ಕೋಳು ಹೋದ ಮತ್ತೆ ಕಾಳಗದ ಇರವೇಕೆ ? ಜಾಣನಾದ ಮತ್ತೆ ಕೇಳಲೇಕೆ ಆರುವನು ? ಜ್ಞಾನಿಯಾದ ಮತ್ತೆ ಬಾಳಲೇಕೆ ಭವದಲ್ಲಿ ? ಇದು ವೇಣುವಿನೊಳಗಣ ಕಿಚ್ಚಿನಂತಾಯಿತ್ತು. ಇದಕ್ಕೆ ಜಾಣತನವೆ, ನಿಃಕಳಂಕ ಮಲ್ಲಿಕಾರ್ಜುನಾ.
ಕಂಬಳಿಯ ಹರಿಕಿನಲ್ಲಿ ಛತ್ತೀಸಕೋಟಿದೇವರ್ಕಳೆಲ್ಲರೂ ಸಿಕ್ಕಿ, ಅಳಲುತ್ತ ಬಳಲುತ್ತಲೈದಾರೆ. ಆ ಕಂಬಳಿಯಲ್ಲಿ ಮಹಾರುದ್ರನುದ್ಧರಿಸಿದ. ಮಹಾರುದ್ರನ ಕಪಾಲದಲ್ಲಿ ಇಷ್ಟಾರ್ಥವೆಂಬ ಶಕ್ತಿ ಹುಟ್ಟಿದಳು. ಆ ಶಕ್ತಿಯ ಯೋನಿಕಮಲದಲ್ಲಿ ವಿಷ್ಣು ಹುಟ್ಟಿದ. ವಿಷ್ಣುವಿನ ನಾಬ್ಥಿಕಮಲ ಮಧ್ಯದಲ್ಲಿ ಬ್ರಹ್ಮ ಹುಟ್ಟಿದ. ಬ್ರಹ್ಮನ ಸೃಷ್ಟಿಯಾಂತ ಕೈಯಲ್ಲಿ ಸಕಲಬಹುರೂಪಂಗಳು ಹುಟ್ಟಿದವು. ಆಡುತಿರ್ದರಯ್ಯಾ ಕಂಬಳಿಯ ಹರಿಕಿನ ಮಧ್ಯದಲ್ಲಿ. ಕುರಿ ಸಾಯದು, ಕಂಬಳಿ ಹರಿಯದು. ಇದಕ್ಕಂಜುತಿದ್ದೇನೆ ನಿಃಕಳಂಕ ಮಲ್ಲಿಕಾರ್ಜುನಾ
ಕಾಯದೊಳಗುಂಟೆಂದಡೆ ಕರ್ಮಕಾಂಡಿಯಲ್ಲ. ಜೀವದೊಳಗುಂಟೆಂದಡೆ ನಾನಾ ಯೋನಿಯವನಲ್ಲ. ಭಾವದೊಳಗುಂಟೆಂದಡೆ ನಾನಾ ಪ್ರಕೃತಿಯವನಲ್ಲ. ಅದು ಇದ್ದಿಲು ಶುಭ್ರದ ತೆರ. ಅದು ಹೊದ್ದದಾಗಿ ಬದ್ಧಕತನವಿಲ್ಲೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.