆ? ಕ್ರೀಯಿಲ್ಲದೆ ಸತ್ಯ ನಿಲಬಲ್ಲುದೆ? ಭಾವವಿಲ್ಲದೆ ವಸ್ತು ಈಡಪ್ಪುದೆ? ಒಂದರಾಸೆಯಲ್ಲಿ ಒಂದ ಕಂಡು, ದ್ವಂದ್ವನೊಂದು ಮಾಡಿ, ಒಂದೆಂಬುದನರಿತು, ಪ್ರಾಣಕ್ಕೆ ಸಂಬಂಧವ ಮಾಡಿ, ಕೂಡಿಯಿದ್ದುದು ಪ್ರಾಣಲಿಂಗ. ಆ ಉಭಯದ ಸಂದಳಿದುದು, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಂದು ಮೂರಾದ ಭೇದವ, ಮೂರು ಆರಾದ ಭೇದವ, ಆರು ಇಪ್ಪತ್ತೈದಾದ ಭೇದವ, ಇಪ್ಪತ್ತೈದು ನೂರೊಂದಾದ ಭೇದವ, ಒಂದನರಿಯದ ಯೋಗಿಗಳ ಪಾಶವನಳೆವ ತೆರದಂತೆ, ಆ ನೂರೊಂದು ಇಪ್ಪತ್ತೈದರಲ್ಲಿ ಅಡಗಿತ್ತು. ಆ ಇಪ್ಪತ್ತೈದು ಆರರಲ್ಲಿ ಅಡಗಿತ್ತು. ಆ ಆರು ಮೂರರಲ್ಲಿ ಅಡಗಿತ್ತು, ಆ ಮೂರು ಒಂದರಲ್ಲಿ ಸಂದಿತ್ತು. ಆ ಒಂದು ಸಂದೇಹವಳಿಯಿತ್ತು. ಇದರಂದವನಾರು ಬಲ್ಲರಯ್ಯಾ? ಸಂದೇಹದಲ್ಲಿ ಬಿದ್ದು, ಲಿಂಗವನರಿಯದೆ ಭಂಗಿತರಾದರಯ್ಯಾ, ಆಗಮಕ್ಕತೀತ ಆನಂದ ದಾವಾನಲ, [ಭ]ವರಹಿತ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು, ಹೊಲಬುದಪ್ಪಿ ನುಡಿದವರ ನೋಡಾ. ವಾಯು ಒಂದಲ್ಲದೆ ಶತವಾಯುವಿಲ್ಲೆಂದೆ, ಇಂದ್ರಿಯ ಒಂದಲ್ಲದೆ ಐದಿಲ್ಲವೆಂದೆ. ಕರಣ ಒಂದಲ್ಲದೆ ನಾಲ್ಕಿಲ್ಲವೆಂದೆ, ಮದ ಒಂದಲ್ಲದೆ ಎಂಟಿಲ್ಲವೆಂದು. ವ್ಯಸನ ಒಂದಲ್ಲವೆ ಏಳಿಲ್ಲವೆಂದೆ, ಆಧಾರ ಒಂದಲ್ಲದೆ ಷಡಾಧಾರವಿಲ್ಲವೆಂದೆ. ಒಂದು ಬೀಜದಲ್ಲಿ ಅದ ಹಣ್ಣಿನ ರುಚಿಗೆ, ನಾನಾ ಫಲದ ರಸದ ರುಚಿ ಉಂಟೆ? ಆ ಬೀಜ ಮೊಳೆತಲ್ಲಿ ಏಕರೂಪವಾಗಿ ತಲೆದೋರಿತ್ತು. ಬಲಿದು ಮತ್ತೆ ಹಲವುರೂಪಾಗಿ ಪಲ್ಲವಿಸಿತ್ತು. ನೆಲೆಯ ಕಡಿದ ಮತ್ತೆ ರೂಪೆಲ್ಲ ನೆಲೆಯೊಳಡಗಿದವು. ಸೆಲೆಸಂದ ಹೊನ್ನಿಂಗೆ ಒಟ್ಟವುಂಟೆ? ಬಲುಹು ಮುರಿದವಂಗೆ ರಣದ ಸುದ್ದಿಯೇಕೋ? ಜಲದಲ್ಲಿ ಮುಳುಗಿದವಂಗೆ ಇಳೆಯವರ ಸುದ್ದೀಯೇಕೋ? ಇದು ಕಾರಣ, ನಾನಾ ವರ್ಣದ ಹೇಮವ ಭಾವಿಸಿ, ಒಂದರಲ್ಲಿ ಕಡೆಗಾಣಿಸಿದ ಮತ್ತೆ ಭಾವನೆಯ ಬಣ್ಣ ಒಂದಲ್ಲದೆ ಮತ್ತೆ ಭಾವಿಸಲಿಲ್ಲವಾಗಿ, ಅರಿದಲ್ಲಿ ಜ್ಞಾನ, ಮರೆದಲ್ಲಿ ಅಜ್ಞಾನ, ನಾನಾರೆಂಬುದನರಿದಲ್ಲಿಯೆ ಒಂದು ಗುಣ ನಿಂದಿತ್ತು. ತನ್ನ ಮರೆದಲ್ಲಿಯೆ ನಾನಾ ಸಂಚಲನವಾಯಿತ್ತು, ಇದಕ್ಕಿದೇ ದೃಷ್ಟ. ದೇಹವಿಡಿದುದಕ್ಕೆರಡಿಲ್ಲದೆ ಮೀರಲಿಲ್ಲವಾಗಿ, ಜಗವನರಿವುದಕ್ಕೆ ದಿವರಾತ್ರಿಯದೆ ಮೀರಿ ತೋರಲಿಲ್ಲವಾಗಿ, ಸಂಸಾರ ಹರಿವುದಕ್ಕೆ ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲವಾಗಿ.
--------------
ಮೋಳಿಗೆ ಮಾರಯ್ಯ
ಒಂದು ಬಾಲೆ ಕಂದನ ಹೊತ್ತು ಬಂದಿತ್ತು. ಕಂದ ಹುಟ್ಟಿ, ಎಡದ ಕೈಯಲ್ಲಿ ಗಡಿಗೆ, ಬಲದ ಕೈಯಲ್ಲಿ ಕಟ್ಟಿಗೆ. ಮಂಡೆಯ ಮೇಲೆ ಕಿಚ್ಚು ಸಹಿತವಾಗಿ ಅಟ್ಟುಂಬುದಕ್ಕೆ ನೆಲಹೊಲನ ಕಾಣದೆ, ತಿಟ್ಟನೆ ತಿರುಗಿ, ಗಟ್ಟದ ಒತ್ತಿನಲ್ಲಿ, ಕಟ್ಟಕಡೆಯಲ್ಲಿ, ಒಂದು ಬಟ್ಟಬಯಲು ಮಾಳವಿದ್ದಿತ್ತು. ಕೈಯಕಂದನನಿರಿಸಿ ಕಟ್ಟಿಗೆಯ ಹೊರೆಯ ಕಟ್ಟ ಬಿಟ್ಟು, ಮಸ್ತಕದ ಬೆಂಕಿಯ ಕಟ್ಟಿಗೆಯ ಒತ್ತಿನಲ್ಲಿರಿಸಿ, [ಒತ್ತಿನ ಕಾಲ] ಕಾಣದೆ ಹೊಲಬುದಪ್ಪಿ, ಆ ಹೊಲದೊಳಗೆ ತಿರುಗಿನೋಡಿ, ಪಶ್ಚಿಮದಲ್ಲಿ ಕಂಡ ಪಚ್ಚೆಯ ಕಲ್ಲ, ಉತ್ತರದಲ್ಲಿ ಕಂಡ ಪುಷ್ಕರದಲ್ಲಿ ಕಲ್ಲ, ಪೂರ್ವದಲ್ಲಿ ಕಂಡ ಬಿಳಿಯಕಲ್ಲ ಮೂರೂ ಕೂಡಿ, ಮಡಕೆಯ ಮಂಡೆಯ ಮೇಲಿರಿಸಲಾಗಿ, ಕಂಡಿತ್ತು ಕಲ್ಲಿನ ಇರವ. ಉದಕವನರಸಿ ಅ[ಳಲು] ತ್ತಿರ್ದಿತ್ತು [ಬೆಂಕಿ.ಆ] ಬೆಂಕಿ ಬೇಗೆಗಾರದೆ, ಉದಕ ಒಡೆದು ಮಡಕೆ ನಿಂದಿತ್ತು. ನಿಂದ ಮಡಕೆಯ ಅಂಗವ ಕಂಡು, ಇದರ ಹಂಗೇನೆಂದು ಕೈ ಬಿಡಲಾಗಿ, ಮಡಕೆಯಡಗಿತ್ತು ಮೂರುಕಲ್ಲಿನ ಮಧ್ಯದಲ್ಲಿ ಕಟ್ಟಿಗೆ ಸುಟ್ಟ [ವನ] ಮಕ್ಕಳುಂಡರು ಮಿಕ್ಕವರೆಲ್ಲಾ ಹಸಿದರು. ಹಸಿದವರ ಸಂಗ ಗಸಣೆಗೊಳಿಸಿತ್ತು. ಇಂತೀ ಹುಸಿಯ ದೇಹವ ತೊಟ್ಟು ದೆಸೆಗೆಟ್ಟೆನಯ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ